jump to navigation

ಸಂಭೋಗದಿಂದ ಸಮಾಧಿಯೆಡೆಗೆ – ಪ್ರೀತಿಯೆಂದರೇನು? (ಭಾಗ ೧) January 23, 2010

Posted by uniquesupri in ಸಂಭೋಗದಿಂದ ಸಮಾಧಿಯೆಡೆಗೆ.
Tags: , , , ,
2 comments

(ರಜನೀಶರ ಅತಿ ಜನಪ್ರಿಯವಾದ ಉಪನ್ಯಾಸ ಮಾಲಿಕೆಯಾದ ‘ಸಂಭೋಗದಿಂದ ಸಮಾಧಿಯೆಡೆಗೆ’ ಪುಸ್ತಕವಾಗಿ ಪ್ರಕಟಗೊಂಡು ಹೆಸರು ಮಾಡಿತ್ತು. ಸೆಕ್ಸ್ ಗುರು ಎಂಬ ಅಪಖ್ಯಾತಿಗೆ ಒಳಗಾದ ರಜನೀಶ್ ಸೆಕ್ಸ್ ಹಾಗೂ ಪ್ರೀತಿಯ ಬಗ್ಗೆ ಹೊಂದಿದ್ದ ಆಳವಾದ ತಿಳುವಳಿಕೆ ಈ ಉಪನ್ಯಾಸಗಳಲ್ಲಿ ಕಾಣುತ್ತದೆ.)

ಪ್ರೀತಿಯನ್ನನುಭವಿಸುವುದು ಸುಲಭ, ವ್ಯಾಖ್ಯಾನಿಸುವುದು ನಿಜಕ್ಕೂ ಕಷ್ಟ.  ಮೀನಿಗೆ ಸಮುದ್ರ ಎಂದರೇನೆಂದುosho ವ್ಯಾಖ್ಯಾನಿಸಲು ಹೇಳಿ, ಅದು “ಇದೇ ಸಮುದ್ರ. ಸುತ್ತಲು ಇರುವುದೆಲ್ಲಾ ಸಮುದ್ರ. ಅಷ್ಟೇ” ಎಂದು ಸುಮ್ಮನಾಗುತ್ತದೆ. ಸಮುದ್ರವನ್ನು ವ್ಯಾಖ್ಯಾನಿಸು ಎಂದು ಒತ್ತಾಯಿಸಿದರೆ ಸಮಸ್ಯೆ ಕಠಿಣವಾಗುತ್ತದೆ. ಜೀವನದ ಅತಿ ಸುಂದರವಾದ ಸಂಗತಿಗಳನ್ನು ಅನುಭವಿಸಬಹುದು, ಅರಿಯಬಹುದು ಆದರೆ ಅವನ್ನು ವಿವರಿಸುವುದು, ವ್ಯಾಖ್ಯಾನಿಸುವುದು ತೀರಾ ಕಷ್ಟ.

ದುರಂತ ಏನೆಂದರೆ ಮನುಷ್ಯ ಕಳೆದ ನಾಲ್ಕೈದು ಸಾವಿರ ವರ್ಷಗಳಲ್ಲಿ ತಾನು ಆಸ್ಥೆಯಿಂದ ಅನುಭವಿಸಬೇಕಾದ, ಒಳಗಿನಿಂದ ಕಂಡುಕೊಳ್ಳಬೇಕಾದ ಪ್ರೀತಿಯ ಬಗ್ಗೆ ಬರಿದೇ ಮಾತನಾಡಿ ಕಾಲ ತಳ್ಳಿದ್ದಾನೆ. ಪ್ರೀತಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡಲಾಗಿದೆ, ಲೆಕ್ಕವಿಲ್ಲದಷ್ಟು ಹಾಡುಗಳನ್ನು ಹಾಡಲಾಗಿದೆ, ದೇವಸ್ಥಾನಗಳಲ್ಲಿ, ಚರ್ಚುಗಳಲ್ಲಿ ಭಕ್ತಿ ಮಂತ್ರಗಳನ್ನು ನಿರಂತರವಾಗಿ ಪಠಿಸಲಾಗುತ್ತಿದೆ – ಪ್ರೀತಿಯ ಹೆಸರಲ್ಲಿ ಮಾಡದಿರುವ ಕೆಲಸವಾದರೂ ಏನಿದೆ? ಆದರೂ ಮನುಷ್ಯನ ಬದುಕಿನಲ್ಲಿ ಇಂದಿಗೂ ಪ್ರೀತಿಗೆ ಜಾಗವಿಲ್ಲ. ಮಾನವ ಕುಲದ ಶಬ್ಧಭಂಡಾರದ ಆಳಕ್ಕೆ ಶೋಧಿಸಿದರೆ ಪ್ರೀತಿಗಿಂದ ಹುಸಿಯಾದ ಇನ್ನೊಂದು ಪದ ದೊರಕದು.

ಎಲ್ಲಾ ಧರ್ಮಗಳು ಪ್ರೀತಿಯನ್ನು ಬೋಧಿಸುತ್ತವೆ. ಆದರೆ ಎಲ್ಲೆಡೆಯೂ ಇರುವಂಥ ಪ್ರೀತಿ ಎಂಥದ್ದು? ವಂಶಪಾರ್ಯವಾಗಿ ಬಂದ ದೌರ್ಭಾಗ್ಯದ ಹಾಗಿರುವ ಹುಸಿ ಪ್ರೀತಿ ಮನುಷ್ಯನ ಜೀವನದಲ್ಲಿರಬಹುದಾದ ಉಳಿದೆಲ್ಲಾ ಪ್ರೀತಿಗೆ ಅಡ್ಡಿಯಾಗಿದೆ. ಆದರೆ ಜನರು ಈ ಧಾರ್ಮಿಕ ಮುಖಂಡರನ್ನು ಪ್ರೀತಿಯನ್ನು ಹರಡುವವರು ಎಂದು ಪೂಜಿಸುತ್ತಾರೆ. ವಾಸ್ತವವಾಗಿ ಅವರು ಪ್ರೀತಿಯನ್ನು ಹುಸಿಯಾಗಿಸಿದ್ದಾರೆ. ಪ್ರೀತಿಯ ಎಲ್ಲಾ ಕಾಲುವೆಗಳನ್ನು ಬತ್ತಿಸಿದ್ದಾರೆ. ಇದರಲ್ಲಿ ಪೂರ್ವ ಪಶ್ಚಿಮಗಳೆಂಬ, ಭಾರತ-ಅಮೇರಿಕಾಗಳೆಂಬ ವ್ಯತ್ಯಾಸವಿಲ್ಲ.

ಮನುಷನಲ್ಲಿನ್ನೂ ಪ್ರೀತಿಯ ಹರಿವು ಕಾಣಿಸಿಕೊಂಡಿಲ್ಲ. ಇದಕ್ಕೆ ನಾವು ಮನುಷ್ಯನಿಗೇ ದೋಷವನ್ನು ಆರೋಪಿಸುತ್ತೇವೆ. ಮನುಷ್ಯ ಕೆಟ್ಟು ಹೋಗಿರುವುದಕ್ಕೇ ಆತನಲ್ಲಿ ಪ್ರೀತಿ ಅರಳುತ್ತಿಲ್ಲ. ಆತನ ಜೀವನದಲ್ಲಿ ಪ್ರೀತಿಯ ಒರತೆ ಚಿಮ್ಮುವುದಿಲ್ಲ ಎನ್ನುತ್ತೇವೆ. ಆತನ ಮನಸ್ಸು ವಿಷಯುಕ್ತವಾಗಿದೆ ಎಂದು ದೂಷಿಸುತ್ತೇವೆ. ಮನಸ್ಸು ವಿಷಯುಕ್ತವಲ್ಲ. ದೇವರ ಈ ಸೃಷ್ಟಿಯಲ್ಲಿ ಯಾವುದೂ ವಿಷಯುಕ್ತವಲ್ಲ. ಎಲ್ಲವೂ ಸಿಹಿಯಾದ ಮಕರಂದವೇ. ಈ ಮಕರಂದದ ಬಟ್ಟಲನ್ನು ವಿಷವಾಗಿ ಪರಿವರ್ತಿಸಿಕೊಂಡವನು ಮನುಷ್ಯನೇ. ಈ ಕೃತ್ಯದಲ್ಲಿ ಮುಖ್ಯ ಅಪರಾಧಿಗಳು ಶಿಕ್ಷಕರೆಂದು ಕರೆಯಲ್ಪಡುವವರು, ಮಹಾತ್ಮರು, ಸಂತರೆಂದು ಕರೆಸಿಕೊಳ್ಳುವವರು ಹಾಗೂ ರಾಜಕಾರಣಿಗಳು.

ಈ ಅಂಶವನ್ನು ವಿವರವಾಗಿ ಧ್ಯಾನಿಸಿ. ಈ ರೋಗವನ್ನು ತುರ್ತಾಗಿ ಗುರುತಿಸಿ ನಿವಾರಿಸದಿದ್ದರೆ ಮುಂದೆಂದೂ ಮನುಷ್ಯನ ಬದುಕಿನಲ್ಲಿ ಪ್ರೀತಿಯನ್ನು ಕಾಣುವುದಕ್ಕೆ ಸಾಧ್ಯವಿಲ್ಲ.

ಜಗತ್ತಿನಲ್ಲಿ ಪ್ರೀತಿಯು ಅರಳದಿರುವುದಕ್ಕೆ ಮನುಷ್ಯನೇ ಕಾರಣ ಎನ್ನುವುದನ್ನು ನಾವು ಕುರುಡಾಗಿ ನಂಬಿದ್ದೇವೆ. ಈ ನಮ್ಮ ಕುರುಡು ನಂಬಿಕೆಗೆ ನಾವು ಆಧಾರವಾಗಿ ಬಳಸುವ ಮೂಲಗಳೇ ನಿಜವಾದ ಅಪರಾಧಿಗಳು. ದಾರಿತಪ್ಪಿಸುವ ತತ್ವಗಳನ್ನು ಮತ್ತೆ ಮತ್ತೆ ಹೇಳುತ್ತಿದ್ದರೆ, ಶತಮಾನಗಳ ನಂತರ ಈ ತತ್ವಗಳ ಹಿಂದಿರುವ  ಕುತರ್ಕವನ್ನು ಗುರುತಿಸುವುದಕ್ಕೆ ನಾವು ವಿಫಲರಾಗುತ್ತೇವೆ. ಆಗ ಗೊಂದಲ ಸೃಷ್ಟಿಯಾಗುತ್ತದೆ. ಈ ತತ್ವಗಳು ಅಸಹಜವಾದ, ನೈಸರ್ಗಿಕವಲ್ಲದ ಬದುಕನ್ನು ಬೋಧಿಸುತ್ತವೆ. ಮನುಷ್ಯನಿಗೆ ಎಂದಿಗೂ ಆ ರೀತಿ ಬದುಕಲು ಸಾಧ್ಯವಾಗುವುದಿಲ್ಲ. ಆಗ ಸುಲಭವಾಗಿ ನಾವು ಮನುಷ್ಯನಲ್ಲೇ ದೋಷವಿರಬೇಕು ಎನ್ನುವ ತೀರ್ಮಾನಕ್ಕೆ ಬರುತ್ತೇವೆ.

ಒಂದಾನೊಂದು ಕಾಲದಲ್ಲಿ ಒಬ್ಬ ಬೀಸಣಿಗೆ ಮಾರುವವನಿದ್ದ. ಪ್ರತಿದಿನ ಆತ ರಾಜನ ಅರಮನೆಯ ಮುಂದೆ ಹಾದುಹೋಗುತ್ತಿದ್ದ. ತನ್ನ ಬೀಸಣಿಗೆಗಳು ವಿಶಿಷ್ಟವಾದವು, ಅಪರೂಪವಾದವು. ಇಂತಹ ಬೀಸಣಿಗೆಗಳನ್ನು ಯಾರೂ ಎಲ್ಲೂ ಕಂಡಿರಲು ಸಾಧ್ಯವಿಲ್ಲ ಎಂದು ಕೊಚ್ಚಿಕೊಳ್ಳುತ್ತಿದ್ದ. ಅರಮನೆಯಲ್ಲಿದ್ದ ರಾಜನಿಗೆ ಈ ಬೀಸಣಿಗೆಯವನಲ್ಲಿ ಆಸಕ್ತಿ ಮೂಡಿತ್ತು. ಎಲ್ಲಾ ಬಗೆಯ ಅಪರೂಪದ, ಬೆಲೆಬಾಳುವ ಬೀಸಣಿಗೆಗಳನ್ನು ಆತ ಜಗತ್ತಿನ ಮೂಲೆ ಮೂಲೆಗಳಿಂದ ಸಂಗ್ರಹಿಸಿದ್ದ. ಒಮ್ಮೆ ಆತ ಅರಮನೆಯ ಮೇಲ್ಛಾವಣಿಯಿಂದ ಬಗ್ಗಿ ಈ ವಿಶಿಷ್ಟ ಬೀಸಣಿಕೆಳನ್ನು ನೋಡಿದ. ಅವುಗಳು ಸಾದಾ ಬೀಸಣಿಗೆಗಳಂತೆ ಕಂಡವು. ಮಾರುವವನನ್ನು ಒಳಕ್ಕೆ ಕರೆಸಿಕೊಂಡು ರಾಜ ಕೇಳಿದ, “ಆ ಬೀಸಣಿಗೆಗಳ ವಿಶಿಷ್ಟತೆಯೇನು? ಏನು ಅವುಗಳ ಬೆಲೆ?”

ವ್ಯಾಪಾರಿ ಹೇಳಿದ, “ಮಹಾಪ್ರಭೂ, ದುಬಾರಿಯೇನಲ್ಲ. ಇವುಗಳ ಗುಣಮಟ್ಟಕ್ಕೆ ಹೋಲಿಸಿದರೆ ಬೆಲೆ ಕಡಿಮೆಯೇ. ಬರೀ ನೂರು ರುಪಾಯಿ.”

ರಾಜನಿಗೆ ಆಶ್ಚರ್ಯವಾಯಿತು. “ನೂರು ರುಪಾಯಿಯಾ? ಇದು ನಯಾಪೈಸೆಯ ಬೀಸಣಿಗೆ. ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಸಿಕ್ಕುತ್ತೆ. ಇದಕ್ಕೆ ನೀನು ನೂರು ರುಪಾಯಿ ಹೇಳುವೆಯಾ? ಏನು ವಿಶೇಷತೆ ಇದೆ ಇವುಗಳಲ್ಲಿ?”

“ಗುಣಮಟ್ಟ! ಪ್ರತಿಯೊಂದು ಬೀಸಣಿಗೆಯೂ ನೂರು ವರ್ಷಗಳ ಕಾಲ ಬಾಳಿಕೆ ಬರುತ್ತವೆ.” ವ್ಯಾಪಾರಿ ಉತ್ತರಿಸಿದ.

“ಇವನ್ನು ನೋಡಿದರೆ ಒಂದು ವಾರವೂ ಬಾಳಿಕೆ ಬರುವಂತಿಲ್ಲ. ನನಗೇನು ಮೋಸ ಮಾಡುತ್ತಿರುವೆಯಾ? ರಾಜನೊಂದಿಗೇ ಮೋಸದಾಟ ಆಡುವೆಯಾ?” ರಾಜ ಗುಡುಗಿದ.

“ನನ್ನೊಡೆಯ, ಆ ಧೈರ್ಯ ನಾನು ಮಾಡಬಲ್ಲೆನೆ? ನಾನು ಪ್ರತಿದಿನ ಬೀಸಣಿಗೆ ಮಾರಲು ನಿಮ್ಮರಮನೆಯ ಬಳಿಯೇ ನಡೆದು ಹೋಗುವೆನು. ಬೀಸಣಿಗೆ ಬೆಲೆ ನೂರು ರುಪಾಯಿ, ನೂರು ವರ್ಷ ಇದು ಬಾಳಿಕೆ ಬಾರದಿದ್ದರೆ ನಾನು ಹೊಣೆ. ನಾನು ಬೀದಿಯಲ್ಲೇ ಸಿಕ್ಕುವೆ. ಮೇಲಾಗಿ ನೀವು ಈ ರಾಜ್ಯದ ಒಡೆಯರು ನಿಮ್ಮಿಂದ ತಲೆತಪ್ಪಿಸಿಕೊಂಡು ಬಾಳಲು ಸಾಧ್ಯವೇ?” ವ್ಯಾಪಾರಿ ವಿನಯದಿಂದ ಉತ್ತರಿಸಿದ.

ಆತ ಹೇಳಿದ ಬೆಲೆ ಕೊಟ್ಟು ರಾಜ ಬೀಸಣಿಗೆಯನ್ನು ಖರೀದಿಸಿದ. ವ್ಯಾಪಾರಿಯ ಮಾತಿನಲ್ಲಿ ನಂಬಿಕೆಯಿರದಿದ್ದರೂ ರಾಜನಿಗೆ ಆ ಬೀಸಣಿಗೆಯನ್ನು ಪರೀಕ್ಷಿಸುವ ಕುತೂಹಲವಿತ್ತು. ಯಾವ ಆಧಾರದ ಮೇಲೆ ಈತ ಹೀಗೆ ಭರವಸೆ ನೀಡಬಲ್ಲ ಎಂದು ತಿಳಿಯಬೇಕೆನಿಸಿತ್ತು. ವ್ಯಾಪಾರಿಗೆ ಒಂದು ವಾರ ಕಳೆದು ಬಂದು ನೋಡಲು ತಿಳಿಸಲಾಯ್ತು.

ಮೂರೇ ದಿನದಲ್ಲಿ ಬೀಸಣಿಗೆಯ ಕೇಂದ್ರದಲ್ಲಿದ್ದ ಕಡ್ಡಿ ಮುರಿದುಹೋಯ್ತು. ವಾರ ಕಳೆಯುವಷ್ಟರಲ್ಲಿ ಬೀಸಣಿಗೆ ಸಂಪೂರ್ಣ ಜೀರ್ಣವಾಯ್ತು. ಇನ್ನು ಆ ವ್ಯಾಪಾರಿ ಇತ್ತ ತಲೆ ಹಾಕುವುದಿಲ್ಲ ಎಂದು ರಾಜನಿಗೆ ಖಾತರಿಯಾಯ್ತು. ಆದರೆ ಆತನ ಅಚ್ಚರಿಯಾಗುವಂತೆ ಏಳು ದಿನ ಕಳೆದ ನಂತರ ವ್ಯಾಪಾರಿ ಏನೂ ನಡೆದೇ ಇಲ್ಲ ಎಂಬಂತೆ ಅರಮನೆಗೆ ಬಂದ.

ಆತನನ್ನು ಕಂಡು ರಾಜನಿಗೆ ಕೋಪವೇರಿತು. “ನೀಚ! ಮೂರ್ಖ! ನೋಡಿಲ್ಲಿ ನೀನು ಕೊಟ್ಟ ಬೀಸಣಿಗೆಗೆ ನಾಲ್ಕೇ ದಿನದಲ್ಲಿ ಯಾವ ಪಾಡು ಬಂದಿದೆ. ಇದು ನೂರು ವರ್ಷ ಬಾಳಿಕೆ ಬರುತ್ತೆ ಎಂದಿದ್ದೆಯಲ್ಲ, ನೀನೇನು ಹುಚ್ಚನೋ ಇಲ್ಲ ಮಹಾಮೋಸಗಾರನೋ?”

ವ್ಯಾಪಾರಿ ದೈನ್ಯದಿಂದ ಉತ್ತರಿಸಿದ, “ಮನ್ನಿಸಬೇಕು. ಪ್ರಭುಗಳಿಗೆ ಈ ಬೀಸಣಿಗೆ ಬಳಸುವುದು ಹೇಗೆಂದು ತಿಳಿದಿಲ್ಲ. ಸರಿಯಾಗಿ ಬಳಸಿದ್ದರೆ ಇದು ನೂರು ವರ್ಷ ಬಾಳಿಕೆ ಬಂದೇ ಬರುವುದು.”

“ಅಬ್ಬ! ಬೀಸಣಿಗೆ ಬಳಸುವುದು ಹೇಗೆಂದೂ ನಾನು ಕಲಿಯಬೇಕಾ?” ಕೋಪದಿಂದ ಪ್ರಶ್ನಿಸಿದ ರಾಜ.

“ದಯವಿಟ್ಟು ಕೋಪಮಾಡಿಕೊಳ್ಳಬೇಡಿ. ನನ್ನ ಬೀಸಣಿಗೆಗೆ ಈ ದುಸ್ಥಿತಿಗೆ ಹೇಗೆ ಬಂದಿತು? ನೀವದನ್ನು ಹೇಗೆ ಬಳಸಿದಿರಿ?”

ರಾಜ ಬೀಸಣಿಗೆಯನ್ನೆತ್ತಿಕೊಂಡು ಹಿಂದಕ್ಕೆ ಮುಂದಕ್ಕೆ ಸಾಮಾನ್ಯವಾಗಿ ಬೀಸುವಂತೆ ಬೀಸುತ್ತ ತೋರಿಸಿದ. 

“ಈಗ ನನಗೆ ಅರ್ಥವಾಯ್ತು. ನೀವು ಹೀಗೆ ಬೀಸಬಾರದು.” ವ್ಯಾಪಾರಿ ಹೇಳಿದ.

“ಏನು? ಬೇರೆ ಹೇಗೆ ಬೀಸುವುದು?” ರಾಜ ಕೇಳಿದ.

ವ್ಯಾಪಾರಿ ವಿವರಿಸಿದ, “ಬೀಸಣಿಗೆಯನ್ನು ಅಲುಗದಂತೆ ಮುಖದ ಮುಂದೆ ಹಿಡಿದುಕೊಂಡು ತಲೆಯನ್ನು ಎಡಕ್ಕೂ ಬಲಕ್ಕೂ ತಿರುಗಿಸಬೇಕು. ಹೀಗೆ ಬಳಸಿದರೆ ಬೀಸಣಿಗೆ ನೂರು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ನೀವು ಗತಿಸಿಹೋಗಬಹುದು ಆದರೆ ಬೀಸಣಿಗೆ ಇದ್ದ ಹಾಗೇ ಇರುತ್ತೆ. ನನ್ನ ಬೀಸಣಿಗೆಯಲ್ಲಿ ಯಾವ ದೋಷವೂ ಇಲ್ಲ, ದೋಷವಿರುವುದು ಅದನ್ನು ಬಳಸುವ ರೀತಿಯಲ್ಲಿ.”

ಮಾನವ ಕುಲಕ್ಕೆ ಇಂಥದ್ದೇ ದೋಷವನ್ನು ಆರೋಪಿಸಲಾಗಿದೆ. ಸಾವಿರಾರು ವರ್ಷಗಳಿಂದ ಒಟ್ಟು ಸೇರುತ್ತಿರುವ ರೋಗದಿಂದ ಮನುಕುಲ ನರಳುತ್ತಿದೆ. ಇದಕ್ಕೆ ಕಾರಣ ಮನುಷ್ಯನೇ ಹೊರತು ಸಂಸ್ಕೃತಿಯಲ್ಲ ಎಂದು ಮತ್ತೆ ಮತ್ತೆ ಹೇಳಲಾಗುತ್ತಿದೆ. ಮನುಷ್ಯ ಕೊಳೆಯುತ್ತಿದ್ದಾನೆ, ಆದರೂ ಪರಂಪರೆಯನ್ನು ಕೊಂಡಾಡಲಾಗುತ್ತದೆ. ನಮ್ಮ ಶ್ರೇಷ್ಠ ಪರಂಪರೆ! ನಮ್ಮ ಮತ!

“ಮನುಷ್ಯನಲ್ಲಿ ತಪ್ಪಿದೆ, ಆತ ಬದಲಾಗಬೇಕು” ಎನ್ನಲಾಗುತ್ತದೆ. ಆದರೂ ಯಾರೊಬ್ಬರೂ ಎದ್ದು ನಿಂತು ಇದನ್ನು ಪ್ರಶ್ನಿಸುವುದಿಲ್ಲ. ಮನುಷ್ಯನಲ್ಲಿ ಪ್ರೀತಿಯನ್ನು ಅರಳಿಸುವುದಕ್ಕೆ ವಿಫಲವಾದ ಸಂಸ್ಕೃತಿ ಹಾಗೂ ಮತಗಳು ಹುಸಿ ಮೌಲ್ಯಗಳ ಮೇಲೆ ನಿಂತಿವೆ ಎಂದು ತೋರಿಸಿಕೊಡುವುದಿಲ್ಲ. ಈ ಸಾವಿರ ವರ್ಷಗಳಲ್ಲಿ ಪ್ರೀತಿ ಅರಳಿಲ್ಲವೆಂದರೆ, ನಾನು ಹೇಳುವೆ – ಇವೇ ಸಂಸ್ಕೃತಿ, ಮತಗಳು ಇದ್ದರೆ-  ಇನ್ನು ಸಾವಿರ ವರ್ಷ ಕಳೆದರೂ ಪ್ರೀತಿ ತುಂಬಿದ ಮನುಷ್ಯನನ್ನು ಕಾಣಲಿಕ್ಕೆ ಸಾಧ್ಯವಿಲ್ಲ. ಇವತ್ತಿನ ಮನುಷ್ಯನೇ ನಾಳೆಯೂ ಇರುತ್ತಾನೆ. ಶಿಷ್ಟಾಚಾರ, ನಾಗರೀಕತೆ, ತಂತ್ರಜ್ಞಾನಗಳೆಂಬ ಆತನ ಹೊರಕವಚಗಳು ಸಮಯ ಕಳೆದಂತೆ ಬದಲಾಗುತ್ತವೆಯೇ ಹೊರತು ಒಳಗೆ ಆತ ಹಾಗೆಯೇ ಉಳಿದಿರುತ್ತಾನೆ.

ನಾವು ನಮ್ಮ ಸಂಸ್ಕೃತಿ, ಮತಗಳನ್ನು ವಿಮರ್ಶಿಸಿಕೊಳ್ಳಲು ಸಿದ್ಧರಿಲ್ಲ, ಆದರೂ ಅವುಗಳನ್ನು ಎದೆತುಂಬ ಹಾಡಿಹೊಗಳುತ್ತೇವೆ. ಅವುಗಳ ಪಾಲಕರ, ಸಂತರ ಕಾಲುಗಳಿಗೆ ಮುತ್ತಿಕ್ಕುತ್ತೇವೆ. ನಮ್ಮ ಆಲೋಚನಾ ವಿಧಾನವನ್ನು, ಮನುಕುಲ ನಡೆದು ಬಂದ ದಾರಿಯನ್ನು ಅವಲೋಕಿಸಿ ಅವರು ನಮ್ಮನ್ನು ದಾರಿತಪ್ಪಿಸುತ್ತಿರಬಹುದು, ಅವರು ಹೇಳುವುದೆಲ್ಲ ತಪ್ಪಿರಬಹುದು ಎಂದು ಪರೀಕ್ಷಿಸುವ ಗೋಜಿಗೇ ನಾವು ಹೋಗುವುದಿಲ್ಲ.

ಮೂಲದಲ್ಲಿರುವ ತತ್ವಗಳು  ದೋಷಯುಕ್ತವಾಗಿವೆ ಹಾಗೂ ಹುಸಿ ಮೌಲ್ಯಗಳಿಂದ ಕೂಡಿವೆ ಎಂದು ನಾನು ಹೇಳುವೆ. ಈ ಮಾತಿಗೆ ಇಂದಿನ ಮನುಷ್ಯನಿಗಿಂತ ಬೇರೆ ಸಾಕ್ಷಿ ಬೇಕೆ?

(ಸಶೇಷ)

ಗುರುವಿನೊಂದಿಗಿರಲು ಗುಂಡಿಗೆ ಬೇಕು! January 16, 2010

Posted by uniquesupri in ಓಶೋ ಹೇಳಿದ್ದು.
Tags: , , , , , ,
1 comment so far

ಜೆನ್,ಜೆಸ್ಟ್,ಜಿಪ್,ಜ್ಯಾಪ್ ಅಂಡ್ ಜಿಂಗ್ ಉಪನ್ಯಾಸಮಾಲಿಕೆಯ ಏಳನೆಯ ಉಪನ್ಯಾಸದ ಸಂಗ್ರಹಾನುವಾದ.

ನೂರು ಮಂದಿ ಗುರುಗಳು ಎನ್ನಿಸಿಕೊಂಡವರಲ್ಲಿ ಒಬ್ಬನು ಮಾತ್ರ ಗುರು, ಉಳಿದ ತೊಂಬತ್ತೊಂಬತ್ತು ಮಂದಿ ಶಿಕ್ಷಕರಾಗಿರುತ್ತಾರೆ. ಶಿಕ್ಷಕನು ಆವಶ್ಯಕವಾಗಿ ಹೆಚ್ಚು ಓದಿದವನಾಗಿರುತ್ತಾನೆ. ಗುರುವಿಗೆ ಓದು ಅವಶ್ಯಕವಲ್ಲ. ಶಿಕ್ಷಕ ಸಂಪ್ರದಾಯ, ಕಟ್ಟಳೆ, ಸಮಾಜದ ರೀತಿ ನೀತಿ, ಶಾಸ್ತ್ರ-ಸಂಹಿತೆಗಳನ್ನು ಅರೆದು ಕುಡಿದಿರುತ್ತಾನೆ. ಆತನದು ಎರವಲು ಜೀವನ. ಎರವಲು ಪಡೆದ ಯಾವ ಸಂಗತಿಗಳೂ ಜೀವನವನ್ನು ಹಗುರವಾಗಿಸುವುದಿಲ್ಲ. ಸ್ವಂತಿಕೆಯಿಲ್ಲದ ವ್ಯಕ್ತಿ ಭಾರವಾಗಿ, ಸಪ್ಪೆಯಾಗಿ, ಶುಷ್ಕವಾಗಿ, ಸತ್ತವನಂತೆ ಇರುತ್ತಾನೆ. ಗುರು ಬಂಡುಕೋರ925103951-2887690-2 . ಆತ ತನ್ನ ಸ್ವಂತಿಕೆಯಿಂದ ಬದುಕುತ್ತಾನೆ. ಆತ ಅಪ್ರಯತ್ನ ಪೂರ್ವಕವಾಗಿ, ಸಹಜವಾಗಿರುತ್ತಾನೆ, ಸಾಂಪ್ರದಾಯಿಕವಾಗಿ ಅಲ್ಲ. ಸಾಂಪ್ರದಾಯಿಕವಾಗಿರುವುದು ಗುರುವಿಗೆ ಅಸಾಧ್ಯ. ಯೇಸು ಹುಟ್ಟಿನಿಂದ ಯಹೂದಿ ಆದರೆ ಆತ ಯಹೂದಿಯಲ್ಲ, ಬುದ್ಧ ಹುಟ್ಟಿನಿಂದ ಹಿಂದು ಆದರೆ ಆತ ಹಿಂದುವಲ್ಲ. ಈ ಮಾತು ಎಲ್ಲಾ ಗುರುಗಳಿಗೂ ಅನ್ವಯಿಸುತ್ತದೆ. ಆದರೆ ಶಿಕ್ಷಕ ಹಾಗಲ್ಲ. ಆತ ಗುರುವಿನ ಅಣಕು ಚಿತ್ರದ ಹಾಗೆ. ಆತ ತಾನು ಗುರು ಎಂಬಂತೆ ನಟಿಸುತ್ತಾನೆ, ಅದು ಆತನ ಅಹಂಕಾರದ ಸುಳಿಯಷ್ಟೇ. ಗುರು ಅಹಂಕಾರರಹಿತನು, ಆತನಲ್ಲಿ ಪ್ರೀತಿಯಲ್ಲದೆ ಬೇರೇನು ಇಲ್ಲ. ಅಹಂಕಾರ ಕೈಬಿಟ್ಟ ತಕ್ಷಣ ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನು ಪ್ರೀತಿ, ಅನುಕಂಪ ಹಾಗೂ ಮಧುರತೆಗಳು ಆವರಿಸಿಕೊಳ್ಳುತ್ತವೆ. ಅದು ಶುದ್ಧ ಸಂಭ್ರಮ. ಅದೊಂದು ದೀಪಗಳ ಹಬ್ಬ, ಒಂದು ಹಾಡು, ಒಂದು ಕುಣಿತ, ಕಾರಣವಿಲ್ಲದ ಸಂಭ್ರಮ.

ಗುರು ಕಾವ್ಯ ಸಂಗೀತವಿದ್ದಂತೆ. ಶಿಕ್ಷಕನೋ ಗಣಿತ, ಲೆಕ್ಕಾಚಾರಗಳಿದ್ದಂತೆ. ಶಿಕ್ಷಕ ಪದಗಳ ಲೋಕದಲ್ಲಿರುತ್ತಾನೆ, ಗುರು ಪದಗಳಿಗೆ ಮೀರಿ ಜೀವಿಸುತ್ತಿರುತ್ತಾನೆ. ಆದರೆ ನಾವು ಗುರುವನ್ನು ಅರ್ಥಮಾಡಿಕೊಳ್ಳುವ ಭಾಷೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ಬಿಟ್ಟಿದ್ದೇವೆ. ಏಕೆಂದರೆ ಒಬ್ಬ ಗುರು ಅವತರಿಸುವುದು ತುಂಬಾ ವಿರಳವಾಗಿ.

ಶಿಕ್ಷಕ ಹೆಚ್ಚು ತಿಳಿದುಕೊಂಡಿರುವವನಾಗಿರುತ್ತಾನೆ, ಹೆಚ್ಚು ಅರ್ಥ ಮಾಡಿಕೊಂಡವನಾಗಿರುತ್ತಾನೆ; ಆತ ಈ ನಮ್ಮ ಮೂರ್ಖ ಅಸ್ತಿತ್ವದ ಭಾಗವಾಗಿರುತ್ತಾನೆ. ಆತನೂ ನಿಮ್ಮಂತೇ ಕುರುಡ. ಆದರೆ ಆತ ನಿಮ್ಮ ಭಾಷೆಯನ್ನು ಮಾತನಾಡುತ್ತಾನೆ. ಹೀಗಾಗಿ ಆತ ನಿಮಗೆ ಅರ್ಥವಾಗುತ್ತಾನೆ. ಗುರು ಕುರುಡನಲ್ಲ. ಆತ ಮಾತನಾಡುವುದು ವಿಶಿಷ್ಟವಾದ ಭಾಷೆ. ಹೀಗಾಗಿ ಆತ ಹೊರಗಿನವನಾಗಿ ಕಾಣುತ್ತಾನೆ. ಶಿಕ್ಷಕ ನಿಮ್ಮವನಾಗಿ ಕಾಣುತ್ತಾನೆ. ಆತನೊಂದಿಗೆ ಹೊಂದಿಕೊಳ್ಳುವುದು ನಿಮಗೆ ಸುಲಭ, ಏಕೆಂದರೆ ಆತ ನಿಮ್ಮ ಮಟ್ಟದಲ್ಲಿಯೇ ಇರುತ್ತಾನೆ. ಗುರು ಅನ್ಯಗ್ರಹದವ, ಆತ ಅಪರಿಚಿತ. ಆತ ನಿಮ್ಮೊಳಗೆ ನಿಮ್ಮ ನಡುವೆ ಬಾಳುತ್ತಿದ್ದರೂ ಅತೀತಕ್ಕೆ ಸೇರಿದವ. ಆತನ ಸಂದೇಶ ದೂರದ, ಅತಿ ದೂರದ ಮೂಲದಿಂದ ಬಂದಿರುತ್ತದೆ. ಗ್ರಹಿಸಿಲ್ಲದ, ಗ್ರಹಿಸಲಾಗದುದರ ಪ್ರತಿನಿಧಿಯಾಗಿ ಆತ ಇಲ್ಲಿರುತ್ತಾನಷ್ಟೆ. ಆತ ನಿಮ್ಮ ಶಾಸ್ತ್ರಗಳ ಭಾಷೆ ಮಾತನಾಡುವುದಿಲ್ಲ, ಆತ ತನ್ನದೇ ಸಂವಹನವನ್ನು ರೂಪಿಸಿಕೊಳ್ಳುತ್ತಾನೆ.

ಗುರುವನ್ನು ನೀವು ಹಗೆಯಂತೆ ಕಾಣುವಿರಿ. ಶಿಕ್ಷಕನ ಬಗ್ಗೆ ನಿಮಗೆ ಅನುಕಂಪವಿರುತ್ತದೆ ಆದರೆ ಗುರುವಿನ ಬಗ್ಗೆ ನಿಮಲ್ಲಿ ಆಳವಾದ ಹಗೆತನವಿರುತ್ತದೆ. ಆತನನ್ನು ಕೊಲ್ಲುವುದಕ್ಕೆ, ನಾಶ ಮಾಡುವುದಕ್ಕೆ ಬಯಸುತ್ತೀರಿ. ಏಕಂದರೆ ಆತ ನಿಮ್ಮ ಬದುಕಲ್ಲಿ ಗೊಂದಲವೇಳಿಸುತ್ತಾನೆ. ನಿಮ್ಮ ಭ್ರಮೆಗಳನ್ನು ಛಿದ್ರಗೊಳಿಸುತ್ತಾನೆ, ನೀವು ಈ ಮೊದಲು ನಂಬಿದ ವಿಚಾರಗಳಿಗೆ ಹೊಡೆತಕೊಡುತಾನೆ. ಆತ ನಿಮ್ಮ ಅಡಿಪಾಯಕ್ಕೇ ಆಘಾತ ಉಂಟುಮಾಡುತ್ತಾನೆ – ನೀವು ನಿಂತಿರುವ ನೆಲವನ್ನೇ ತೆಗೆದು ಹಾಕುತ್ತಾನೆ. ಆತ ನಿಮ್ಮ ವಿಚಾರವಂತಿಕೆ, ನಿಮ್ಮ ಸಮಾಧಾನಗಳನ್ನು ನಾಶ ಮಾಡುತ್ತಾನೆ.

ಸಾಮಾನ್ಯವಾಗಿ ಸಮಾಜವು ಎರಡು ಭಾಗಗಳಾಗಿ ವಿಂಗಡಣೆಯಾಗಿದೆ: ‘ತಲೆ’ಗಳು ಹಾಗೂ ‘ಕೈ’ಗಳು. ನಾವು ಜನರನ್ನು ವಿಂಗಡಿಸಿರುವುದು ಹೀಗೆಯೇ: ಕಾರ್ಮಿಕರು ಹಾಗೂ ಮೇಲ್ವಿಚಾರಕರು. ಇದು ಕಾಕತಾಳೀಯವಲ್ಲ, ಅತಿ ಪ್ರಮುಖವಾದ ಸಂಗತಿ. ತಲೆ ಕೈಗಳನ್ನು ಆಳುತ್ತದೆ. ಆದರೆ ಇಲ್ಲಿ ಮೂರನೆಯ ವಿಂಗಡಣೆ ಇಲ್ಲವೇ ಇಲ್ಲ. – ‘ಹೃದಯ’ಗಳದ್ದು. ಗುರು ತೀರಾ ವಿರಳವಾಗಿರುವ ಈ ಮೂರನೆಯ ವಿಂಗಡಣೆಗೆ ಸೇರುತ್ತಾನೆ.

ಯಾವಗಲೋ ಒಮ್ಮೊಮ್ಮೆ ಅಪರೂಪಕ್ಕೆ ಒಬ್ಬ ಯೇಸು, ಒಬ್ಬ ಬುದ್ಧ, ಒಬ್ಬ ಝರಾತುಷ್ಟ್ರ, ಒಬ್ಬ ಲಾವೋ ತ್ಸು, ಒಬ್ಬ ಚಾಂಗ್ ತ್ಸುವನ್ನು ಕಾಣುತ್ತೀರಿ. ಆದರೆ ಇವರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಿಮಗೆ ಸಾಧ್ಯವೇ ಆಗುವುದಿಲ್ಲ.

ನಿಮ್ಮ ಮುಂದಾಳುಗಳು ನಿಜವಾಗಿ ಮುಂದಾಳುಗಳಲ್ಲ, ಅವರು ತಮ್ಮ ಹಿಂಬಾಲಕರನ್ನು ಹಿಂಬಾಲಿಸುವವರು. ನಿಮ್ಮ ಶಿಕ್ಷಕರು ಶಿಕ್ಷಕರಲ್ಲ, ಅವರು ಅನವರತ ನಿಮ್ಮ ಪೂರ್ವಾಗ್ರಹಗಳಿಗೆ ಹೊಂದಿಕೊಳ್ಳುತ್ತಿರುತ್ತಾರೆ. ಇಲ್ಲವಾದರೆ ನೀವು ಅವರನ್ನು ಗೌರವಿಸುವುದಿಲ್ಲ; ಆಗ ಪ್ರತಿಷ್ಟೆಗೆ, ಅಧಿಕಾರಕ್ಕೆ ಅವಕಾಶ ಸಿಕ್ಕುವುದಿಲ್ಲ. ಎಲ್ಲರೂ ಕುರುಡರ ಭಾಷೆ ಮಾತನಾಡುವುದು, ಶಿಕ್ಷಕ ನಿಮಗೆ ಅದನ್ನು ಮನದಟ್ಟು ಮಾಡುತ್ತಾನೆ, ನಿಮ್ಮನ್ನು ಖುಶಿಯಾಗಿಡುತ್ತಾನೆ.

ಗುರು ಮುಚ್ಚಿದ ನಿಮ್ಮ ಗಾಯಗಳನ್ನು ಬೆಳಕಿಗೆ ಒಡ್ಡುತ್ತಾನೆ. ಗುರುವಿನೊಂದಿಗಿರುವುದು ಯಾತನೆಯನ್ನು ಕೊಡುತ್ತದೆ! ಒಬ್ಬನು ಶಿಲುಬೆಯ ಮೇಲೆ ಸಾಯುವುದಕ್ಕೆ, ವಿಷ ಸೇವಿಸುವುದಕ್ಕೆ, ನಿಮ್ಮಿಂದ ಕೊಲ್ಲಲ್ಪಡುವುದಕ್ಕೆ, ಹಿಂಸಿಸಲ್ಪಡುವುದಕ್ಕೆ ಸಿದ್ಧನಾಗದಿದ್ದರೆ ಆತ ಗುರುವಾಗಲಾರ. ಆತ ಸದಾ ಅಪಾಯದೊಂದಿಗೇ ಓಡಾಡುತ್ತಿರುತ್ತಾನೆ.

ಶಿಕ್ಷಕ ನಿಮಗೆ ಹೊಂದಿಕೊಳ್ಳುತ್ತಾನೆ. ಗುರು ಇದಕ್ಕೆ ವಿರುದ್ಧ; ನೀವು ಆತನಿಗೆ ಹೊಂದಿಕೊಳ್ಳಬೇಕು. ನೀವು ಲಕ್ಷಾಂತರ ಸಂಖ್ಯೆಯಲ್ಲಿರುತ್ತೀರಿ, ಬುದ್ಧ ಯಾವಾಗಲೂ ಒಬ್ಬನೇ. ನೀವು ಸದಾ ಬಹುಸಂಖ್ಯಾತರು, ಅಧಿಕಾರವೆಲ್ಲ ನಿಮ್ಮ ಬಳಿಯೇ ಇರುತ್ತದೆ. ನಿಮ್ಮ ಅಧಿಕಾರವೇನಿದ್ದರೂ ಪೊಳ್ಳು. ನೀವು ಯೇಸುವನ್ನು ಶಿಲುಬೆಗೇರಿಸಬಹುದು ಆದರೆ ಆತನ ಚೈತನ್ಯವನ್ನು ಕೊಲ್ಲಲಾಗುವುದಿಲ್ಲ. ಸಾಕ್ರೆಟಿಸನಿಗೆ ವಿಷವುಣ್ಣಿಸಬಹುದು ಆದರೆ ಆತನ ಸಂದೇಶಕ್ಕೆ ವಿಷವಿಕ್ಕಲಾಗುವುದಿಲ್ಲ.

ಈ ಶಿಕ್ಷಕರ ದೊಡ್ಡಿಯಲ್ಲಿ ಒಂದು ವೇಳೆ ನಿಮಗೆ ನಿಜವಾದ ಅರಿವುಳ್ಳ ಗುರು ಸಿಕ್ಕಿದರೂ ಆತನನ್ನು ಗುರುತಿಸುವಲ್ಲಿ ನೀವು ಬಹುಪಾಲು ವಿಫಲರಾಗುತ್ತೀರಿ.ಆತ ಕೋಪಿಷ್ಟನಾಗಿರುತ್ತಾನೆ. ಆತ ಅದೆಂಥ ಆಘಾತಕಾರಿ ವ್ಯಕ್ತಿತ್ವದವನಾಗಿರುತ್ತಾನೆಂದರೆ, ನೀವು ಅಲ್ಲಿಂದ ಪರಾರಿಯಾಗಬೇಕೆಂದು ಬಯಸುತ್ತೀರಿ. ನಿಮಗೆ ಉಸಿರುಗಟ್ಟಿ ಸಾಯುವಂತೆ ಭಾಸವಾಗುತ್ತದೆ. ಆತ ನಿಮ್ಮ ಪ್ರತಿಯೊಂದು ವಿಚಾರವನ್ನು, ಸಿದ್ಧಾಂತವನ್ನು, ನಂಬಿಕೆಯನ್ನು – ಒಟ್ಟಿನಲ್ಲಿ ಏನೇನು ಅತ್ಯಮೂಲ್ಯ ಎಂದು ಭಾವಿಸಿ ಹೊತ್ತಿರುತ್ತೀರೋ – ಅದನ್ನೆಲ್ಲ ಒಡೆದು ಹಾಕುತ್ತಾನೆ. ಅರಿವುಳ್ಳ ಗುರುವಿನ ಬಳಿ ನೀವು ವಜ್ರಗಳೆಂದು ಹೊತ್ತವೆಲ್ಲ ಸಾಮಾನ್ಯ ಕಲ್ಲುಗಳೆಂದು ಅರಿವಾಗುತ್ತದೆ.

ಗುರುವಿನೊಂದಿಗೆ ಇರುವುದಕ್ಕೆ ನಿಜಕ್ಕೂ ಗುಂಡಿಗೆ ಇರಬೇಕು. ಅಹಂಕಾರವನ್ನು, ನಿಮ್ಮ ನಿನ್ನೆಗಳನ್ನು, ನಿಮ್ಮೆಲ್ಲ ಬಂಡವಾಳವನ್ನು ಕೈಬಿಡುವ ಗುಂಡಿಗೆ ಇರಬೇಕು. ಸಮಾಜವನ್ನು ಎದುರುಹಾಕಿಕೊಂಡು, ಸಂಸ್ಕೃತಿಯನ್ನು ಎದುರಿಸಿ, ಇಡೀ ಇತಿಹಾಸವನ್ನು ಎದುರುಹಾಕಿಕೊಂಡು ಅಪಾಯಕಾರಿಯಾಗಿ ಬದುಕುವ ಗುಂಡಿಗೆ ಬೇಕು.

ನಿಜವಾದ ಶಿಷ್ಯ ಬಂಡುಕೋರನಾಗಿರುತ್ತಾನೆ, ಏಕೆಂದರೆ ಆತನ ಗುರು ಪರಮ ಬಂಡುಕೋರನಾಗಿರುತ್ತಾನೆ!

ಧರ್ಮಗಳೆಂಬ ಮನಸ್ಸಿನ ಮುಖಗಳು January 2, 2010

Posted by uniquesupri in ಓಶೋ ಹೇಳಿದ್ದು.
Tags: , , , , , , , , , ,
add a comment

ಮನುಷ್ಯನ ಮನಸ್ಸಿಗೆ ಹಲವು ಮುಖಗಳಿವೆ. ಒಂದೊಂದು ಧರ್ಮವೂ ಮನಸ್ಸಿನ ಒಂದೊಂದು ಮುಖವನ್ನು  ವೈಭವೀಕರಿಸಿ, ಅದನ್ನು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುವ ಕೆಲಸ ಮಾಡಿದೆ.

ಯಾರನ್ನೋ ನೀವು ಹಿಂದು ಎನ್ನುತ್ತೀರಿ, ಮತ್ತೊಬ್ಬನನ್ನು ಮುಸಲ್ಮಾನ ಎನ್ನುವಿರಿ, ಮಗದೊಬ್ಬನನ್ನು ಜೈನ. ಆದರೆ ವಾಸ್ತವವಾಗಿ ಇದು ಸತ್ಯವಲ್ಲ. ಪ್ರತಿ ವ್ಯಕ್ತಿಯಲ್ಲಿಯೂ ಎಲ್ಲಾ ಧರ್ಮಗಳು ಸುಪ್ತವಾಗಿರುತ್ತವೆ. ಆತನಲ್ಲಿ ಹಿಂದುವು ಇರುತ್ತಾನೆ, ಮುಸಲ್ಮಾನನೂ ಇರುತ್ತಾನೆ, ಕ್ರೈಸ್ತ, ಜೈನರೂ, ಬೌದ್ಧ, ಯಹೂದಿಗಳೂ ಇರುತ್ತಾರೆ. osho_motorಆತನೇನಾದರೂ ಬೌದ್ಧ ಕುಟುಂಬದಲ್ಲಿ ಹುಟ್ಟಿದನಾದರೆ ಆತನಲ್ಲಿನ ಬೌದ್ಧ ಮೇಲ್ಪದರಕ್ಕೆ ಬರುತ್ತಾನೆ. ಆತನಲ್ಲಿನ ಬೌದ್ಧ ಎತ್ತರಕ್ಕೆ ಬೆಳೆಯುತ್ತಾ ಹೋಗುತ್ತಾನೆ, ಉಳಿದವುಗಳನ್ನು ಹತ್ತಿಕ್ಕುತ್ತಾನೆ. ಬದಲಾಗಿ ಆತ ಮುಸಲ್ಮಾನ ಕುಟುಂಬದಲ್ಲಿ ಹುಟ್ಟಿದರೆ ಆತನ ಮನಸ್ಸಿನ ಇನ್ನೊಂದು ಮುಖ ಪ್ರಮುಖವಾಗುತ್ತದೆ. ಆದರೆ ಹತ್ತಿಕ್ಕಲ್ಪಟ್ಟ ಮನಸ್ಸಿನ ಉಳಿದ ಅಂಶಗಳು ಸುಮ್ಮನಿರುವುದಿಲ್ಲ, ಅವು ಸುಪ್ತವಾಗಿ ಕೆಲಸ ಮಾಡುತ್ತಲೇ ಇರುತ್ತವೆ.

ನಾನು ಕಂಡಿರುವಂತೆ, ಒಬ್ಬ ವ್ಯಕ್ತಿಯಲ್ಲಿ ಎಲ್ಲಾ ಧರ್ಮಗಳೂ ಇವೆ. ಇದರಿಂದಾಗಿಯೇ ಎಲ್ಲ ಧರ್ಮಗಳನ್ನು ಅನುಸಂಧಾನಗೊಳಿಸುವುದಕ್ಕೆ ಸಾಧ್ಯವಾಗುತ್ತದೆ. ವಾಸ್ತವಾವಾಗಿ ಈ ಅನುಸಂಧಾನಕ್ಕೆ ಯಾವ ಬೆಲೆಯೂ ಇಲ್ಲ.ಅದು ಕೇವಲ ಮನಸ್ಸಿನ ವಿವಿಧ ಮುಖಗಳನ್ನು ಅನುಸಂಧಾನಗೊಳಿಸಿಕೊಳ್ಳುವ ಪ್ರಯತ್ನವಾಗಿರುತ್ತದೆ. 

ಉದಾಹರಣೆಗೆ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಅಹಂ ಇದ್ದೇ ಇರುತ್ತದೆ. ಆದರೆ ಹಿಂದೂ ಧರ್ಮದಲ್ಲಿ ಈ ಅಹಂಕಾರವನ್ನು ಅದರ ಪರಮ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಿದೆ. ‘ನಿನಗಿಂಥ ನಾನು ಶ್ರೇಷ್ಠ’ ಎಂಬ ಭಾವನೆ ಪ್ರತಿ ಹಿಂದೂವಿನಲ್ಲೂ ಇರುತ್ತದೆ. ತಾನು ಈ ಜಗತ್ತಿಗೆ ಬೋಧಿಸುವುದಕ್ಕಾಗಿ, ಬ್ರಹ್ಮ ಜ್ಞಾನವನ್ನು ತಿಳಿಸುವುದಕ್ಕಾಗಿ ಹಿಂದುವಾಗಿ ಹುಟ್ಟಿದ್ದೇನೆ ಎಂದು ಆತ ನಂಬುತ್ತಾನೆ. ತನ್ನದು ಅತಿ ಪುರಾತನವಾದ, ಪವಿತ್ರವಾದ ಸನಾತನ ಧರ್ಮ. ತಾನು ಧರ್ಮಾಂಧನಲ್ಲ, ಸಹಿಷ್ಣು, ತಾನು ಯಾರ ಬದುಕಿನಲ್ಲೂ ಮಧ್ಯ ಪ್ರವೇಶಿಸುವುದಿಲ್ಲ, ಯಾರ ಮೇಲೂ ಆಕ್ರಮಣ ಮಾಡಿದವನಲ್ಲ ಎಂದು ಆತ ನಂಬುತ್ತಾನೆ. ಆದರೆ ಆತ ತನಗರಿವಿಲ್ಲದೆ ಇವೆಲ್ಲವನ್ನೂ ಮಾಡುತ್ತಿರುತ್ತಾನೆ.

ಹಿಂದೂಗಳು ಹೆಚ್ಚು ಅಸಹಿಷ್ಣುಗಳು. ತಾವು ಸಹಿಷ್ಣುಗಳು ಎಂದುಕೊಳ್ಳುವಲ್ಲೇ ಅವರ ಅಸಹಿಷ್ಣುತೆ ಇಣುಕುತ್ತದೆ. ಒಳಗೆ ಅಸಹಿಷ್ಣುತೆ ಇರದಿದ್ದರೆ ತಾನು ಸಹಿಷ್ಣು ಎಂದು ಭಾವಿಸುವ ಪ್ರಮೇಯವೇ ಉದ್ಭವಿಸದು.

ಇದು ಕೇವಲ ಹಿಂದೂ ಧರ್ಮದ ಗುಣವಲ್ಲ. ಎಲ್ಲಾ ಧರ್ಮಗಳಲ್ಲಿಯೂ ಇದು ನಾನಾ ರೂಪದಲ್ಲಿ ಆವರಿಸಿಕೊಂಡಿದೆ. ಯಹೂದಿಯರು ತಾವು ದೇವರಿಂದ ಆರಿಸಲ್ಪಟ್ಟ ಜನರು ಎಂದು ನಂಬುತ್ತಾರೆ. ಕ್ರೈಸ್ತರು ಕ್ರಿಸ್ತನೊಬ್ಬನೇ ದೇವರ ಮಗ, ಅಂತಿಮ ತೀರ್ಪಿನ ದಿನದಂದು ಆತ ತನ್ನ ಕುರಿಗಳನ್ನು ಉಳಿದ ಮಂದೆಯಿಂದ ಬೇರ್ಪಡಿಸುತ್ತಾನೆ. ಆತನನ್ನು ನಂಬದವರನ್ನು ನರಕದ ಬೆಂಕಿಗೆ ನೂಕುತ್ತಾನೆ ಎಂದು ನಂಬುತ್ತಾರೆ. ತಾವು ಉಳಿದವರಿಗಿಂತ ಶ್ರೇಷ್ಠ ಎಂಬ ಈ ಅಹಂಕಾರ ಎಲ್ಲಾ ಧರ್ಮದವರಲ್ಲಿಯೂ ಇದೆ. ಮುಸಲ್ಲಾನ, ಕ್ರೈಸ್ತ, ಜೈನ, ಬೌದ್ಧ, ಸಿಖ್, ಕನ್‌ಫ್ಯೂಶಿಯನ್, ತಾವೊ – ಎಲ್ಲರಲ್ಲೂ ಇದೆ. ಆದರೆ ಈ ಅಂಶವನ್ನು ಅಭಿವೃದ್ಧಿ ಪಡಿಸಿ, ಶುದ್ಧೀಕರಿಸಿ, ಸುಂದರಗಾಣುವಂತೆ ಮಾಡಿದ ಶ್ರೇಯ ಹಿಂದುಗಳದು.

ಮುಸಲ್ಮಾನನು ಮೂಲತಃ ಧರ್ಮಾಂಧ. ಅಚಲವಾದ ಕುರುಡು ವಿಶ್ವಾಸ ಮನಸ್ಸಿನ ಹಲವು ಮುಖಗಳಲ್ಲಿ ಒಂದು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಈ ಅಂಶವು ಸುಪ್ತವಾಗಿರುತ್ತದೆ. ಆದರೆ ಮುಸಲ್ಮಾನನು ಮನಸ್ಸಿನ ಈ ಅಂಶವನ್ನು ಬೃಹತ್ತಾಗಿ ಬೆಳೆಸಿದ್ದಾನೆ.  ತನ್ನ ಧರ್ಮ ಭೂಮಿಗೆ ಬಂದ ಕಡೆಯ ಧರ್ಮ. ಮೊಹಮದ್ ಕಟ್ಟಕಡೆಯ ಪ್ರವಾದಿ. ಮುಂದೆ ಬೇರಾವ ಪ್ರವಾದಿಯೂ ಬರುವುದಿಲ್ಲ; ದೇವರು ತನ್ನ ಸಂದೇಶದ ಕಡೆಯ ಆವೃತ್ತಿಯನ್ನು ಕಳಿಸಿಯಾಗಿದೆ.  ಈ ಮುಂಚೆಯೂ ಸಂದೇಶಗಳು ಕಳಿಸಲ್ಪಟ್ಟಿದ್ದವು, ಆದರೆ ಈಗ ಅವೆಲ್ಲವೂ ರದ್ದಾದಂತೆ. ಕಡೆಯ ಸಂದೇಶ ತಲುಪಿಯಾಗಿದೆ ಹಾಗೂ ಅದು ಸತ್ಯವೂ,ಪರಿಪೂರ್ಣವೂ ಆಗಿರುವುದರಿಂದ ಮತ್ತ್ಯಾವ ಪ್ರವಾದಿ ಹುಟ್ಟಿಬರುವ ಆವಶ್ಯಕತೆಯಿಲ್ಲ – ಇದು ಆತನ ನಂಬಿಕೆ. ಇದು ಶುದ್ಧ ಧರ್ಮಾಂಧತೆ. ಇದು ಎಲ್ಲಾ ಧರ್ಮಗಳಲ್ಲೂ ಇದೆ.

ಕಾಲಿಫ್ ಉಮರ್ ಕೈಲಿ ಉರಿಯುವ ಬೆಂಕಿಯನ್ನು ಹಿಡಿದು ಅಲೆಕ್ಸಾಂಡ್ರಿಯಾದ ಬೃಹತ್ ಗ್ರಂಥಾಲಯವನ್ನು ತಲುಪುತ್ತಾನೆ. ”ಖುರಾನ್‌ನಲ್ಲಿ ಇಲ್ಲದ ವಿಷಯವೇನಿದೆ ಈ ಗ್ರಂಥಾಲಯದ ಪುಸ್ತಕಗಳಲ್ಲಿ?” ಎಂದು ಗ್ರಂಥಪಾಲಕನನ್ನು ಪ್ರಶ್ನಿಸುತ್ತಾನೆ. ಉತ್ತರಕ್ಕೂ ಕಾಯದೆ ತಾನೇ ಹೇಳುತ್ತಾನೆ, “ಖುರಾನಿನಲ್ಲಿರುವುದಕ್ಕಿಂತ ಹೆಚ್ಚಿನದು ಅವುಗಳಲ್ಲಿದ್ದರೆ ನಾನವನ್ನು ಸುಟ್ಟು ಹಾಕುತ್ತೇನೆ. ಏಕೆಂದರೆ ಖುರಾನ್ ಪರಿಪೂರ್ಣವಾದದ್ದು. ಇದರಲ್ಲಿ ಇಲ್ಲದ ವಿಷಯಗಳ ಆವಶ್ಯಕತೆ ಇಲ್ಲ. ಖುರಾನ್ ಒಂದೇ ಸಾಕು. ಇನ್ನು ಖುರಾನ್ ಹೇಳಿರುವುದನ್ನೇ ಆ ಪುಸ್ತಕಗಳು ಬೇರೆ ರೀತಿಯಲ್ಲಿ ಹೇಳಿರುವುದಾದರೆ ಅವುಗಳನ್ನು ಸುಟ್ಟು ಹಾಕುವೆ. ಏಕೆಂದರೆ ಖುರಾನ್ ಸತ್ಯವೂ, ಪರಿಪೂರ್ಣವೂ ಆಗಿರುವಾಗ ಬೇರೆ ಪುಸ್ತಕಗಳು ಯಾಕೆ ಬೇಕು?” ಇದು ಧರ್ಮಾಂಧನ ಮನಸ್ಸು ವರ್ತಿಸುವ ರೀತಿ. ತಾನು ಸರಿ ಉಳಿದವರೆಲ್ಲ ತಪ್ಪು ಎನ್ನುವುದೇ ಕುರುಡು ವಿಶ್ವಾಸದ ತಳಹದಿ. ಯಾವ ವಿಷಯದಲ್ಲಿ ತಾನು ಸರಿ, ಯಾವುದರಲ್ಲಿ ಇತರರು ತಪ್ಪು ಎನ್ನುವ ಪ್ರಶ್ನೆ ಧರ್ಮಾಂಧನಿಗೆ ಉದ್ಭವಿಸದು. ತಾನು ನಂಬಿರುವುದೆಲ್ಲವೂ ಸರಿ, ಉಳಿದದ್ದೆಲ್ಲಾ ತಪ್ಪು. ಆತ ತಾರ್ಕಿಕವಾಗಿ ಯೋಚಿಸಲಾರ, ಏನನ್ನೂ ಅರ್ಥ ಮಾಡಿಕೊಳ್ಳಲಾರ. ಆತ ವಿಶ್ವಾಸಿ, ಅಂಧವಿಶ್ವಾಸಿ.   ಈ ಅಂಶವು ಎಲ್ಲಾ ಧರ್ಮಗಳಲ್ಲಿಯೂ ಇದ್ದರೂ ಇಸ್ಲಾಂ ಇದನ್ನು ಅದೆಷ್ಟರ ಮಟ್ಟಿಗೆ ಬೆಳೆಸಿದೆಯೆಂದರೆ, ಇದು ಅದರ ಮುಖವೇ ಆಗಿಹೋಗಿದೆ.

ಜೈನನು ಹಿಂಸಾ ವಿನೋದಿ. ಪ್ರತಿ ಮನಸ್ಸೂ ಹಿಂಸಾ ವಿನೋದಿಯೇ. ದೇಹವನ್ನು ದಂಡಿಸಿದಷ್ಟೂ ಮನಸ್ಸು ಉಬ್ಬುತ್ತದೆ. ದೇಹದಂಡನೆಯನ್ನು ನೀವು ಇಷ್ಟಪಡಲು ಶುರು ಮಾಡುತ್ತೀರಿ ಏಕೆಂದರೆ ಮನಸ್ಸು ಹೇಳುತ್ತೆ, “ಈಗ ನಾನು ಈ ದೇಹದ ಒಡೆಯ, ದೇಹ ನನಗೆ ಗುಲಾಮ.” ಇದನ್ನೇ ಜೈನ ಧರ್ಮ ಬೋಧಿಸುವುದು. ದೇಹವನ್ನು ಗೆಲ್ಲು. ದೇಹ ಆಹಾರವನ್ನು ಬೇಡಿದರೆ ನೀಡಬೇಡ. ನಿನ್ನ ದೇಹದ ಒಡೆಯ ನೀನು, ನಿನ್ನ ಯಜಮಾನಿಕೆಯನ್ನು ದೇಹದ ಮೇಲೆ ಸ್ಥಾಪಿಸು. ಹೀಗಾಗಿ ಉಪವಾಸವೆಂಬುದು ಜೈನ ಧರ್ಮದ ಅವಿಭಾಜ್ಯ ಅಂಗವಾಯಿತು. ಹೆಚ್ಚೆಚ್ಚು ದಿನಗಳ ಕಾಲ  ಉಪವಾಸವಿರಬಲ್ಲವನು ದೊಡ್ಡ ಸಂತನಾಗುತ್ತಾನೆ. ನಿಜಕ್ಕೂ ಅವರು ದೇಹವನ್ನು ಹಿಂಸಿಸುವ ಮಾನಸಿಕ ಅಸ್ವಸ್ಥರು. ದೇಹ ದೇವಾಲಯ- ಅದನ್ನು ಪ್ರೀತಿಸಬೇಕು, ಗೌರವಿಸಬೇಕು.

ಈ ಹಿಂಸಾವಿನೋದಿ ಗುಣ ಜೈನರ ಸ್ವತ್ತೇನಲ್ಲ. ನಿಮ್ಮ ದೇಹವನ್ನು ದಂಡನೆಗೊಳಪಡಿಸುವುದನ್ನು ನೀವು ಸುಖಿಸುತ್ತೀರಿ. ದೇಹವನ್ನು ಹಿಂಸಿಸಿ ಅದನ್ನೊಂದು ಯಂತ್ರದ ಹಾಗೆ, ಸೇವಕನ ಹಾಗೆ ನಡೆಸಿಕೊಂಡರೆ ನೀವು ಉಬ್ಬಿ ಹೋಗುತ್ತೀರಿ. ನೀವು ಶಕ್ತಿಶಾಲಿ ಎಂಬ  ಭಾವನೆ ನಿಮ್ಮನ್ನಾವರಿಸುತ್ತದೆ. ದೇಹವನ್ನು ದಂಡಿಸುವಲ್ಲಿ ವಿಫಲರಾದಿರೆಂದರೆ ನೀವು ಖಿನ್ನರಾಗುತ್ತೀರಿ. ಈ ಅಂಶವೂ ಸಹ ಎಲ್ಲಾ ಧರ್ಮಗಳಲ್ಲಿ ಅಡಕವಾಗಿದೆ. ಆದರೆ ಅದನ್ನು ಸಿಂಗರಿಸಿ, ಹೊಳೆಯುವಂತೆ ತಿಕ್ಕಿ ತೀಡಿ ಬೆಳೆಸಿದ್ದು ಜೈನ ಧರ್ಮ.

ಇನ್ನು ಬೌದ್ಧ ಧರ್ಮ ಮನಸ್ಸಿನ ಮತ್ತೊಂದು ಮುಖವಾದ ಪಲಾಯನವಾದವನ್ನು ಬೆಳೆಸಿತು. ಪ್ರಪಂಚವನ್ನು ಎದುರಿಸಬೇಡ, ಓಡಿ ಹೋಗು, ಬೆಟ್ಟಕ್ಕೆ ಹೋಗು, ಕಾಡನ್ನು ಸೇರಿಕೋ, ಸರ್ವ ಸಂಗ ಪರಿತ್ಯಾಗಿಯಾಗಿ ನಿಲ್ಲು. ಇದು ಶುದ್ಧ ಪಲಾಯನವಾದ. ಎಲ್ಲರಲ್ಲೂ ಇರುವ ಈ ಅಂಶವನ್ನು ಬೆಳೆಸಿ, ಅದಕ್ಕೊಂದು ರೂಪ ಕೊಟ್ಟು, ಅದನ್ನೊಂದು ತತ್ವಜ್ಞಾನವಾಗಿ ರೂಪಿಸಿ, ಅದರ ಮೇಲೆ ವಾದ ಮಾಡಿ, ಅದನ್ನು ಗಟ್ಟಿಗೊಳಿಸಿದ್ದು ಬೌದ್ಧರು.

ಹೀಗೆ ಎಲ್ಲಾ ಧರ್ಮಗಳು ಮನಸ್ಸಿನ ಒಂದೊಂದು ಮುಖವನ್ನು ಅಪ್ಪಿಕೊಂಡು ಅದನ್ನೇ ತಮ್ಮ ಬಂಡವಾಳವಾಗಿಸಿಕೊಂಡವು. ಎಲ್ಲವೂ ಮನಸ್ಸನ್ನೇ ಅವಲಂಬಿಸಿರುವುದರಿಂದ ಇವ್ಯಾವೂ ನಿಜದ ಅಧ್ಯಾತ್ಮವನ್ನು ನೀಡಲಾರವು.

ಮದರ್ ತೆರೇಸಾ ಸೋಗುಗಾತಿ, ಕಪಟಿ, ಹಿಪೋಕ್ರಿಟ್ ಎಂದವನು ಓಶೋ!!! November 7, 2009

Posted by uniquesupri in ಓಶೋ ಹೇಳಿದ್ದು.
Tags: , , , , ,
add a comment

– ಹೇಮಾ ಪವಾರ್, ಬೆಂಗಳೂರು

ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮದರ್ ತೆರೆಸಾ ಎಂದು ಪರಿಚಿತಳಾದಳು. ಭಾರತದ ಕೊಳಚೆ ಪ್ರದೇಶಗಳ ವಾಸಿಗಳ ಏಳ್ಗೆಗಾಗಿ ಶ್ರಮಿಸಿದ್ದಕ್ಕಾಗಿ ನೊಬೆಲ್ ಬಹುಮಾನವನ್ನೂ ಪಡೆದಳು – ಇದಿಷ್ಟು ನಾವು ಆಕೆಯ ಬಗ್ಗೆ ತಿಳಿದ ವಿಚಾರಗಳು.ಆದರೆ ಗಾಂಧಿ ಇಂದ ಬುದ್ದನವರೆಗೂ, ಆಧ್ಯಾತ್ಮದಿಂದ ಲೈಂಗಿಕತೆಯವರೆವಿಗೂ ಎಲ್ಲವನ್ನೂ, ಎಲ್ಲವನ್ನೂ ತನ್ನ ಮಾತುಗಳಲ್ಲಿ ಹಿಡಿದು ಹೊಸ ಅರ್ಥ ಕೊಡುವ ಓಶೋ ರಜನೀಶ್ ಮದರ್ ತೆರೆಸಾ ಬಗ್ಗೆ ಬೇರೆಯದೇ ರೀತಿಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ನೊಬೆಲ್ ಪ್ರಶಸ್ತಿಯಿಂದ ಪ್ರಖ್ಯಾತಿಯನ್ನು ಪಡೆದ ತೆರೆಸಾರನ್ನು, ಸೋಗುಗಾರ್ತಿ, ಕಪಟಿ ಹಾಗೂ ಹಿಪೋಕ್ರಿಟ್ ಎಂದು ಕರೆಯುತ್ತಾನೆ. osho-rajneesh-gray

ತನ್ನ ಅಭಿಪ್ರಾಯಗಳು ವಿಪರೀತವಾಗಿರುವಂತೆ ನೋಡಿಕೊಳ್ಳುತ್ತಿದ್ದ ರಜನೀಶನ ಅಭಿಪ್ರಾಯವನ್ನು ಅಕ್ಷರಶಃ ಒಪ್ಪುವುದು ಯಾರಿಗೂ ಸಾಧ್ಯವಿಲ್ಲವಾದರೂ ಆತನ ದೃಷ್ಟಿಕೋನದ ಬೆಳಕಿನಲ್ಲಿ ನಮ್ಮ ತಿಳುವಳಿಕೆಯನ್ನು, ಅಭಿಪ್ರಾಯಗಳನ್ನು ಪುನರ್ವಿಮರ್ಶಿಸಿಕೊಳ್ಳುವುದು ನಮಗೆ ಉಪಯುಕ್ತವಾಗಬಹುದು. ತನ್ನ ಪ್ರವಚನವೊಂದರಲ್ಲಿ ರಜನೀಶ್ ತೆರೆಸಾರನ್ನು ಅವಲೋಕಿಸಿದ ಪರಿ ಇಂತಿದೆ:

ವಂಚಕಿ ಎಂದು ನಾನು ಆಕೆಯನ್ನು ಕರೆದದ್ದು ಕೇವಲ ಆಕೆ ಬೇರೆಯವರನ್ನು ವಂಚಿಸುತ್ತಾಳೆಂದಲ್ಲ. ವಂಚನೆಯು ಮೊದಲು ತನ್ನಿಂದಲೇ ಶುರುವಾಗುತ್ತದೆ. ನೀವು ಇತರರನ್ನು ವಂಚಿಸಬೇಕೆಂದುಕೊಂಡರೆ, ಮೊದಲು ನಿಮ್ಮನ್ನು ನೀವು ವಂಚಿಸಿಕೊಳ್ಳಬೇಕಾಗುತ್ತದೆ. ಇದು ಎರಡು ಕಡೆ ಹರಿತವಿರುವ ಖಡ್ಗದ ಹಾಗೆ.

ಮದರ್ ತೆರೆಸಾ ಬಡವರ, ಅನಾಥರ, ವಿಧವೆಯರ ಮತ್ತು ವೃದ್ದರ ಸೇವೆಯನ್ನು ಒಳ್ಳೆಯ ಉದ್ದೇಶವಿಟ್ಟುಕೊಂಡೇ ಮಾಡುತ್ತಿರಬಹುದು. ಆಕೆಯ ಪ್ರಾಮಾಣಿಕತೆಯ ಬಗ್ಗೆ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಆಕೆಯ ಉದ್ದೇಶಗಳು ತಪ್ಪೆಂದೂ ನಾನು ಹೇಳುತ್ತಿಲ್ಲ. ಆದರೆ ಒಳ್ಳೆಯ ಉದ್ದೇಶವಿದ್ದ ಮಾತ್ರಕ್ಕೆ ಫಲಿತಾಂಶವೂ ಒಳ್ಳೆಯದೇ ಆಗಿರಬೇಕೆಂಬ ನಿಯಮವಿಲ್ಲ. ನೀವು ಹೂಗಳೇ ಅರಳದ ಒಂದು ಮುಳ್ಳಿನ ಮರದ ಬೀಜವನ್ನು ಬಿತ್ತಿ ಅದರಿಂದ ಸುಂದರ ಹೂಗಳು ಬೆಳೆಯಬೇಕೆಂದು ನಿರೀಕ್ಷಿಸಿದರೆ  ನಿಮಗೆ ಮುಳ್ಳುಗಳಲ್ಲದೇ ಬೇರೇನು ಸಿಗುವುದಿಲ್ಲ. ಏಕೆಂದರೆ ನೀವು ನೆಟ್ಟಿದ್ದು ಹೂವಿನ ಗಿಡವಲ್ಲ. ಇಲ್ಲಿ ಹೂವನ್ನು ಬೆಳೆಯುವ ನಿಮ್ಮ ಉದ್ದೇಶ ಒಳ್ಳೆಯದೇ ಇರಬಹುದು ಆದರೆ ಫಲಿತಾಂಶವು ಯಾವಾಗಲೂ ನಿಮ್ಮ ಕ್ರಿಯೆಯನ್ನವಲಂಬಿಸಿರುತ್ತದೆ ಹೊರತು ನಿಮ್ಮ ಉದ್ದೇಶಗಳನ್ನಲ್ಲ.

ತೆರೆಸಾ ಬಡವರ ಸೇವೆ ಮಾಡುತ್ತಿರುವುದು ನಿಜ, ಆದರೆ ಬಡವರು ನೂರಾರು ವರ್ಷಗಳಿಂದ ಸೇವೆ ಪಡೆಯುತ್ತಿದ್ದಾರೆ. ಅದರಿಂದ ಬಡತನವನ್ನಂತೂ ನಾಶಮಾಡಲಾಗಿಲ್ಲ. ಬಡವರ ಸೇವೆ ಮಾಡುವುದರಿಂದ ಬಡತನ ನಾಶವಾಗುವುದಿಲ್ಲ. ತೆರೆಸಾರಂತವರು ಬಡವರ ಸೇವೆ ಮಾಡಿ, ಅವರನ್ನು ಸಮಾಜ ತಿರಸ್ಕರಿಸುತ್ತಿಲ್ಲ ಎಂಬ ಭಾವನೆ ಮೂಡಿಸುತ್ತಾರಷ್ಟೇ. ಇಲ್ಲವಾದಲ್ಲಿ ಬಡವರಿಗೆ ತಾವು ತಿರಸ್ಕೃತರು ಎನ್ನಿಸಿ, ಅವರ ಅಸಹಾಯಕತೆ ಕೋಪಕ್ಕೆ ತಿರುಗಿ ಅವರು ಕ್ರೂರಿಗಳಾಗುತ್ತಾರೆ. ಸಮಾಜದ ವಿರುದ್ದ ಬಂಡೇಳುತ್ತಾರೆ. ಬಡವರ, ಅನಾಥರ ಮತ್ತು ವಿಧವೆಯರ ಸೇವೆ ಮಾಡುವಂತೆ ಸೋಗು ಹಾಕುವ ಈ ಮಿಶನರಿಗಳು ನಿಜದಲ್ಲಿ ಅವರನ್ನು ಶೋಷಿಸುತ್ತಿರುತ್ತವೆ. ಮದರ್ ತೆರೆಸಾ ನಡೆಸುವ ಮಿಶನರಿ ಆಫ್ ಚಾರಿಟಿಯಲ್ಲಿ ೭೦೦೦ ಅನಾಥರು ಬಡವರಿಗೆ ನಿತ್ಯ ಊಟ ಹಾಕಲಾಗುತ್ತದೆ. ಅಷ್ಟು ದುಡ್ಡು ಈ ಮಿಶನರಿಗಳಿಗೆ ಎಲ್ಲಿಂದ ಬರುತ್ತದೆ?

೧೯೭೪ ರಲ್ಲಿ ಪೋಪ್ ಮದರ್ ತೆರೆಸಾಗೆ ಒಂದು ಕಾಡಿಲ್ಯಾಕ್ ಕಾರನ್ನು ಉಡುಗೊರೆಯಾಗಿ ಕೊಟ್ಟರು. ಆಕೆ ತಕ್ಷಣ ಅದನ್ನು ಮಾರಿ, ಅದರಿಂದ ಬಂದ ಹಣವನ್ನು ಬಡವರಿಗಾಗಿ ಖರ್ಚು ಮಾಡಿದರು. ಎಲ್ಲರೂ ಅದನ್ನು ಹೊಗಳಿದರು. ಆದರೆ ನನ್ನ ಪ್ರಶ್ನೆ ಆ ಕಾರು ಕೊಳ್ಳಲು ಹಣ ಬಂದಿದ್ದಾದರೂ ಎಲ್ಲಿಂದ? ಪೋಪ್ ಹಣವನ್ನು ಧಿಡೀರ್ ಎಂದು ಉತ್ಪತ್ತಿ ಮಾಡಿರಲಿಕ್ಕಿಲ್ಲ. ಆತನು ಅದನ್ನು ಶೇಖರಿಸಿಟ್ಟಿದ್ದ. ಒಂದು ಕಾರನ್ನು ಉಡುಗೊರೆಯಾಗಿ ನೀಡುವಷ್ಟು ದುಡ್ಡು
ಪೋಪನ ಬಳಿ ಇತ್ತು. ಮತ್ತು ಆತನ ಹತ್ತಿರ ಜಗತ್ತಿನ ಎಲ್ಲ ಶ್ರೀಮಂತರ ಬಳಿ ಇರುವಷ್ಟೇ ಹಣವಿದೆ. ಆ ದುಡ್ಡು ಎಲ್ಲಿಂದ ಬಂತು? ಆತ ಕೂಡಿಟ್ಟ ದುಡ್ಡಿನ ಶೇಕಡ ೧ ರಷ್ಟೂ ಅಲ್ಲದ ದುಡ್ಡು ಬಡವರ ಸೇವೆಗೆಂದು ಮೀಸಲು. ಈ ಮಿಶನರಿ ಆಫ್ ಚಾರಿಟಿಗಳು ನಿಜದಲ್ಲಿ ಬಂಡವಾಳಶಾಹಿಗಳ ಸೇವೆ ಮಾಡುತ್ತವೆ. ಆದರೆ ಬಡವರ ಸೇವೆ ಮಾಡುತ್ತಿರುವಂತೆ ಸೋಗುಹಾಕುತ್ತವೆ. ಇದರಿಂದ ಬಡವರ ಮನದಲ್ಲಿ ಇದೊಂದು ಉತ್ತಮ ಸಮಾಜ ಹಾಗೂ ಇದರ ವಿರುದ್ದ ನಾವು
ದನಿಯೆತ್ತಬಾರದೆಂಬ ಭಾವ ಗಾಢವಾಗುತ್ತದೆ. ಮಿಶನರಿಗಳು ರೈಲ್ವೆ ಬೋಗಿಗಳೆರಡಕ್ಕೂ ಘರ್ಷಣೆಯಾಗದಂತೆ ಇರಲು ಬಳಸುವ ಕೀಲೆಣ್ಣೆಗಳ ತರಹ ಕೆಲಸ ಮಾಡುತ್ತವೆ. ಬಡವರ ಮನದಲ್ಲಿ ಆಶೆ ಹುಟ್ಟಿಸಿ ಅವರು ಸಮಾಜದ ವಿರುದ್ದ ಹೋರಾಡದೆ ಅದರ mother_teresa ಗುಲಾಮನಾಗುವಂತೆ ಮಾಡುವುದೇ ಇವರ ಮೂಲ ಉದ್ದೇಶವಾಗಿರುತ್ತದೆ.

ಮದರ್ ತೆರೆಸಾಗೆ ನೊಬೆಲ್ ಪ್ರಶಸ್ತಿ ನೀಡಬಾರದಿತ್ತೆಂದು ನಾನು ಹೇಳಿದ್ದೇನೆ. ಇದರಿಂದ ಆಕೆ ಕೋಪಗೊಂಡಂತಿದೆ. ಆದರೆ ಈ ನೊಬೆಲ್ ಎನ್ನುವ ಮನುಷ್ಯ ಜಗತ್ತಿನ ಅತಿ ದೊಡ್ಡ ಪಾತಕಿಗಳಲ್ಲೊಬ್ಬ. ಮೊದಲನೇ ಮಹಾಯುದ್ದವು  ಈತನಿಂದ ಖರೀದಿಸಿದ ಶಸ್ತ್ರಾಸ್ತ್ರಗಳಿಂದಲೇ ನಡೆದದ್ದು. ಈತನು ಮೊದಲನೆ ಮಹಾಯುದ್ದದಿಂದ ಸಾಕಷ್ಟು ಹಣ ಸಂಗ್ರಹಿಸಿದ. ಅಮಾಯಕ ಜನರನ್ನು ಕೊಂದ. ಸಾವಿನ ಸರದಾರನಾಗಿದ್ದ. ಈತ ಸಂಗ್ರಹಿಸಿಟ್ಟಿದ್ದ ಹಣದ ಬಡ್ಡಿಯನ್ನೇ ಈಗ ಪ್ರತಿ ವರ್ಷವೂ ಡಜನುಗಟ್ಟಲೇ ನೊಬೆಲ್ ಬಹುಮಾನಗಳಾಗಿ, ಇಪ್ಪತ್ತು ಲಕ್ಷದವರೆಗಿನ ಪುರಸ್ಕಾರವಾಗಿ ಹಂಚಲಾಗುತ್ತಿದೆ. ಈ ಹಣ ಆತನಿಗೆ ಎಲ್ಲಿಂದ ಬಂತು? ಹೀಗೆ ಸಹಸ್ರಾರು ಜನರ ರಕ್ತದಿಂದ ಬಂದ ಹಣ ಮಿಶನರಿಯಾದ ಮದರ್ ತೆರೆಸಾಗೆ ಕೊಡಲಾಗುತ್ತದೆ ಮತ್ತು ಅದನ್ನು ಆಕೆ ೭೦೦೦ ಜನ ಬಡವರ ಶುಶ್ರೂಶೆಗೆ ಬಳಸುತ್ತಾರೆ. ಮೊದಲು ಸಹಸ್ರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಅನಾಥರಾಗಿಸಿ ಬಂದ ದುಡ್ಡಿನಿಂದ ೭೦೦೦ ಅನಾಥರ, ಬಡವರ ವೃದ್ಧರ ವಿಧವೆಯರ ಶುಶ್ರೂಷೆ ಮಾಡುವುದು ಯಾವ ನ್ಯಾಯ?

ಇಷ್ಟೆಲ್ಲಾ ಗೊತ್ತಿದ್ದು ಮದರ್ ತೆರೆಸಾ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಲಿಲ್ಲ. ಗೌರವ ಪ್ರತಿಷ್ಠೆ ಪಡೆಯುವ ಹಂಬಲ ಆಕೆಯಲ್ಲಿ ಯಾವತ್ತೂ ಇದೆ. ಹಾಗಾಗಿ ಆಕೆ ನೊಬೆಲ್ ಬಹುಮಾನವನ್ನು ಒಪ್ಪಿಕೊಂಡರು. ಒಬ್ಬ ಧರ್ಮನಿಷ್ಠ ವ್ಯಕ್ತಿಯು ಸಮಾಜದ ಕಟ್ಟುಪಾಡುಗಳನ್ನು ಉಲ್ಲಂಘಿಸಿಯಾದರೂ ಧರ್ಮದ ಪ್ರತಿಷ್ಠಾಪನೆ ಮಾಡುತ್ತಾನೆ. ಸಮಾಜವು ಆತನನ್ನು ತಿರಸ್ಕರಿಸುತ್ತದೆ,ಅಲ್ಲಗೆಳೆಯುತ್ತದೆ. ಆದರೆ ಮದರ್ ತೆರೆಸಾರನ್ನು ಸನ್ಯಾಸಿನಿ ಎಂದು ಉಪ್ಪರಿಗೆ ಮೇಲೆ ಕೂರಿಸಲಾಗುತ್ತಿದೆ. ಮದರ್ ತೆರೆಸಾ ಸರಿಯೆಂದಾದರೆ ಜೀಸಸ್‌ನನ್ನು ಅಲ್ಲಗೆಳೆಯಬೇಕಾಗುತ್ತದೆ. ಜೀಸಸ್ ಸರಿ ಎಂದಾದಲ್ಲಿ ಮದರ್ ತೆರೆಸಾ ಸೋಗುಗಾರ್ತಿ ಅಲ್ಲದೆ ಮತ್ತೇನು ಅಲ್ಲ. ಕಪಟಿಗಳು ಸೋಗು ಹಾಕುವವರು ಯಾವಾಗಲೂ ಜನರಿಂದ ಸಮಾಜದಿಂದ ಗೌರವ ಪಡೆಯುತ್ತಾರೆ. ಏಕೆಂದರೆ ಅವರು ಸಮಾಜಕ್ಕೆ ಜನರಿಗೆ ಬೇಕಾದ ರೀತಿಯಲ್ಲಿ ಬದಲಾಗಬಲ್ಲರು.

***

ಪ್ರೊಟೆಸ್ಟನ್ಟ್ ಕ್ರಿಶ್ಚಿಯನ್ ದಂಪತಿಗಳಿಗೆ ತನ್ನ ಅನಾಥಾಲಯದಿಂದ ಮಗುವನ್ನು ದತ್ತು ಕೊಡಲು ನಿರಾಕರಿಸಿದ ಮದರ್ ತೆರೆಸಾ ನೀಡಿದ ಕಾರಣ, ಆ ಸಮಯದಲ್ಲಿ ಆಕೆಯ ಆಶ್ರಮದಲ್ಲಿ ಅನಾಥ ಮಕ್ಕಳು ಇರಲಿಲ್ಲ ಎಂದು! ೭೦೦೦ ಜನರ ಅನಾಥಾಶ್ರಮ ನಡೆಸುತ್ತಿರುವ ಆಕೆ ಚಾರಿಟಿ ಮಿಶನರಿನಲ್ಲಿ ದತ್ತು ಕೊಡಲು ಒಂದೇ ಒಂದು ಅನಾಥ ಮಗುವಿಲ್ಲ! ಅದು ಭಾರತದಂತಹ ದೇಶದಲ್ಲಿ ಅನಾಥ ಮಗುವಿಗೆ ಕೊರತೆಯೇ? ಭಾರತೀಯರಂತು ಅಗತ್ಯಕ್ಕಿಂತ ಹೆಚ್ಚಾಗಿ ಅನಾಥರನ್ನು ಹುಟ್ಟುಹಾಕುವಲ್ಲಿ ನಿಷ್ಣಾತರು.

ಆದರೆ ನಿಜ ವಿಷಯ ಬೇರೆಯದೆ ಇತ್ತು. ಆ ಪ್ರೊಟೆಸ್ಟಂಟ್ ದಂಪತಿಗಳು ಅದಾಗಲೇ ಮಗುವನ್ನು ನೋಡಿ ದತ್ತಕಕ್ಕೆ ಒಪ್ಪಿಯಾಗಿತ್ತು. ಮದರ್ ತೆರೆಸಾಗೆ ಕುಟುಕಿದ್ದು ಅವರು ಆಕೆ ನೀಡಿದ ಫಾರಂನಲ್ಲಿ ತಾವು ಪ್ರೊಟೆಸ್ಟಂಟ್ ಚರ್ಚಿಗೆ ಸಂಬಂಧಿಸಿದವರೆಂದು ದಾಖಲು ಮಾಡಿದುದು. ಮಗುವನ್ನು ಕೊಡದೆ ಇರಲು ಆಕೆ ನೀಡಿದ ನೇರ ಕಾರಣ ’ಇಲ್ಲಿನ ಮಕ್ಕಳು ರೋಮನ್ ಕ್ಯಾಥೋಲಿಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ, ಅವರನ್ನು ಪ್ರೊಟೆಸ್ಟಂಟ್ ಗಳಾಗಿಸುವುದು ಅವರ ಮಾನಸಿಕ ವಿಕಾಸಕ್ಕೆ ಧಕ್ಕೆ ತರಬಹುದು. ಹಾಗಾಗಿ ನಿಮಗೆ ಮಗುವನ್ನು ಕೊಡಲು ಆಗುವುದಿಲ್ಲ’. ಇದರಿಂದ ದತ್ತು ತೆಗೆದುಕೊಳ್ಳಲು ಬಂದ ದಂಪತಿಗಳಿಗೆ ಆದ ಆಘಾತ ಅಷ್ಟಿಷ್ಟಲ್ಲ. ಅವರೇನು ಏನೂ ತಿಳಿಯದವರಲ್ಲ, ಅವರಲ್ಲಿ ಗಂಡನು ಯುರೋಪಿಯನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿದ್ದಾರೆ.

ನಿಮಗೆ ಒಂದು ವಿಷಯ ತಿಳಿದಿರಲಿ ಆ ಅನಾಥ ಮಕ್ಕಳೆಲ್ಲ ಮೂಲ ಹಿಂದುಗಳಾಗಿದ್ದವರು. ಮದರ್ ತೆರೆಸಾಗೆ ಆ ಮಕ್ಕಳ ಮಾನಸಿಕ ವಿಕಾಸದ ಬಗ್ಗೆ ಆಷ್ಟು ಕಾಳಜಿ ಇದ್ದಿದ್ದೇ ಆಗಿದ್ದರೆ ಆಕೆ ಹಿಂದುಗಳಾಗಿದ್ದ ಅವರನ್ನು ಹಿಂದುಗಳಾಗಿಯೇ ಬೆಳೆಸಬೇಕಿತ್ತು. ಅವರನ್ನು ರೋಮನ್ ಕ್ಯಾಥೋಲಿಕ್ ಗಳಾಗಿ ಮತಾಂತರಿಸಿದ್ದೇಕೆ? ಈಗ ಅವರನ್ನು ಪ್ರೊಟೆಸ್ಟೆಂಟ್ ಗಳಾಗಿ ಮಾಡಿದರೆ ಆಗುವ ಹಾನಿಯೇನು? ಪ್ರೊಟೆಸ್ಟೆಂಟ್ ಮತ್ತು ಕ್ಯಾಥೋಲಿಕ್ ಎರಡೂ ಒಂದೇ ಸಿಗರೇಟಿನ ಎರೆಡು ಬ್ರಾಂಡ್ ಗಳಿದ್ದಂತೆ. ಅದೇ ಪೇಪರ್, ಅದೇ ತಂಬಾಕು, ತಯಾರಕನೂ ಒಬ್ಬನೇ ಹೆಸರುಗಳು ಬೇರೆ ಅಷ್ಟೇ!

ಕೆಲವೇ ದಿನಗಳ ಹಿಂದೆ ಪಾರ್ಲಿಮೆಂಟಿನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆಯಾಯಿತು. ಅದರ ಉದ್ದೇಶ ಹೀಗಿತ್ತು: ಯಾರೊಬ್ಬರಿಗೂ ಒಬ್ಬ ವ್ಯಕ್ತಿಯನ್ನು ಒಂದು ಧರ್ಮ ಅಥವಾ ಮತಕ್ಕೆ ಮತಾಂತರವಾಗುವಂತೆ  ಬಲವಂತಪಡಿಸಕೂಡದು ಎಂದು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮದರ್ ತೆರೆಸಾ ಪ್ರೈಮ್ ಮಿನಿಸ್ಟರ್ ಗೆ ಪತ್ರ ಬರೆದು ವಿರೋಧಿಸಿದರು. ಕ್ರಿಶ್ಚಿಯನ್ ಓಟುಗಳ ಹಿಂದೆ ಬಿದ್ದಿದ್ದ ರಾಜಕಾರಣಿಗಳು ಆಕೆಯ ಪತ್ರವನ್ನು ಮನ್ನಿಸಿ
ಧಾರ್ಮಿಕ ಸ್ವಾತಂತ್ರ್ಯದ ವಿಷಯ ಕೈಬಿಟ್ಟರು.

ಮದರ್ ತೆರೆಸಾ ನಿಜವಾಗಿಯೂ ಮತಾಂತರ ಮಾನಸಿಕ ವಿಕಾಸವನ್ನು ತಡೆಯುತ್ತದೆ ಎಂದು ನಂಬಿದ್ದರೆ ಆಕೆ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿರಬೇಕಿತ್ತು. ಒಬ್ಬ ವ್ಯಕ್ತಿಯನ್ನು ಬಲವಂತದಿಂದ ಮತಾಂತರಿಸುವುದಕ್ಕೆ ವಿರೋಧಪಡಿಸಬೇಕಿತ್ತು. ಮದರ್ ತೆರೆಸಾ ಶುದ್ದ ಕಪಟಿ, ಆಕೆ ಹೇಳುವುದು ಒಂದು ಮಾಡುವುದು ಒಂದು ಎಂದು ಇದರಿಂದ ತಿಳಿಯುತ್ತದೆ.ನಾನು ಕಪಟಿ, ವಂಚಕಿ, ಸೋಗುಗಾರ್ತಿ ಎಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಮದರ್ ತೆರೆಸಾ,
ನಾನು ನಿಮ್ಮನ್ನು ಅಪಾರ ಪ್ರೀತಿಯಿಂದ ಕ್ಷಮಿಸಿದ್ದೇನೆ ಎಂದಿದ್ದಾರೆ. ಪ್ರೀತಿಯಿದ್ದಲ್ಲಿ ಕ್ಷಮಿಸಬೇಕಾಗಿ ಬರುವುದಿಲ್ಲ, ಕೋಪವಿದ್ದರಷ್ಟೇ ಕ್ಷಮೆಯಿರುವುದು. ಕೋಪವನ್ನು ಮೀರಲೆಂದೇ ನಾನು ಧ್ಯಾನ ಮಾಡಬೇಕೆನ್ನುವುದು. ನಾನು ಮದರ್ ತೆರೆಸಾಳನ್ನು ಕ್ಷಮಿಸುವುದಿಲ್ಲ ಏಕೆಂದರೆ ನಾನು ಆಕೆಯ ಬಗ್ಗೆ ಕೋಪಗೊಂಡಿಲ್ಲ.

ಇಷ್ಠಕ್ಕೂ ನಾನು ಯಾವ ಪಾಪ ಮಾಡಿದ್ದೇನೆಂದು ಆಕೆ ನನ್ನನ್ನು ಕ್ಷಮಿಸಬೇಕು? ಎಲ್ಲವೂ ಈ ಕ್ಯಾಥೋಲಿಕ್ಕರ ಮೂರ್ಖತನ. ಅವರು ಎಲ್ಲರನ್ನೂ ಎಲ್ಲವನ್ನು ಕ್ಷಮಿಸುತ್ತಾ ತಿರುಗುತ್ತಾರೆ.

ಮದರ್ ತೆರೆಸಾರನ್ನು ಕಪಟಿ ವಂಚಕಿ ಸೋಗುಗಾತಿ ಎಂದು ಕರೆದದ್ದಕ್ಕೆ ನನಗೆ ಚೂರೂ ಪಶ್ಚಾತ್ತಾಪವಿಲ್ಲ ಹಾಗೂ ಮುಂದುವರೆದು ನಾನು ಆಕೆಯನ್ನು  ಮೂರ್ಖಳು, ಮಧ್ಯವರ್ತಿ ಹಾಗೂ ತಿಳಿಗೇಡಿಯೆಂದೂ ಕರೆಯಲು ಇಚ್ಚಿಸುತ್ತೇನೆ. ಮತ್ತು ಅಪಾರ ಪ್ರೀತಿಯಿಂದ ನನ್ನನ್ನು ಕ್ಷಮಿಸಿದ ಆಕೆಗೆ ಸ್ಪಷ್ಠವಾಗಿ ತಿಳಿಯಪಡಿಸುವುದೇನೆಂದರೆ ಕ್ಷಮಿಸಬೇಕಾಗಿರುವುದು ಆಕೆಯನ್ನು ಮತ್ತು ಆಕೆಯಂತಹ ಮಿಶನರಿಗಳನ್ನಲ್ಲದೇ ನನ್ನನ್ನಲ್ಲ. ಏಕೆಂದರೆ ಆಕೆ ಮತ್ತು ಇತರ ಮಿಶನರಿಗಳು ಕ್ಷಮಿಸಲಾರದಂತಹ ಪಾಪವನ್ನು ಮಾಡುತ್ತಿರುವರು.

ಗರ್ಭಪಾತವೆಂಬ ಪಾಪದ ವಿರುದ್ದ ನಾನು ದತ್ತು ತೆಗೆದುಕೊಳ್ಳುವುದರ ಮೂಲಕ ಹೋರಾಡುತ್ತೇನೆ ಎಂದಿದ್ದಾರೆ.

ಗರ್ಭಪಾತವು ಪಾಪವಲ್ಲವೇ ಅಲ್ಲ. ಅದೂ ಭಾರತದಂತಹ ಅತಿ ಜನಸಂಖ್ಯೆಯ ರಾಷ್ಟ್ರದಲ್ಲಿ ಅದೊಂದು ಪವಿತ್ರ ಕೆಲಸ. ಒಂದು ವೇಳೆ ಗರ್ಭಪಾತವು ಪಾಪವೆಂದಾದರೆ ಅದಕ್ಕೆ ಕಾರಣ ಈ ಪೋಲಾಕ್ ಪೋಪ್, ಮದರ್ ತೆರೆಸಾ ಮತ್ತು ಸಂಗಡಿಗರು. ಏಕೆಂದರೆ ಇವರು ಮತ್ತು ಇವರ ಸಂಘವು ಗರ್ಭನಿರೋಧಕಗಳಿಗೆ ವಿರೋಧ ಒಡ್ಡುತ್ತದೆ. ಅತಿ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿರುವ ಪ್ರಪಂಚದಲ್ಲಿ ಗರ್ಭನಿರೋಧಕವು ಆಧುನಿಕ ವಿಜ್ಞಾನದ ವರವಾಗಿದೆ ಮತ್ತು ಇದನ್ನು ತಪ್ಪು ಎಂದು ಹೇಳುವವರು ಕ್ಷಮಿಸಲು ಅನರ್ಹವಾದ ಅಪರಾಧ ಮಾಡುತ್ತಿದ್ದಾರೆ. ಜನಸಂಖ್ಯೆ ಕಡಿಮೆಯಾಗಿ ಜನರೆಲ್ಲಾ ನೆಮ್ಮದಿಯಿಂದ ಬಾಳುವಂತಾದರೆ, ಭೂಮಿಯ ಮೇಲೆ ಸ್ವರ್ಗ ಉಂಟಾಗಲಿದೆ, ಹಾಗದಲ್ಲಿ ಮದರ್ ತೆರೆಸಾರ ಮತ್ತು ಮಿಶನರಿ ಆಫ್ ಚಾರಿಟಿಗಳಿಗೆ ಬಡವರು ಅನಾಥರು ಇಲ್ಲದಂತಾಗಿ ಅವರು ಸ್ವರ್ಗದ ದಾರಿಯನ್ನು ತೋರುವುದಾದರು ಯಾರಿಗೆ? ನಿಜ ಹೇಳಬೇಕೆಂದರೆ ಗರ್ಭಪಾತಗ ಮತ್ತು ಗರ್ಭ ನಿರೋಧಕಗಳನ್ನು ವಿರೋಧಿಸುವ ಈ ಜನರೇ ಅನಾಥರ ಸೃಷ್ಠಿಗೆ ಕಾರಣ. ಇವರೇ  ಅನಾಥರನ್ನು ಸೃಷ್ಟಿಸುತ್ತಾರೆ ನಂತರ ಅವರ ಸೇವೆ ಮಾಡುತ್ತಾರೆ. ಆಹಾ! ಎಂಥ ಸುಂದರ ಕೆಲಸ ಇವರದು.

ನಾನು ಇಬ್ಬರು ಸಹೋದರರ ಬಗ್ಗೆ ಕೇಳಿದ್ದೆ. ಇಬ್ಬರಲ್ಲಿ ಒಬ್ಬ ದಿನವೂ ರಾತ್ರಿ ಹಳ್ಳಿಯ ಮನೆಗಳ ಮುಂದೆಲ್ಲಾ ಸಾಕಷ್ಟು ಕಸ ಹರಡಿ ಬರುತ್ತಿದ್ದ. ಮಾರನೆಯ ಬೆಳಿಗ್ಗೆ ಇನ್ನೊಬ್ಬ ಸಹೋದರನು ತಾನು ಕಸ ತೆಗೆದು ಶುಚಿ ಮಾಡಿಕೊಡುವುದಾಗಿ ಹಳ್ಳಿಯ ಬೀದಿಗಳಲ್ಲಿ ಕೂಗುತ್ತಾ ಸಾಗುತ್ತಿದ್ದ. ಮನೆಯ ಮುಂದೆ ಆಗಲೇ ಸಾಕಷ್ಟು ಕಸ ಇರುತ್ತದಾದ್ದರಿಂದ ಜನ ಶುಚಿ ಮಾಡಿಸಲು ಮುಗಿಬೀಳುತ್ತಿದ್ದರು. ಒಬ್ಬನು ಇಲ್ಲಿ ಕೆಲಸ ಮುಗಿಸುವಷ್ಟರಲ್ಲೇ ಇನ್ನೊಬ್ಬ
ಸಹೋದರ ಮತ್ತೊಂದು ಹಳ್ಳಿಯಲ್ಲಿ ಕಸ ಚೆಲ್ಲಿರುತ್ತಿದ್ದ ಹೀಗೆ ಅವರಿಬ್ಬರೂ ಸಾಕಷ್ಟು ಹಣ ಮಾಡುತ್ತಿದ್ದರು.

ಮದರ್ ತೆರೆಸಾ ಮತ್ತು ಆಕೆಯ ಸಂಗಡಿಗರು ಮಾಡುತ್ತಿರುವುದೂ ಇದನ್ನೇ! ಗರ್ಭನಿರೋಧಕವನ್ನು ವಿರೋಧಿಸುವುದು, ಗರ್ಭಪಾತವನ್ನು ವಿರೋಧಿಸುವುದು, ಜನಸಂಖ್ಯೆ ನಿಯಂತ್ರಣದ ಎಲ್ಲ ಸೂತ್ರಗಳನ್ನೂ ವಿರೋಧಿಸುವುದು ಆಗ ಬಡವರ ದೀನರ ಅನಾಥರ ಸಂಖ್ಯೆ ತಂತಾನೆ ಹೆಚ್ಚುತ್ತದೆ. ಇವರು ಅವರಿಗೆ ಸೇವೆ ಮಾಡುತ್ತಾರೆ! ಸೇವೆಯಿಂದ ಸ್ವರ್ಗ ಸಿಗುತ್ತದೆ! ಬಡವರು ಅನಾಧರು ಸ್ವರ್ಗದ ದಾರಿಗೆ ಮೆಟ್ಟಿಲುಗಳು!

ನಾನು ಬಡತನವನ್ನು ನಾಶ ಮಾಡಲು ಬಯಸುತ್ತೇನೆಯೆ ವಿನಹ ಬಡವರ ಸೇವೆ ಮಾಡಲು ತಯಾರಿಲ್ಲ. ಎಲ್ಲರೂ ಸಾಕಷ್ಟು ಮಾಡಿಯಾಯಿತು. ೧೦೦೦೦ ವರ್ಷದಿಂದ ಬಡವರ ಸೇವೆ ನಡೆಯುತ್ತಲೇ ಇದೆ. ಆದರೆ ಬಡತನ ಇನ್ನೂ ಹೋಗಿಲ್ಲ. ನಮ್ಮಲ್ಲೀಗ ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನದಿಂದ ಬಡತನವನ್ನು ನಾಶ ಮಾಡಲು ಸಾಧ್ಯ.

ಮದರ್ ತೆರೆಸಾ ಒಬ್ಬ ಮೂರ್ಖ ಸಂಪ್ರಯದಾಯವಾದಿಯಲ್ಲದೇ ಮತ್ತೇನು ಅಲ್ಲ. ನಾನಿಷ್ಟು ಹೊತ್ತು ಆಕೆಯನ್ನು ಮದರ್ ಎಂದು ಕರೆದೆ. ಇನ್ನು ಮುಂದೆ ಹಾಗೆ ಕರೆಯುವುದನ್ನು ನಿಲ್ಲಿಸಬೇಕೆಂದಿದ್ದೇನೆ. ಆಕೆ ನನ್ನನ್ನು ಡಿಯರ್ ಮಿಸ್ಟರ್ ರಜನೀಶ್ ಎಂದಿದ್ದಾಳೆ ನಾನು ಆಕೆಯನ್ನು ಗೌರವಯುತವಾಗಿ ಡಿಯರ್ ಮಿಸ್ ತೆರೆಸಾ ಎನ್ನಬೇಕೆಂದಿದ್ದೇನೆ!

ಏನನ್ನೂ ಕೈಬಿಡದೆ ಎಲ್ಲವನ್ನೂ ಪಡೆಯುವುದು ತ್ಯಾಗ ಅನ್ನಿಸಿಕೊಳ್ಳಲಾರದು October 23, 2009

Posted by uniquesupri in ಓಶೋ ಹೇಳಿದ್ದು.
Tags: , , , ,
1 comment so far

ನಾನೊಂದು ಹಳ್ಳಿಗೆ ಹೋಗಿದ್ದೆ. ಅಲ್ಲಿ ಒಬ್ಬಾತ ಹೇಳುವುದನ್ನು ಕೇಳಿದೆ, “ವೈರಾಗ್ಯವೇ ನಿಜವಾದ ಧರ್ಮ. ತ್ಯಾಗದಿಂದ ವೈರಾಗ್ಯ ಸಾಧ್ಯ. ಕಷ್ಟಕರವಾದ ಸಾಧನೆ ಹಾಗೂ ಶಿಸ್ತಿನಿಂದ ವೈರಾಗ್ಯವನ್ನು ಸಾಧಿಸಬಹುದು.”

ಇದನ್ನು ಕೇಳುತ್ತಿದ್ದ ಹಾಗೆ ನನಗೆ ನನ್ನ ಬಾಲ್ಯದಲ್ಲಿ ನಡೆದ ಘಟನೆಯೊಂದು ನೆನಪಾಯ್ತು. ನದೀ ತೀರಕ್ಕೆ ನಾವು ಪಿಕ್‌ನಿಕ್‌ಗೆಂದು ತೆರಳಿದ್ದೆವು. ನದಿ ಚಿಕ್ಕದಿದ್ದರೂ ಅದರ ಮರಳ ದಂಡೆ ವಿಶಾಲವಾಗಿ ಹರಡಿಕೊಂಡಿತ್ತು. ಆ ದಂಡೆಯ ಮೇಲೆ ಬಣ್ಣ ಬಣ್ಣದ ಹೊಳೆಯುವ ಕಲ್ಲುಗಳ ರಾಶಿಯೇ ಇತ್ತು. ಅದ್ಭುತವಾದ ಸಂಪತ್ತನ್ನು ಎಡವಿ ನಿಂತ ಅನುಭವ ನನಗಾಯ್ತು. ಸಂಜೆಯಾಗುವಷ್ಟರಲ್ಲಿ ನಾನು ಅದೆಷ್ಟು ಕಲ್ಲುಗಳನ್ನು ಒಟ್ಟುಗೂಡಿಸಿದ್ದೆನೆಂದರೆ, ಅವನ್ನು ಹೊತ್ತೊಯ್ಯುವುದೇ ಅಸಾಧ್ಯವಾಗಿತ್ತು. ಅವನ್ನು ಅಲ್ಲಿಯೇ ಬಿಟ್ಟು ಹೊರಡುವಾಗ ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ನನ್ನ ಸಂಗಡಿಗರಿಗೆ ಆ ಕಲ್ಲುಗಳ ಬಗೆಗಿದ್ದ ನಿರಾಸಕ್ತಿಯನ್ನು ಕಂಡು ನನಗೆ ವಿಪರೀತ ಆಶ್ಚರ್ಯವಾಗಿತ್ತು,

ಆ ದಿನ ಅವರು ನನಗೆ ಅತಿ ದೊಡ್ಡ ವಿರಾಗಿಗಳಾಗಿ ಕಂಡಿದ್ದರು. ಇವತ್ತು ನನಗೆ ಅನ್ನಿಸುವುದೆಂದರೆ, ಒಮ್ಮೆ ಕಲ್ಲುಗಳನ್ನು ಅವು ಕಲ್ಲುಗಳು ಎಂದು ತಿಳಿದ ಮೇಲೆ ತ್ಯಾಗದ, ವೈರಾಗ್ಯದ ಪ್ರಶ್ನೆಯೇ ಹುಟ್ಟದು.

ಅಜ್ಞಾನವೇ ಲೋಲುಪತೆ.

ತಿಳುವಳಿಕೆಯೇ ವೈರಾಗ್ಯ.

ವೈರಾಗ್ಯ ಎಂಬುದು ಸಾಧಿಸಬೇಕಾದ ಸಂಗತಿಯಲ್ಲ. ಅದು ನೀವು ಮಾಡಬೇಕಾದ ಕೆಲಸವಲ್ಲ. ಅದು ತಾನಾಗಿ ಸಂಭವಿಸುವಂಥದ್ದು. ತಿಳುವಳಿಕೆಯಿಂದ ಹುಟ್ಟುವ ಸಹಜವಾದ ಮನಸ್ಥಿತಿಯದು. ಲೋಲುಪತೆ ಯಾಂತ್ರಿಕವಾದದ್ದು. ಅದೂ ಸಹ ನೀವು ಮಾಡಿದ ಕೆಲಸವಲ್ಲ. ನಿಮ್ಮ ಅಜ್ಞಾನದಿಂದ ಸಹಜವಾಗಿ ಹುಟ್ಟುವಂಥದ್ದು.

ಹೀಗಾಗಿ ವೈರಾಗ್ಯವೆಂಬುದು ಅತಿ ಪ್ರಯಾಸಕರವಾದ ಕೆಲಸ ಎಂಬ ಕಲ್ಪನೆ ಅರ್ಥಹೀನವಾದದ್ದು. ಮೊದಲಿಗೆ, ಅದು ನೀವು ಮಾಡಬಹುದಾದಂತಹ ಕೆಲಸವಲ್ಲ- ಕೆಲಸಗಳು ಮಾತ್ರ ಪ್ರಯಾಸಕರವಾಗಿರಬಲ್ಲವು- ಅದೊಂದು ಪರಿಣಾಮ. ಎರಡನೆಯದಾಗಿ, ವೈರಾಗ್ಯದಲ್ಲಿ ಬಿಟ್ಟು ಹೋಗುವಂತೆ ಕಾಣುವ ಸಂಗತಿಯು ಕ್ಷುಲ್ಲಕವಾದದ್ದು. ಪಡೆಯುವಂಥದ್ದು ಅಮೂಲ್ಯವಾದದ್ದು.

ನಿಜಕ್ಕೂ, ತ್ಯಾಗವೆಂಬ ಸಂಗತಿ ಇಲ್ಲವೇ ಇಲ್ಲ. ಏಕೆಂದರೆ ನಾವು ಬಿಟ್ಟುದಕ್ಕಿಂತ ಎಷ್ಟೋ ಪಾಲು ಹೆಚ್ಚಿನದನ್ನು ಪಡೆಯುತ್ತೇವೆ. ನಿಜ ಸಂಗತಿಯೆಂದರೆ, ನಾವು ಬಿಡುವುದು ಕೇವಲ ಸಂಕೋಲೆಯನ್ನು, ಗಳಿಸುವುದು ಬಿಡುಗಡೆಯನ್ನು; ನಾವು ಬಿಡುವುದು ಕೇವಲ ಚಿಪ್ಪುಗಳನ್ನು, ಆದರೆ ಪಡೆಯುವುದು ವಜ್ರಗಳನ್ನು; ನಾವು ಕೈ ಬಿಡುವುದು ಕೇವಲ ಸಾವನ್ನು, ಗಳಿಸುವುದು ಚಿರಂಜೀವಿತ್ವವನ್ನು; ನಾವು ಬಿಡುವುದು ಕತ್ತಲೆಯನ್ನು ಪಡೆಯುವುದು ಅನಂತವಾದ, ಶಾಶ್ವತವಾದ ಬೆಳಕನ್ನು.

ಎಲ್ಲಿದೆ ಇದರಲ್ಲಿ ತ್ಯಾಗ? ಏನನ್ನೂ ಕೈಬಿಡದೆ ಎಲ್ಲವನ್ನೂ ಪಡೆಯುವುದು ತ್ಯಾಗ ಅನ್ನಿಸಿಕೊಳ್ಳಲಾರದು.

ಸಂಶಯವಾದಿಯ ನಂಬಿಕೆಗಳು (ಭಾಗ4) January 15, 2009

Posted by uniquesupri in ಓಶೋ ಹೇಳಿದ್ದು.
1 comment so far

(ಭಾಗ )

ಒಮ್ಮೆ ಹೀಗಾಯಿತು… ಒಬ್ಬ ಖ್ಯಾತ ಸೋಫಿಸ್ಟ್ ಗುರುವಿನ ಬಳಿ ಯುವಕನೊಬ್ಬ ಬಂದ. ಯುವಕ ಆಗರ್ಭ ಶ್ರೀಮಂತನಾಗಿದ್ದ. ಗುರುವು ಬಹುದೊಡ್ಡ ಸಂಭಾವನೆಯನ್ನು ಕೇಳಿದ. ಯುವಕ ಹೇಳಿದ, “ಯೋಚಿಸಬೇಡಿ, ನೀವು ಕೇಳಿದಷ್ಟು ಹಣ ಕೊಡುತ್ತೇನೆ, ಆದರೆ ನನ್ನದೊಂದು ನಿಬಂಧನೆಯಿದೆ. ಸಂಭಾವನೆಯ ಅರ್ಧ ಭಾಗದ ಹಣವನ್ನು ನಾನೀಗ ಕೊಡುತ್ತೇನೆ, ಇನ್ನರ್ಧ ಭಾಗವನ್ನು ನಾನು ನನ್ನ ಮೊದಲ ವಾದವನ್ನು ಗೆದ್ದಾಗ ನೀಡುತ್ತೇನೆ. ಅದು ನೀವು ನನಗೆ ನಿಜವಾಗಿಯೂ ವಾದಕಲೆಯನ್ನು ಕಲಿಸಿರುವಿರೋ ಇಲ್ಲವೇ ಸುಮ್ಮನೆ ಮೋಸ ಮಾಡಿರುವಿರೋ ಎಂಬುದಕ್ಕೆ ಪರೀಕ್ಷೆ.”

ಅವನ ಮಾತು ಸಮಂಜಸವಾಗಿತ್ತು, ಗುರುವಿಗೆ ಅದರಲ್ಲಿ ಯಾವ ಹುಳುಕೂ ಕಾಣಲಿಲ್ಲ, “ನೀನು ಯೋಚಿಸಬೇಡ. ನಾನು ಇಡೀ ಗ್ರೀಸಿನಲ್ಲೇ ಶ್ರೇಷ್ಠನಾದ ಗುರು, ನೀನು ವಾದದಲ್ಲಿ ಗೆದ್ದೇ ಗೆಲ್ಲುವೆ.” osho03

ಅರ್ಧ ಮೊತ್ತವನ್ನು ಯುವಕ ತೆತ್ತ. ಎರಡು ವರ್ಷಗಳಲ್ಲಿ ಯುವಕನನ್ನು ವಾದಕಲೆಯಲ್ಲಿ ಪಾರಂಗತನನ್ನಾಗಿಸಲಾಯಿತು, ಯಾರ ಪರವಾಗಿ ವಾದಿಸಿದರೂ ಗೆಲ್ಲಬಲ್ಲನವನಾಗಿದ್ದ. ಆಸ್ತಿಕವಾದದ ಪರವಾಗಿ ವಾದಿಸಿದರೆ ಅದನ್ನು ಗೆಲ್ಲಬಲ್ಲವನಾಗಿದ್ದ, ಹಾಗೆಯೇ ನಾಸ್ತಿಕವಾದದ ಪರ ನಿಂತು ವಾದಿಸಿದರೆ ಅದನ್ನು ಗೆಲ್ಲಬಲ್ಲವನಾಗಿದ್ದ. ಈಗವನಿಗೆ ವಾದವನ್ನು ಹೇಗೆ ಮಂಡಿಸಬೇಕು, ಹೇಗೆ ಮನವೊಲಿಸಬೇಕು ಎಂಬ ಕಲೆ ಕರಗತವಾಗಿತ್ತು.

ಗುರು ಹೇಳಿದ, “ಇಲ್ಲಿಗೆ ನಿನ್ನ ಶಿಕ್ಷಣ ಮುಗಿಯಿತು. ಇನ್ನರ್ಧ ಹಣವನ್ನು ಪಾವತಿ ಮಾಡು.”

ಆತ ಹೇಳಿದ, “ಆದರೆ ನಾನಿನ್ನೂ ವಿಜಯಿಯಾಗಿಲ್ಲ. ನಮ್ಮ ಒಪ್ಪಂದದ ಪ್ರಕಾರ ನೀವು ಕಾಯಬೇಕು.” ಆ ಯುವಕ ಗುರುವಿಗಿಂತ ಹೆಚ್ಚು ಚಾಣಾಕ್ಷ. ಆತ ಯಾರೊಂದಿಗೂ ವಾದವನ್ನೇ ಮಾಡಲಿಲ್ಲ. ನೀವೇನೇ ಹೆಳಿದರು ಆತ ಹೌದು ಎನ್ನುತ್ತಿದ್ದ. ಯಾವ ವಾದಕ್ಕೂ ಆತ ಇಳಿಯುತ್ತಿರಲಿಲ್ಲವಾದ್ದರಿಂದ ಗೆಲ್ಲುವ ಪ್ರಶ್ನೆಯೇ ಇರಲಿಲ್ಲ. ಹೀಗೆ ಒಂದು ವರ್ಷ ಕಳೆಯಿತು. ಆದರೆ ವೃದ್ಧ ಗುರುವನ್ನು ಹೀಗೆ ಮೋಸ ಮಾಡಲಾಗದು, ಈ ಯುವಕನಸ್ಸು ಅತಿಯಾಯಿತು.

ವೃದ್ಧ ನ್ಯಾಯಾಲಯದಲ್ಲಿ ಯುವಕನ ಮೇಲೆ ಮೊಕದ್ದಮೆ ಹೂಡಿದ. ತನ್ನ ಶಿಕ್ಷಣ ಮುಗಿದ ಮೇಲೆ ಕೊಡುತ್ತೇನೆ ಎಂದಿದ್ದ ಅರ್ಧ ಮೊತ್ತವನ್ನು ಆತ ಪಾವತಿಸಿಲ್ಲ ಎಂದು ಆರೋಪಿಸಿದ. ಗುರುವಿನ ಉಪಾಯ ನಾಜೂಕಿನದಾಗಿತ್ತು. “ಒಂದು ವೇಳೆ ಕೋರ್ಟು ‘ನಿನ್ನ ಹಣವನ್ನು ನೀನು ಪಡೆಯಬೇಕು ಎಂದರೆ ಈ ಯುವಕ ವಾದವನ್ನು ಗೆಲ್ಲಬೇಕು’ ಎಂದರೆ ನಾನು ಸೋತಂತೆ. ಅಂದರೆ ಯುವಕ ವಾದದಲ್ಲಿ ಗೆದ್ದಂತಾಗುತ್ತದೆ. ಆತ ನನ್ನ ಹಣವನ್ನು ಕೊಡಬೇಕಾಗುತ್ತದೆ.” ಹೀಗೆ ಆಲೋಚಿಸಿದ ಆತ ಕೋರ್ಟಿನ ಹೊರಗೆ ಯುವಕನಿಗೆ, “ಈಗ ನೀನು ನಿನ್ನ ಮೊದಲ ಕೇಸು ಗೆದ್ದಿರುವೆ. ನನ್ನ ಹಣವನ್ನು ಕೊಡು” ಎಂದು ಕೇಳಿ ಹಣವನ್ನು ಪಡೆಯಬಹುದು ಎಂದುಕೊಂಡ.

ಆತ ಇನ್ನೊಂದು ಸಾಧ್ಯತೆಯ ಬಗೆಗೂ ಆಲೋಚಿಸಿದ: ತಾನೇನಾದರೂ ಮೊಕದ್ದಮೆ ಗೆದ್ದರೆ – ಅದು ಸಾಧ್ಯವಾಗದು, ಆದರೂ ಆತ ಬಹು ಶ್ರೇಷ್ಠ ವಾದಿಯಾಗಿದ್ದ – ಆಗಲೂ ಸಹ ತಾನು ಯುವಕನಿಗೆ, “ನೀನು ನ್ಯಾಯಾಲಯದ ಅಪ್ಪಣೆಯಂತೆ ನಡೆಯಬೇಕು, ನನಗೆ ಹಣವನ್ನು ಕೊಡಬೇಕು.” ಎನ್ನಬಹುದು. ಆದರೆ ಯುವಕ ತನ್ನ ಶಿಷ್ಯ, ಆತ ತನ್ನೆಲ್ಲಾ ಪಟ್ಟುಗಳನ್ನು ಅರಿತವನಾಗಿದ್ದ ಎಂಬುದು ಗುರುವಿಗೆ ತಿಳಿದಿರಲಿಲ್ಲ.

ಯುವಕ ನ್ಯಾಯಾಲಯದಲ್ಲಿ ತರ್ಕಬದ್ಧವಾಗಿ ವಾದಿಸಿದ. ಅಸಲಿಗೆ ಮೊಕದ್ದಮೆ ಆತನ ಪರವಾಗಿಯೇ ಇತ್ತು. “ನಾನು ನನ್ನ ಮೊದಲ ವಾದವನ್ನು ಗೆಲ್ಲುವವರೆಗೆ ಇನ್ನರ್ಧ ಹಣವನ್ನು ಕೊಡುವುದಿಲ್ಲ.” ಗುರುವಿಗೆ ವಾದದಲ್ಲಿ ಗೆಲ್ಲುವ ಆಸಕ್ರಿಯಿರಲಿಲ್ಲ. ಆತ ಹೇಳಿದ, “ಹೌದು, ಈ ಒಪ್ಪಂದವನ್ನು ನಾವು ಮಾಡಿಕೊಂಡದ್ದು ನಿಜ.” ಕೋರ್ಟಿನಲ್ಲಿ ಆತ ತನ್ನ ಸೋಲು ಒಪ್ಪಿಕೊಂಡ, ಹೊರಗೆ ಯುವಕನನ್ನು “ಈಗ…?” ಎಂದು ಕೇಳಬಹುದು ಎಂದು ಭಾವಿಸುತ್ತಾ.

ಗುರು ಮೊಕದ್ದಮೆ ಸೋತ. ಕೋರ್ಟಿನ ಹೊರಗೆ ಮೆಟ್ಟಿಲುಗಳನ್ನು ಇಳಿಯುವಾಗ ಯುವಕನನ್ನು ಹಿಡಿದು ಪಕ್ಕಕ್ಕೆ ಕರೆದು, “ಹುಡುಗಾ, ಈಗ ನೀನು ನಿನ್ನ ಮೊದಲ ವಾದವನ್ನು ಗೆದ್ದಿರುವೆ. ನನ್ನ ಹಣವನ್ನು ಕೊಟ್ಟು ಬಿಡು.” ಎಂದ.

ಯುವಕ ಹೇಳಿದ, “ನಾನು ನಿಮ್ಮ ಶಿಷ್ಯ, ನನ್ನ ನೀವು ಮೋಸ ಮಾಡಲು ಆಗುವುದಿಲ್ಲ. ನಾನು ನ್ಯಾಯಾಲಯದ ಅಪ್ಪಣೆಯ ವಿರುದ್ಧ ವರ್ತಿಸಲಾರೆ. ಅದು ನ್ಯಾಯಾಲಯದ ನಿಂದನೆಯಾಗುತ್ತದೆ. ಅಷ್ಟಕ್ಕೂ ನೀವು ಒತ್ತಾಯ ಮಾಡುವುದಿದ್ದರೆ, ನ್ಯಾಯಾಲಯದೊಳಕ್ಕೆ ಬಂದು ಮ್ಯಾಜಿಸ್ಟ್ರೇಟ್ ಎದುರು ಕೇಳಿ.”

ಈ ಸೊಫಿಸ್ಟ್ ಪದ್ಧತಿ ಕಾಲಾಂತರಗಳಿಂದ ನಾನಾ ಹೆಸರುಗಳನ್ನು ಪಡೆದುಕೊಂಡು ಮುಂದುವರಿದುಕೊಂಡು ಬಂದಿದೆ- ಈಗ ಇದನ್ನು ಸಂಶಯವಾದ ಎನ್ನುತ್ತಾರೆ. ಸಂಶಯವಾದಿಗೆ ಯಾವ ಸಿದ್ಧಾಂತವೂ ಇರುವುದಿಲ್ಲ, ಹಾಗಾಗಿ ಆತನನ್ನು ನೀವು ಸೋಲಿಸಲು ಸಾಧ್ಯವಾಗುವುದಿಲ್ಲ. ಆತ ಏನನ್ನೂ ಪ್ರತಿಪಾದಿಸುವುದಿಲ್ಲ. ಆತ ಏನನ್ನೂ ಪ್ರತಿಪಾದಿಸದಿದ್ದರೆ ನೀವು ಆತನನ್ನು ಸೋಲಿಸು ಹೇಗೆ ಸಾಧ್ಯ? ಆತನಿಗೆ ಯಾವುದರಲ್ಲೂ ಶ್ರದ್ಧೆ ಇಲ್ಲ. ಹೀಗಾಗಿ ಆತ ಹೆಚ್ಚು ಬಲಿಷ್ಠನಾಗಿರುತ್ತಾನೆ. ನಿಮಗೆ ಶ್ರದ್ಧೆಯಿದೆ, ನಿಮ್ಮ ಶ್ರದ್ಧೆಯಲ್ಲಿ ಆತ ಹುಳುಕುಗಳನ್ನು ಪತ್ತೆ ಹಚ್ಚಬಲ್ಲ, ನಿಮ್ಮನ್ನು ಸೋಲಿಸಬಲ್ಲ.

ಸಂಶಯವಾದಿ ನಂಬಿಕೆಗಳು, ಶ್ರದ್ಧೆಗಳು ಇರುವ ಯಾರ ವಿರುದ್ಧವಾದರೂ ಗೆಲ್ಲಬಲ್ಲ. ಹುರುಳಿಲ್ಲದ ವಾದ ಹಾಗೂ ವಿಜಯಗಳಲ್ಲದೆ ಸಂಶಯವಾಗಿ ಏನನ್ನೂ ಪಡೆದುಕೊಳ್ಳುವುದಿಲ್ಲ. ಮತ್ತು ಆತ ತನ್ನ ವಾದದಲ್ಲಿ ಹೆಚ್ಚು ನಿಷ್ಣಾತನಾಗುತ್ತ ಹೋದಷ್ಟೂ, ಜೀವನ ಇರುವುದು ವಾದಕ್ಕಲ್ಲ, ಜೀವನ ಎಂದರೆ ‘ಇಲ್ಲ’ ಎನ್ನುವುದಲ್ಲ, ‘ಇಲ್ಲ’ ಎನ್ನುವುದು ಸಾವು ಎಂಬುದನ್ನು ಮರೆಯುತ್ತಾ ಹೋಗುತ್ತಾನೆ. ಇಡೀ ಜೀವನ ಇತರರ ವಾದವನ್ನು ಸೋಲಿಸುತ್ತಾ ಹೋಗುವುದರಿಂದ ನಿಮಗೇನು ಸಿಕ್ಕುತ್ತದೆ, ನಿಮ್ಮ ಜೀವನವನ್ನು ನೀವು ಹಾಳು ಮಾಡಿಕೊಳ್ಳುವಿರಿ  ಅಷ್ಟೇ.

ನಾನು ನಿಮಗೆ ಸಂಶಯವಾದವನ್ನು ಕಲಿಸುತ್ತಿಲ್ಲ, ನಾನು ನಿಮಗೆ ಪ್ರಶ್ನಿಸುವ ಕಲೆಯನ್ನು ಕಲಿಸುತ್ತಿರುವೆ. ಪ್ರಶ್ನೆ ನಿಮಗೆ ಇದು ತಪ್ಪು, ಇದು ಇಲ್ಲ ಎಂದು ಹೇಳುವುದಿಲ್ಲ. ಅದು ಹೆಳುವುದಿಷ್ಟೇ, “ನನಗೆ ತಿಳಿದಿಲ್ಲ. ನಾನಿನ್ನೂ ಅದನ್ನು ಅನುಭವಿಸಿಲ್ಲ; ಹೀಗಾಗಿ, ನಾನು ಸತ್ಯವನ್ನು, ನೈಜವಾದದ್ದನ್ನು ಪಡೆಯುವವರೆಗೆ ಪ್ರಶ್ನಿಸುವುದನ್ನು ಬಿಡುವುದಿಲ್ಲ. ಅನಂತರ ನಾನು ಬರೀ ‘ಹೌದು’ ಆಗಿರುತ್ತೇನೆ- ಆದರೆ ಅದಕ್ಕೆ ಮುನ್ನ ಅಲ್ಲ.”

ಪ್ರಶ್ನೆಗಳಿರುವ ಮನುಷ್ಯ, ಹೌದು ಪ್ರಶ್ನೆಗಳಿರುವ ಮನುಷ್ಯ ಮಾತ್ರ ಒಂದು ದಿನ ಸತ್ಯ ಕಂಡುಕೊಳ್ಳುವ ಮನುಷ್ಯನಾಗುತ್ತಾನೆ.

(ಮುಗಿಯಿತು)

ಸಂಶಯವಾದಿಯ ನಂಬಿಕೆಗಳು (ಭಾಗ 3) January 14, 2009

Posted by uniquesupri in ಓಶೋ ಹೇಳಿದ್ದು.
add a comment

(ಮೊದಲ ಭಾಗ)  (ಎರಡನೆಯ ಭಾಗ)

ಸಾಕ್ರೆಟಿಸನಿಗೂ ಮುನ್ನ ಇದ್ದ ಈ ಸಂಶಯವಾದಿಗಳ ಶಾಲೆಯನ್ನು ಸೊಫಿಸಂ ಎನ್ನಲಾಗುತ್ತಿತ್ತು. ಅವರು ಸಂಚರಿಸುತ್ತಾ ಬೋಧನೆ ನಡೆಸುತ್ತಿದ್ದ ಶಿಕ್ಷಕರು. ನಿಮ್ಮನ್ನು ಸೊಫಿಸ್ಟ್ ಆಗಿಸಲು ಅವರು ಬಹುದೊಡ್ಡ ಪ್ರಮಾಣದ ಫೀ ಅಪೇಕ್ಷಿಸುತ್ತಿದ್ದರು. ಸೋಫಿಸ್ಟ್ ವಾದದಲ್ಲಿ ಯಾರ ಪರವಾದರೂ ಇಲ್ಲಬಲ್ಲವನಾಗಿರುತ್ತಿದ್ದ ಆತನಿಗೆ ಸತ್ಯದ ಬಗ್ಗೆ ಕಾಳಜಿಯಿರುತ್ತಿರಲಿಲ್ಲ. ನೀವು ಹೆಚ್ಚು ಹಣ ಕೊಟ್ಟರೆ ಆತ ನಿಮ್ಮ ಪರವಾಗಿ ವಾದ ಮಾಡುವನು. ಒಂದು ವೇಳೆ ನಿಮ್ಮ ವಿರೋಧಿ ಪಕ್ಷದವರು ಹೆಚ್ಚು ಹಣ ಕೊಟ್ಟರೆ ಆತ ಅವರ ಪರವಾಗಿ ವಾದ ಮಾಡುವನು. ಆತನಿಗೆ ಸ್ವತಃ osho ಏನೊಂದೂ ತಿಳಿದಿರುವುದಿಲ್ಲ, ಆದರೆ ಆತನಿಗೆ ವಾದದ, ತರ್ಕದ ಕಲೆ ತಿಳಿದಿರುತ್ತದೆ.

ಒಂದು ಕಥೆಯಿದೆ… ಸಣ್ಣ ಊರೊಂದರಲ್ಲಿ ಪುಟ್ಟದೊಂದು ಚರ್ಚ್ ಇತ್ತು. ಅಲ್ಲಿನ ಪಾದ್ರಿಗೆ ಒಬ್ಬ ಮುದುಕನಿಂದ ಬಹಳವೇ ಕಿರಿಕಿರಿ ಅನುಭವಿಸುತ್ತಿದ್ದ. ಆದರೆ ಚರ್ಚಿನ ಸಮೂಹದಲ್ಲೇ ಆತ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ. ಆತ ಚರ್ಚಿಗೆ ಅತಿ ಹೆಚ್ಚಿನ ದೇಣಿಗೆಯನ್ನು ನೀಡಿದ- ಹಾಗೆ ನೋಡಿದರೆ ಆ ಚರ್ಚನ್ನು ಕಟ್ಟಿಸಿದ್ದೇ ಆತ. ಪಾದ್ರಿಗೂ ಸಂಬಳವನ್ನು ನೀಡುತ್ತಿದ್ದವನು ಆತನೇ. ಪ್ರತಿ ಪ್ರವಚನದಲ್ಲೂ ಆತ ಚರ್ಚಿನ ಮೊದಲ ಸಾಲಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ, ಮುದುಕ ಪ್ರವಚನದ ಮಧ್ಯದಲ್ಲೇ ನಿದ್ದೆಗೆ ಜಾರಿ ಬಿಡುತ್ತಿದ್ದ. ಆತನ ನಿದ್ರೆಯಿಂದ ಪಾದ್ರಿಗೆ ಕಿರಿಕಿರಿಯಾಗುತ್ತಿರಲಿಲ್ಲ – ಆತ ನಿಜಕ್ಕೂ ಗಟ್ಟಿಯಾಗಿ ಗೊರಕೆ ಹೊಡೆಯುತ್ತಿದ್ದ. ಇದರಿಂದ ಪಾದ್ರಿಗಷ್ಟೇ ಅಲ್ಲ, ಚರ್ಚಿನಲ್ಲಿದ್ದ ಇತರರಿಗೂ ಕಿರಿಕಿರಿ ಉಂಟು ಮಾಡುತ್ತಿತ್ತು. ಆತನ ಗೊರಕೆಯಿಂದ ಚರ್ಚಿನ ಇತರರ ನಿದ್ರೆಗೆ ಭಂಗವಾಗುತ್ತಿತ್ತು!

ಕಡೆಗೆ ಚರ್ಚಿನ ಇತರೆ ಭಕ್ತರು ಪಾದ್ರಿಗೆ ಹೇಳಿದರು, “ಈಗ ಏನಾದರೂ ಮಾಡಲೇಬೇಕು. ಈ ಮುದುಕ ಮೊದಲ ಸಾಲಲ್ಲೇ ಕುಳಿತು ಗೊರಕೆ ಹೊಡೆಯುತ್ತಾನೆ ಇದರಿಂದ ನಿಮಗೂ ತೊಂದರೆ, ನಮ್ಮೆಲ್ಲರ ನಿದ್ರೆಗೂ ತೊಂದರೆ.”

ಕ್ರೈಸ್ತ ದೇಶಗಳಲ್ಲಿನ ಜನರು ಶನಿವಾರ ತಡ ರಾತ್ರಿಯವರೆಗೂ ಎಚ್ಚರವಾಗಿರುತ್ತಾರೆ. ಏಕೆಂದರೆ ನಾಳೆ ಭಾನುವಾರ, ಅವರು ವಿಶ್ರಮಿಸಿಕೊಳ್ಳಬಹುದು. ಮುಂಜಾನೆಯೇ ಚರ್ಚಿಗೆ ಹೋಗಬೇಕು. ಬಹುಶಃ ಅವರು ಹಿಂದಿನ ರಾತ್ರಿಯಿಡೀ ನಿದ್ರೆಯನ್ನೇ ಮಾಡಿರುವುದಿಲ್ಲ– ಹಾಗೂ ಚರ್ಚು ನಿದ್ರೆಗೆ ಅತ್ಯಂತ ಪ್ರಸಕ್ರವಾದ ಜಾಗ.

ಹಾಗಾಗಿ ಅವರು ಹೇಳಿದರು, “ನಾವು ಇಷ್ಟು ಮುಂಚಿತವಾಗಿ ಮುಂಜಾನೆಯಲ್ಲಿಯೇ ಚರ್ಚಿಗೆ ಬರುವುದು ತಣ್ಣಗೆ ಒಂದು ಸಣ್ಣ ನಿದ್ದೆ ತೆಗೆಯಲು. ಆದರೆ ಈ ಮೂರ್ಖ ಎಲ್ಲರನ್ನೂ ಎಬ್ಬಿಸಿಬಿಡುತ್ತಾನೆ. ನಿಮ್ಮ ಪ್ರವಚನವನ್ನು ಕೇಳುವುದಕ್ಕೆ ಬದಲಾಗಿ ನಾವು ಆತನ ಗೊರಕೆಯನ್ನು ಕೇಳಬೇಕು. ದಯವಿಟ್ಟು ಇದರ ಬಗ್ಗೆ ಏನಾದರೂ ಮಾಡಿ.”

ಪಾದ್ರಿ ಆಲೋಚಿಸಿದ. ಮುದುಕ ಪ್ರತಿ ಸಲ ಚರ್ಚಿಗೆ ಬರುವಾಗ ತನ್ನ ಮೊಮ್ಮಗನನ್ನು ಕರೆದುಕೊಂಡು ಬರುತ್ತಿದ್ದ, ಆ ಹುಡುಗ ಸಾಮಾನ್ಯವಾಗಿ ಮುದುಕನ ಪಕ್ಕದಲ್ಲೇ ಇರುತ್ತಿದ್ದ, ಪಾದ್ರಿ ಅಂದುಕೊಂಡ, “ಬಹುಶಃ ಆ ಹುಡುಗನಿಗೆ ಆಮಿಷ ಒಡ್ಡಬಹುದು.”

ಆ ಹುಡುಗನನ್ನು ಕರೆದು ಪಾದ್ರಿ ಹೇಳಿದ, “ನೀನು ನಿನ್ನ ತಾತನನ್ನು ನಿದ್ದೆ ಮಾಡುವಾಗಲೆಲ್ಲಾ ಎಬ್ಬಿಸಿದರೆ ನಿನಗೆ ಪ್ರತಿ ಭಾನುವಾರ ಒಂದು ಡಾಲರ್ ಕೊಡುವೆ. ನೀನು ಮಾಡಬೇಕಾದ್ದು ಇಷ್ಟೇ, ಆತ ಗೊರಕೆ ಹೊಡೆಯಲು ಶುರುಮಾಡಿದಾಗಲೆಲ್ಲಾ ನೀನು ಆತನಿಗೆ ಹೊಡೆದು ಎಚ್ಚರಿಸುತ್ತಿರಬೇಕು.”

ಹುಡುಗ ಹೇಳಿದ, “ಒಳ್ಳೆಯದು. ಅವನಿಗೆ ನಾನು ಮಲಗುವುದಕ್ಕೆ ಬಿಡುವುದಿಲ್ಲ.”.

ಮುಂದಿನ ಭಾನುವಾರ ಆಹ್ಲಾದಕರವಾಗಿತ್ತು. ಎಲ್ಲರೂ ಹಾಯಾಗಿ ಮಲಗಿದರು. ಪಾದ್ರಿ ಪ್ರತಿ ಬಾರಿ ಹೇಳುತ್ತಿದ್ದ ಪ್ರವಚನವನ್ನೇ ಪುನರುಚ್ಚರಿಸಿದ… ಆತನ ಬಳಿ ಮೂರ್ನಾಲ್ಕು ಪ್ರವಚನಗಳು ಸಿದ್ಧವಾಗಿರುತ್ತಿದ್ದವು. ಹುಡುಗ ಮುದಕನಿಗೆ ಬಡಿದು ಬಡಿದು ಎಚ್ಚರವಾಗಿಸುತ್ತಿದ್ದ.

ಮುದುಕ ಕೇಳಿದ, “ಏನಿದು ತಲೆ ಹರಟೆ, ಪದೇ ಪದೇ ಏನು ಮಾಡುತ್ತಿದ್ದೀಯ?”

ಹುಡುಗ ನಕ್ಕ, ಆದರೆ ಮುದುಕನಿಗೆ ಗೊರಕೆ ಹೊಡೆಯಲು ಬಿಡಲಿಲ್ಲ.

ಪ್ರವಚನ ಮುಗಿದ ನಂತರ ಮುದುಕ ತನ್ನ ಮೊಮ್ಮಗನಿಗೆ ಕೇಳಿದ, “ಏನು ವಿಷಯ? ನನ್ನ ಬೆಳಗನ್ನೆಲ್ಲಾ ಹಾಳು ಮಾಡಿದೆಯಲ್ಲ? ಯಾಕೆ ಹೇಳು..”

ಹುಡುಗ ಹೇಳಿದ, “ಇದು ವ್ಯಾಪಾರದ ವಿಷಯ. ನಿನ್ನನ್ನು ಗೊರಕೆ ಹೊಡೆಯದಂತೆ ತಡೆದರೆ ಆತ ನನಗೆ ಒಂದು ಡಾಲರ್ ಕೊಡುತ್ತಾನೆ.”

ಮುದುಕ ಹೇಳಿದ, “ಯೋಚನೆ ಮಾಡಬೇಡ, ಇದು ವ್ಯಾಪಾರ ಅನ್ನುವುದಾದರೆ ನಾನು ನಿನಗೆ ಪ್ರತಿವಾರ ಎರಡು ಡಾಲರ್ ಕೊಡುತ್ತೇನೆ. ಮುಂದಿನ ವಾರದಿಂದ ನನ್ನ ನಿದ್ದೆ ಹಾಳು ಮಾಡಬೇಡ.”

ಮುಂದಿನ ಭಾನುವಾರ ಬಂದಿತು. ಪಾದ್ರಿಗೆ ಆಶ್ಚರ್ಯವಾಯಿತು. ಮುದುಕ ಗೊರಕೆ ಹೊಡೆಯುತ್ತಿರುವುದನ್ನು ಕಂಡು ಪಾದ್ರಿ ಹುಡುಗನತ್ತ ತಿರುಗಿ ಕಣ್ಣು ಮಿಟುಕಿಸಿ ಮುದಕನನ್ನು ಎಚ್ಚರವಾಗಿಸುವಂತೆ ಸೂಚಿಸುತ್ತಾನೆ. ಆದರೆ ಹುಡುಗ ಸುಮ್ಮನೆ ನಗುತ್ತಾ ಕುಳಿತಿದ್ದ. ಮುದುಕ ನಿರಾಯಾಸವಾಗಿ ಗೊರಕೆ ಹೊಡೆಯುತ್ತಿದ್ದ. ಉಳಿದ ಯಾರಿಗೂ ನಿದ್ದೆ ಬರಲಿಲ್ಲ. ಪ್ರವಚನ ಮುಗಿಸಿದ ನಂತರ ಪಾದ್ರಿ ಹುಡುಗನನ್ನು ಪಕ್ಕಕ್ಕೆ ಕರೆದು ಕೇಳಿದ, “ಏನಾಯ್ತು, ನಿನಗೆ ಡಾಲರ್ ಬೇಡವೇ?”

ಆತ ಹೇಳಿದ, “ನಾನೇನ್ ಮಾಡ್ಲಿ? ಇದು ವ್ಯಾಪಾರದ ವಿಷಯ.”

ಪಾದ್ರಿ ಕೇಳಿದ, “ಏನು ವ್ಯಾಪಾರ?”

ಆತ ಹೇಳಿದ, “ತಾತ ನನಗೆ ಎರಡು ಡಾಲರ್ ಕೊಡುತ್ತೀನಿ ಅಂದಿದ್ದಾನೆ. ಈಗ ಏನು ಮಾಡ್ತೀರಿ ನೋಡಿ.”

ಪಾಪದ ಪಾದ್ರಿಗೆ ತಾನು ಮುದುಕನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ತಿಳಿಯಿತು. ಈತ ಮೂರು ಡಾಲರ್ ಕೊಟ್ಟರೆ – ಇದು ಬಡವ ಪಾದ್ರಿಗೆ ದೊಡ್ಡ ಮೊತ್ತವಾಗುತ್ತದೆ – ಮುದುಕ ನಾಲ್ಕು ಡಾಲರ್ ಕೊಡುತ್ತಾನೆ. ಈ ತಂತ್ರ ಉಪಯೋಗಿಸಿದರೆ ತಾನು ಸಂಪೂರ್ಣವಾಗಿ ಸೋಲಪ್ಪಬೇಕಾಗುತ್ತದೆ ಎಂಬುದು ಅರಿವಾಗುತ್ತದೆ. ಹುಡುಗನಿಗೆ ಪಾದ್ರಿಯ ಪ್ರವಚನದಲ್ಲೂ ಆಸಕ್ತಿಯಿಲ್ಲ, ಚರ್ಚಿನ ಕಲಾಪದಲ್ಲೂ ಆಸಕ್ತಿಯಿಲ್ಲ, ಮುದುಕನ ಬಗ್ಗೆಯೂ ಆಸಕ್ತಿಯಿಲ್ಲ. ಇದು ಆತನಿಗೆ ಕೇವಲ ವ್ಯಾಪಾರದ ಪ್ರಶ್ನೆಯಷ್ಟೇ.

ಇದು ಸೊಫಿಸ್ಟರ ಧೋರಣೆಯಾಗಿತ್ತು. ದೊಡ್ಡ ರಾಜರು ತಮ್ಮ ಮಕ್ಕಳನ್ನು ಸೋಫಿಸ್ಟ್‌ಗಳ ಬಳಿ ಶಿಕ್ಷಣಕ್ಕೆ ಕಳುಹಿಸುತ್ತಿದ್ದರು. ಮುಂದೆ ಅವರು ರಾಜರಾದಾಗ ಯಾವ ವಾದವನ್ನಾದರೂ ಗೆಲ್ಲಬೇಕು ಎಂಬುದು ಆ ಶಿಕ್ಷಣದ ಉದ್ದೇಶವಾಗಿತ್ತು. ಸೋಫಿಸ್ಟನಿಗೆ ಸರಿ ತಪ್ಪು ಎಂಬುದರ ಪ್ರಶ್ನೆಯೇ ಏಳುವುದಿಲ್ಲ, ಆತನಿಗೆ ಯಾರ ವಾದ ಬಲವಾದದ್ದು ಎಂಬುದಷ್ಟೇ ಪ್ರಶ್ನೆ.

(ಮುಂದುವರೆಯುವುದು…)

ಸಂಶಯವಾದಿಯ ನಂಬಿಕೆಗಳು (ಭಾಗ ೧) January 12, 2009

Posted by uniquesupri in ಓಶೋ ಹೇಳಿದ್ದು.
3 comments

[ ಸಂಪದದ ಬಹುತೇಕ ಚರ್ಚೆಗಳಲ್ಲಿ ಭಾಗವಹಿಸುವಾಗ ನಾನು ಒಂದಂಶವನ್ನು ಗಮನಿಸಿದ್ದಿದೆ. ಕೆಲವು ಲೇಖನಗಳು ಕೆಲವರ ಭಾವನೆಗಳ ಅಭಿವ್ಯಕ್ತಿಯಾಗಿರುತ್ತವೆ. ಉದಾಹರಣೆಗೆ, ನಾನು ಹೆಮ್ಮೆಯ ಹಿಂದೂ ಎಂದು ಯಾರೊ ಬರೆದಿರುತ್ತಾರೆ. ತಮ್ಮ ನಂಬಿಕೆಯ ಬಗ್ಗೆ ಅಭಿಮಾನದಿಂದ ಏನನ್ನೋ ಹೇಳಿಕೊಂಡಿರುತ್ತಾರೆ. ಆಗ ಹಲವು ಸಲ ನನ್ನನ್ನೂ ಸೇರಿದಂತೆ ಅನೇಕರು, ಹಿಂದೂ ಎಂದರೆ ಯಾರು, ಹಿಂದೂ ಎನ್ನುವುದು ಏನು ಎಂದು ಪ್ರಶ್ನಿಸಿದ್ದೇವೆ. ಚರ್ಚೆಯ ವಿಷಯವಾಗಿ ಆ ಪ್ರಶ್ನೆಯನ್ನು ಎತ್ತಿಕೊಂಡರೆ ಸಮಂಜಸ, ಆದರೆ ನಂಬಿಕೆಗಳು, ಭಾವನೆಗಳನ್ನು ಎದುರಿಸಲು ಆ ಪ್ರಶ್ನೆಯನ್ನು ಬಳಸಿಕೊಳ್ಳುವುದು ಸೂಕ್ತವಲ್ಲ ಎಂದು ಬಹಳ ಹಿಂದೆಯೇ ಮನವರಿಕೆಯಾಗಿದೆ. ಆದರೂ ಕೆಲವೊಮ್ಮೆ ವಾದದ ಮದದಲ್ಲಿ ಪ್ರಶ್ನಿಸುವಿಕೆಯನ್ನು ಸಂಯಮದ ಗಡಿ ದಾಟಿ ತೆಗೆದುಕೊಂಡು ಹೋದದ್ದಿದೆ. ಅದರ ಬಗ್ಗೆ ನನಗೆ ಪಶ್ಚಾತಾಪವಿದೆ.

ಹಿಂದೂ ಎಂದರೆ ಯಾರು ಎಂದು ಹಲವರು ಸಂಪದದಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಅವರ ವಿವರಣೆಗಳನ್ನು ಖಂಡ ತುಂಡವಾಗಿ ಕತ್ತರಿಸುವ ಪ್ರಶ್ನೆಗಳನ್ನು ಹಲವರು ಎಸೆದಿದ್ದೇವೆ. ನಾನಂತೂ ನನಗೆ ಸಮಂಜಸವಾದ ವಿವರಣೆ ಸಿಕ್ಕುವವರೆಗೆ ಪ್ರಶ್ನೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಒಂದು ಹಂತದಲ್ಲಿ ನನಗೆ ಒಂದು ಯೋಚನೆ ಶುರುವಾಗುತ್ತದೆ. ಇಷ್ಟೆಲ್ಲಾ ಇತರರ ನಂಬಿಕೆಯನ್ನು, ಸಿದ್ಧಾಂತಗಳನ್ನು, ಧರ್ಮ ಭಾವನೆಯನ್ನು ಪ್ರಶ್ನಿಸುವ ನನ್ನ ನಂಬಿಕೆ ಯಾವುದು? ನನ್ನ ಧರ್ಮ ಯಾವುದು? ನನ್ನ ಜೀವನ ಧೋರಣೆ ಎಂಥದ್ದು? ಬಹುಶಃ ನಾನು ಇದರ ಬಗ್ಗೆ ಗಮನ ಹರಿಸದೆ ಇತರರ ಭಾವನೆ, ನಂಬಿಕೆ, ಧರ್ಮ, ಜೀವನ ದೃಷ್ಟಿಯ ಸಾಚಾತನದ ಬಗ್ಗೆ ಹೆಚ್ಚು ಕಾಳಜಿ ಮಾಡಿದೆನೆನೋ ಎಂದು ಆತಂಕವಾಗುತ್ತದೆ.

ಪ್ರಶ್ನಿಸುವುದು ಎಲ್ಲಾ ಸಂದರ್ಭಗಳಲ್ಲೂ ಒಳ್ಳೆಯದಾ? ನಂಬಿಕೆ ಎಂಬುದೊಂದು ಇಲ್ಲವಾ? ಶ್ರದ್ಧೆ ಮೂಡಬೇಕಾದ ಜಾಗದಲ್ಲಿ ಪ್ರಶ್ನೆ ಇಟ್ಟುಕೊಂಡರೆ ಆಗುವ ಅಪಾಯವೇನು ಎಂದು ನನ್ನ ನಾನು ಅಸ್ಪಷ್ಟವಾಗಿ ಕೇಳಿಕೊಂಡದ್ದಿದೆ. ನನ್ನ ಹಾಗೂ ನನ್ನಂತೆ ಪ್ರಶ್ನಿಸುವ ಅನೇಕರ ಪ್ರಶ್ನೆಗಳು ನಿಜವಾಗಿಯೂ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವ ಹಂಬಲವನ್ನು ಹೊತ್ತಿರುತ್ತವೆಯಾ ಇಲ್ಲವೇ ಇತರರ ವಾದವನ್ನು ಕತ್ತರಿಸಿ ಹಾಕುವ ಆಯುಧವಾಗಿ ಮೆರೆಯುತ್ತಿವೆಯಾ ಎಂದು ಆಲೋಚಿಸಿದ್ದಿದೆ. ಆದರೆ ಅವೆಲ್ಲಾ ಅಸ್ಪಷ್ಟವಾಗಿ ಪ್ರಜ್ಞೆಯನ್ನು ಚುಚ್ಚುವ ಸೂಜಿಗಳಾಗಿ ಮನದ ಮೂಲೆಯಲ್ಲೆಲ್ಲೋ ಹರಿದಾಡುತ್ತಿದ್ದವು. ನಿನ್ನೆ ಓಶೋನ ಒಂದು ಪ್ರವಚನವನ್ನು ಓದುವಾಗ ಆ ಸೂಜಿಗಳು ಸ್ಪಷ್ಟವಾಗಿ ಕಣ್ಣ ಮುಂದೆ ಬಂದವು.

ಆ ಪ್ರವಚನ ಇಲ್ಲಿ ಕೊಟ್ಟರೆ ಉಪಯುಕ್ತವಾಗಬಹುದು ಎನ್ನಿಸಿ ಅದನ್ನು ಕೊಟ್ಟಿರುವೆ.]
………………………………………..

ಪ್ರಶ್ನೆ:
ಪ್ರೀತಿಯ ಓಶೋ,
ಸಂಶಯವಾದಿ ಅನುಯಾಯಿಯಾಗಲಾರ ಎಂದು ಹೇಳಿರುವೆ. ಜೊತೆಗೇ ಎಂದಿಗೂ ಪ್ರಶ್ನಿಸುವುದನ್ನು ನಿಲ್ಲಿಸಬೇಡಿ ಎಂದಿರುವೆ. ದಯವಿಟ್ಟು ಸಂಶಯವಾದ(skepticism)  ಹಾಗೂ ಪ್ರಶ್ನಿಸುವಿಕೆ(doubt)ಯ ನಡುವಿನೆ ವ್ಯತ್ಯಾಸವನ್ನು ವಿವರಿಸು.

ಸಂಶಯವಾದ ಹಾಗೂ ಪ್ರಶ್ನಿಸುವಿಕೆಯ ನಡುವೆ ಬಹುದೊಡ್ಡ ವ್ಯತ್ಯಾಸವಿದೆ. ಬರೀ ವ್ಯತ್ಯಾಸವಿರುವುದಲ್ಲ, ಅವೆರಡೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಮುಖಮಾಡಿರುವಂಥವು.

ಸಂಶಯವಾದ ಎಂಬುದು ಈಗಾಗಲೇ ಒಂದು ಧರ್ಮ-ಶ್ರದ್ಧೆಯಾಗಿದೆ, ಒಂದು ನಂಬಿಕೆಯಾಗಿದೆ, ಒಂದು osho07 ತೀರ್ಮಾನವಾಗಿದೆ. ಇದು ನಕರಾತ್ಮಕವಾದ ತೀರ್ಮಾನ. ಸಂಶಯವಾಗಿದೆ ತನ್ನದೆಂಬ ಸಿದ್ಧಾಂತ ಯಾವುದೂ ಇರುವುದಿಲ್ಲ; ಆತ ಕೇವಲ ಇತರರ ಸಿದ್ಧಾಂತದ ವಿರುದ್ಧವಾಗಿ ವಾದ ಮಾಡುತ್ತಾನೆ. ಆತನ ಸಿದ್ಧಾಂತದ ಬಗ್ಗೆ ನೀವು ಪ್ರಶ್ನಿಸಬಾರದು. ಆತನಲ್ಲಿ ಯಾವ ಸಿದ್ಧಾಂತವೂ ಇರುವುದಿಲ್ಲ. ಆತ ಒಂದು ದೊಡ್ಡ ಸೊನ್ನೆ. ಆತ ನಕರಾತ್ಮಕ ವ್ಯಕ್ತಿ. ಆತ ಯಾವುದನ್ನೂ ನಂಬುವುದಿಲ್ಲ – ಆದರೆ ಇದೂ ಸಹ ಒಂದು ನಂಬಿಕೆಯಾಗಿರುತ್ತದೆ.

ಉದಾಹರಣೆಗೆ, ಆತ ದೇವರನ್ನು ನಂಬುವುದಿಲ್ಲ. ಆತನನ್ನು ನಾವು ನಂಬಿಕೆಯಿಲ್ಲದವ ಎಂದು ಕರೆಯುತ್ತೇವೆ, ಆದರೆ ಆತ ದೇವರಲ್ಲಿ ನಂಬಿಕೆಯಿಲ್ಲದವ ಎಂದು ಕರೆಯುವುದು ಸರಿಯಲ್ಲ; ಆತ ದೇವರು ಇಲ್ಲ ಎಂದು ನಂಬಿರುತ್ತಾನೆ. ಇದು ನಕರಾತ್ಮಕವಾದ ನಂಬಿಕೆಯಾದ್ದರಿಂದ ನೀವು ಗೊಂದಲಕೊಳ್ಳಗಾಗುವಿರಿ. ಆಸ್ತಿಕ ದೇವರಲ್ಲಿ ನಂಬಿಕೆ ಹೊಂದಿರುತ್ತಾನೆ, ನಾಸ್ತಿಕ ದೇವರನ್ನು ನಂಬುವುದಿಲ್ಲ, ಆದರೆ ಆತ ಅನ್ವೇಷಕನಲ್ಲ, ಆತ ಸೃಜನಶೀಲನಲ್ಲ, ಆತ ಸಕಾರತ್ಮಕ ವ್ಯಕ್ತಿಯಲ್ಲ. ಆತ ಸತ್ಯಾನ್ವೇಷಣೆ ಮಾಡುತ್ತಿಲ್ಲ.

ಪುರಾತನ ಗ್ರೀಸಿನಲ್ಲಿ ಸಾಕ್ರೆಟಿಸ್‌ಗಿಂತ ಮುಂಚೆ ಒಂದು ವಿಚಾರ ಶಾಲೆಯಿತ್ತು, ಅವರನ್ನು ಸೋಫಿಸ್ಟ್ (sophist)ಗಳೆನ್ನುತ್ತಿದ್ದರು. ಅವರು ಸಂಶಯವಾದಿಗಳು. ಅವರಲ್ಲಿ ತಮ್ಮದೆನ್ನುವ ಯಾವ ಸಿದ್ಧಾಂತವೂ ಇರಲಿಲ್ಲ, ಆದರೆ ಇತರರ ಸಿದ್ಧಾಂತವನ್ನು ನಾಶ ಮಾಡಲು ಎಲ್ಲಾ ಆಯುಧಗಳೂ, ಎಲ್ಲಾ ಪ್ರತಿವಾದಗಳೂ ಇದ್ದವು.

ಇಲ್ಲ ಎಂದು ಹೇಳುವುದು ತುಂಬಾ ಸುಲಭ.

ಇದೆ ಎಂದು ಹೇಳುವುದು ಕಷ್ಟದ ಕೆಲಸ.

ನೀವು ಯಾವುದನ್ನು ಬೇಕಾದರೂ ಇಲ್ಲ ಎಂದು ಹೇಳಬಹುದು. ಯಾರಾದರೂ, ‘‘ ಸುಂದರವಾದ ಸೂರ್ಯಾಸ್ತವನ್ನು ನೋಡಲ್ಲಿ’’ ಎಂದು ಹೇಳಿದರೆ ನೀವು,“ನಾನು ಸೂರ್ಯ ಮುಳುಗುತ್ತಿರುವದನ್ನು ನೋಡುತ್ತಿರುವೆ. ಆದರೆ ಅದರಲ್ಲಿ ಸುಂದರವಾದದ್ದೇನೂ ನನಗೆ ಕಾಣುತ್ತಿಲ್ಲ. ಸೌಂದರ್ಯ ಎಂದರೇನು ಎಂದು ಮೊದಲು ನನಗೆ ವಿವರಿಸು. ಸೂರ್ಯಾಸ್ತವನ್ನು ಸುಂದರ ಎಂದು ಹೇಗೆ ಕರೆಯಬಲ್ಲೆ ನೀನು? ಸೌಂದರ್ಯ ಎಂಬುದನ್ನು ವ್ಯಾಖ್ಯಾನಿಸದೆ ನೀನು ಸೂರ್ಯಾಸ್ತವನ್ನು ಸುಂದರ ಎಂದು ಕರೆಯಲಾಗದು.” ಎನ್ನಬಹುದು.

ಸೌಂದರ್ಯ ವ್ಯಾಖ್ಯಾನವನ್ನು ಮೀರಿದ್ದು. ಸಾವಿರಾರು ವರ್ಷಗಳಿಂದ ಜನರು ಸೌಂದರ್ಯವನ್ನು, ಸತ್ಯವನ್ನು, ಪ್ರೀತಿಯನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವ ಪ್ರಯತ್ನವೂ ಫಲಕಾರಿಯಾಗಿಲ್ಲ. ಇದಕ್ಕೆ ಸರಳವಾದ ಕಾರಣವೆಂದರೆ ಇವೆಲ್ಲಾ ಅನುಭವಗಳು. ನೀವು ಅನುಭವಗಳನ್ನು, ಅನುಭವಿಸಬೇಕಾದವುಗಳನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಆದರೆ ಇವನ್ನೆಲ್ಲಾ ನಿರಾಕರಿಸುವುದು ಕಷ್ಟದ ಕೆಲಸವಲ್ಲ.

ಸಂಶಯವಾದಿ ಈಗಾಗಲೇ ಎಲ್ಲಾ ವಿಷಯಗಳ ಬಗೆಗೆ ತನ್ನ ‘ಇಲ್ಲ’ ಎಂಬ ಧೋರಣೆಯನ್ನು ಸ್ಥಾಪಿಸಿಕೊಂಡು ಬಿಟ್ಟಿರುತ್ತಾನೆ. ಈತ ಇತರ ಆಸ್ತಿಕರಿಗಿಂತ ಭಿನ್ನನಾದವನಲ್ಲ. ಅವರೂ ತಮ್ಮ ನಂಬಿಕೆಗಳಲ್ಲಿ ನೆಲೆನಿಂತಿದ್ದಾರೆ. ಇವರಿಬ್ಬರೂ ಅನ್ವೇಷಣೆಯ ಮಾರ್ಗದಲ್ಲಿರುವವರಲ್ಲ.

ಈಗ ನಿಮಗೆ ಸಂಶಯವಾದ ಹಾಗೂ ಪ್ರಶ್ನಿಸುವಿಕೆಯ ನಡುವಿನ ವೈರುಧ್ಯ ಅರ್ಥವಾಗಿರಬಹುದು. ಪ್ರಶ್ನಿಸುವಿಕೆ ಎಂಬುದು ತೀರ್ಮಾನವಲ್ಲ. ಪ್ರಶ್ನೆ ಪಯಣವೊಂದರ ಆರಂಭ. ಅದೊಂದು ತೀರ್ಥಯಾತ್ರೆ. ಸಂಶಯವಾದಿ ಆಗಲೇ ಎಲ್ಲವಕ್ಕೂ ‘ಇಲ್ಲ’ ಎಂಬ ಉತ್ತರವನ್ನು ಕಂಡುಕೊಂಡಿರುತ್ತಾನೆ. ತನ್ನೆದುರು ಇರಿಸಲಾಗದ ಎಲ್ಲ, ತಾನು ಮೇಜಿನ ಮೇಲಿಟ್ಟುಕೊಂಡು ವಿಭಜಿಸಲಾಗದ ಎಲ್ಲವನ್ನೂ ಆತ ‘ಇಲ್ಲ’ ಎಂದು ತೀರ್ಮಾನಿಸಿಬಿಟ್ಟಿರುತ್ತಾನೆ.

ಕಾರ್ಲ್ ಮಾರ್ಕ್ಸ್ ಹೀಗೆ ಹೇಳಿದ್ದ, “ದೇವರನ್ನು ವೈಜ್ಞಾನಿಕ ಪ್ರಯೋಗಾಲಯದಲ್ಲಿ, ಟೆಸ್ಟ್ ಟ್ಯೂಬಿನಲ್ಲಿ ನೋಡುವವರೆಗೆ ನಾನು ಆತನನ್ನು ನಂಬುವುದಿಲ್ಲ.”

ದೇವರು ಟೆಸ್ಟ್ ಟ್ಯೂಬಿನಲ್ಲಿ ಕಂಡುಕೊಳ್ಳಬೇಕಾದುದಲ್ಲ. ದೇವರನ್ನು ಅರಸಬೇಕು. ನೀವು ಅರಸುವಿಕೆಯ ಹಾದಿಯಲ್ಲಿರುವಾಗ ಸಾವಿರಾರು ಸಂಗತಿಗಳನ್ನು ಪ್ರಶ್ನಿಸಬೇಕಾಗುತ್ತದೆ, ಆದರೆ ಈ ಹುಡುಕುವಿಕೆಯಲ್ಲಿ ನೀವೊಂದು ನಿಲ್ದಾಣವನ್ನು ತಲುಪುತ್ತೀರಿ, ಅಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳು ಮಾಯವಾಗಿಬಿಡುತ್ತವೆ. ಅಚಾನಕ್ಕಾಗಿ ನೀವು ಸತ್ಯದೆದುರು ಮುಖ ಮಾಡಿ ನಿಂತಿರುತ್ತೀರಿ. ನೀವು ಚಕಿತರಾಗಿರುತ್ತೀರಿ, ನಿಮಗೆ ದೇವರು ಸಿಕ್ಕಿರುವುದಿಲ್ಲ, ಆದರೆ ನೀವು ಏನನ್ನೋ ಕಂಡುಕೊಂಡಿರಿ ಎಂಬುದನ್ನು ನಿರಾಕರಿಸಲೂ ಸಾಧ್ಯವಾಗುವುದಿಲ್ಲ, ದೇವರಿಗಿಂತ ಉನ್ನತವಾದದ್ದೇನನ್ನೋ ನೀವು ಕಂಡುಕೊಂಡಿರುತ್ತೀರಿ. ಇದನ್ನು ನಾನು ದೈವತ್ವ ಎಂದು ಕರೆಯುತ್ತೇನೆ.

(ಮುಂದುವರೆಯಲಿದೆ…)

ಅಲ್ಲ ಅಲ್ಲ ಎನ್ನು! ನೀನು ಗೆಲ್ಲುವೆ December 22, 2008

Posted by uniquesupri in ಓಶೋ ಹೇಳಿದ್ದು.
2 comments

– ಡಾ|| ಜ್ಞಾನದೇವ್

ಮನಸ್ಸು ಎ೦ದಿಗೂ ನಕಾರಾತ್ಮಕ, ಹೃದಯ ಸಕಾರಾತ್ಮಕ. ಮನಸ್ಸಿನ ಭಾಷೇ ‘ಇಲ್ಲ’ ಎ೦ಬುದರಲ್ಲೇ ಬೇರೂರಿದೆ. ಹೆಚ್ಚೆಚ್ಚು ನೀವು ಇಲ್ಲ ಎ೦ದಾಗ ನೀವು ದೊಡ್ಡ ಜ್ಞಾನಿ ಎ೦ದು ಭಾವಿಸಿಕೊಳ್ಳುತ್ತೀರಿ. ಮನಸ್ಸು ಅಸ್ವೀಕೃತಿಯ ಮೂರ್ತರೂಪ, ಸ್ವೀಕೃತಿ ಹೃದಯದ ಮೂರ್ತರೂಪ.

ನಾನು ನಿಮಗೊ೦ದು ಪುಟ್ಟ ಕಥೆಯನ್ನು ಹೇಳುತ್ತೇನೆ.osho36_2.preview3

ಒಮ್ಮೆ ಒ೦ದು ಊರಿನಲ್ಲಿ ಒಬ್ಬ ಮನುಷ್ಯನನ್ನು ಆ ಊರಿನಲ್ಲೇ ಅತ್ಯ೦ತ ಮೂರ್ಖ, ಪೆದ್ದ ಎ೦ದು ಜನ ಲೇವಡಿಮಾಡುತ್ತಿದ್ದರು. ಆತ ಏನೇ ಹೇಳಿದರೂ ಜನ ಹಾಸ್ಯಮಾಡುತ್ತಿದ್ದರು. ನೊ೦ದ ಆತ ಆ ಊರಿನ ಒಬ್ಬ ವೃದ್ಧ ವಿವೇಕಿಯ ಬಳಿ ಹೋದ. ತಾನು ಇನ್ನು ಬದುಕಿ ಏನು ಪ್ರಯೋಜನವಿಲ್ಲವೆ೦ದು ಅವನಲ್ಲಿ ಅತ್ತ. ಇನ್ನು ಅವಮಾನ, ಲೇವಡಿ ನಾನು ಸಹಿಸಲಾರೆ. ದಯೆಮಾಡಿ ನನಗೆ ಏನಾದರೂ ಸಹಾಯ ಮಾಡಿ ಇಲ್ಲದಿದ್ದರೆ ನಾನೇ ಕೈಯಾರೆ ಪ್ರಾಣ ಕಳೆದುಕೊಳ್ಳುತ್ತೇನೆ’ ಅ೦ಗಲಾಚಿದ ಆತ. ಆ ವೃದ್ಧ ಜ್ಞಾನಿ ನಕ್ಕು ನುಡಿದ, ‘ಚಿ೦ತಿಸಬೇಡ, ಒ೦ದು ಕೆಲಸ ಮಾಡು. ನೀನು ನಕಾರಾತ್ಮಕನಾಗಿರು, ಇಲ್ಲ ಅಥವಾ ಅಲ್ಲ ಎನ್ನು. ಉತ್ತರಿಸಲಾಗದ ಪ್ರಶ್ನೆಗಳನ್ನು ಹಾಕುತ್ತಾ ಹೋಗು. ಯಾರಾದರೂ ನಿನಗೆ ‘ನೋಡು ಆ ಸೂರ್ಯಾಸ್ತಮಾನ ಎಷ್ಟೊ೦ದು ಸು೦ದರ! ಎ೦ದು ಹೇಳಿದರೆ ನೀನು ತಕ್ಷಣ ‘ಅಲ್ಲಿ ಯಾವ ಸೌ೦ದರ್ಯವಿದೆ? ನನಗೆ ವಿವರಣೆ ಕೊಡು’ ಎ೦ದು ಹೇಳು. ಇದೇ ಕೆಲಸವನ್ನು ಎಲ್ಲದಕ್ಕೂ ಮಾಡುತ್ತಾ ಹೋಗು. ಒ೦ದು ವಾರದ ನ೦ತರ ಬ೦ದು ನನ್ನನ್ನು ಕಾಣು."

ಒ೦ದು ವಾರದ ನ೦ತರ ಆ ಮೂರ್ಖ ಆ ಜ್ಞಾನಿಯ ಬಳಿ ಬ೦ದ. ಅವನ ಹಿ೦ದೆ ಒ೦ದು ದೊಡ್ಡ ಗು೦ಪೇ ಇತ್ತು. ಅವನಿಗೆ ಹೂವಿನ ಹಾರ ಹಾಕಲಾಗಿತ್ತು. ಸಿ೦ಗಾರದ ಬಟ್ಟೆಗಳನ್ನು ಧರಿಸಿದ್ದ. ಆತ ಹೇಳಿದ, ‘ಇದೊ೦ದು ಜಾದೂ! ಈಗ ಇಡೀ ಪಟ್ಟಣವೇ ನಾನೊಬ್ಬ ಅತ್ಯ೦ತ ಬುದ್ಧಿವ೦ತ ಚಿ೦ತಕನೆ೦ದು ಕೊ೦ಡಾಡುತ್ತಿದೆ. ನನ್ನ ಸನ್ನಿಧಿಯಲ್ಲಿ ಅವರೆಲ್ಲರೂ ಮೌನಿಗಳಾಗುತ್ತಾರೆ. ಕಾರಣ, ಅವರೇನು ಹೇಳಿದರೂ ಅವನ್ನು ತಕ್ಷಣ ನಾನು ಪ್ರಶ್ನೆಗಳನ್ನಾಗಿಸುತ್ತೇನೆ. ಹಾಗೆಯೇ ನಾನು ನಕಾರಾತ್ಮಕನಾಗುತ್ತೇನೆ. ನಿಮ್ಮ ಉಪಾಯ ಫಲಿಸಿದೆ ಸ್ವಾಮಿ.!
ಅ ವೃದ್ಧ ವಿವೇಕಿ ಕೇಳಿದ, ‘ಸರಿ, ನಿನ್ನನ್ನು ಹಿ೦ಬಾಲಿಸುತ್ತಿರುವ ಈ ಜನ ಯಾರು?’

ಅದಕ್ಕೆ ಆತ ಹೇಳಿದ,
‘ಅವರೆಲ್ಲ ನನ್ನ ಶಿಷ್ಯರು. ಜ್ಞಾನ ಎ೦ದರೇನು ಎನ್ನುವುದನ್ನು ನನ್ನಿ೦ದ ಕಲಿಯಲು ಬಯಸುತ್ತಿದ್ದಾರೆ.!’

(ಅನುವಾದಿತ)
ಕೃಪೆ: osho Times