jump to navigation

ಧರ್ಮಗಳೆಂಬ ಮನಸ್ಸಿನ ಮುಖಗಳು January 2, 2010

Posted by uniquesupri in ಓಶೋ ಹೇಳಿದ್ದು.
Tags: , , , , , , , , , ,
trackback

ಮನುಷ್ಯನ ಮನಸ್ಸಿಗೆ ಹಲವು ಮುಖಗಳಿವೆ. ಒಂದೊಂದು ಧರ್ಮವೂ ಮನಸ್ಸಿನ ಒಂದೊಂದು ಮುಖವನ್ನು  ವೈಭವೀಕರಿಸಿ, ಅದನ್ನು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುವ ಕೆಲಸ ಮಾಡಿದೆ.

ಯಾರನ್ನೋ ನೀವು ಹಿಂದು ಎನ್ನುತ್ತೀರಿ, ಮತ್ತೊಬ್ಬನನ್ನು ಮುಸಲ್ಮಾನ ಎನ್ನುವಿರಿ, ಮಗದೊಬ್ಬನನ್ನು ಜೈನ. ಆದರೆ ವಾಸ್ತವವಾಗಿ ಇದು ಸತ್ಯವಲ್ಲ. ಪ್ರತಿ ವ್ಯಕ್ತಿಯಲ್ಲಿಯೂ ಎಲ್ಲಾ ಧರ್ಮಗಳು ಸುಪ್ತವಾಗಿರುತ್ತವೆ. ಆತನಲ್ಲಿ ಹಿಂದುವು ಇರುತ್ತಾನೆ, ಮುಸಲ್ಮಾನನೂ ಇರುತ್ತಾನೆ, ಕ್ರೈಸ್ತ, ಜೈನರೂ, ಬೌದ್ಧ, ಯಹೂದಿಗಳೂ ಇರುತ್ತಾರೆ. osho_motorಆತನೇನಾದರೂ ಬೌದ್ಧ ಕುಟುಂಬದಲ್ಲಿ ಹುಟ್ಟಿದನಾದರೆ ಆತನಲ್ಲಿನ ಬೌದ್ಧ ಮೇಲ್ಪದರಕ್ಕೆ ಬರುತ್ತಾನೆ. ಆತನಲ್ಲಿನ ಬೌದ್ಧ ಎತ್ತರಕ್ಕೆ ಬೆಳೆಯುತ್ತಾ ಹೋಗುತ್ತಾನೆ, ಉಳಿದವುಗಳನ್ನು ಹತ್ತಿಕ್ಕುತ್ತಾನೆ. ಬದಲಾಗಿ ಆತ ಮುಸಲ್ಮಾನ ಕುಟುಂಬದಲ್ಲಿ ಹುಟ್ಟಿದರೆ ಆತನ ಮನಸ್ಸಿನ ಇನ್ನೊಂದು ಮುಖ ಪ್ರಮುಖವಾಗುತ್ತದೆ. ಆದರೆ ಹತ್ತಿಕ್ಕಲ್ಪಟ್ಟ ಮನಸ್ಸಿನ ಉಳಿದ ಅಂಶಗಳು ಸುಮ್ಮನಿರುವುದಿಲ್ಲ, ಅವು ಸುಪ್ತವಾಗಿ ಕೆಲಸ ಮಾಡುತ್ತಲೇ ಇರುತ್ತವೆ.

ನಾನು ಕಂಡಿರುವಂತೆ, ಒಬ್ಬ ವ್ಯಕ್ತಿಯಲ್ಲಿ ಎಲ್ಲಾ ಧರ್ಮಗಳೂ ಇವೆ. ಇದರಿಂದಾಗಿಯೇ ಎಲ್ಲ ಧರ್ಮಗಳನ್ನು ಅನುಸಂಧಾನಗೊಳಿಸುವುದಕ್ಕೆ ಸಾಧ್ಯವಾಗುತ್ತದೆ. ವಾಸ್ತವಾವಾಗಿ ಈ ಅನುಸಂಧಾನಕ್ಕೆ ಯಾವ ಬೆಲೆಯೂ ಇಲ್ಲ.ಅದು ಕೇವಲ ಮನಸ್ಸಿನ ವಿವಿಧ ಮುಖಗಳನ್ನು ಅನುಸಂಧಾನಗೊಳಿಸಿಕೊಳ್ಳುವ ಪ್ರಯತ್ನವಾಗಿರುತ್ತದೆ. 

ಉದಾಹರಣೆಗೆ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಅಹಂ ಇದ್ದೇ ಇರುತ್ತದೆ. ಆದರೆ ಹಿಂದೂ ಧರ್ಮದಲ್ಲಿ ಈ ಅಹಂಕಾರವನ್ನು ಅದರ ಪರಮ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಿದೆ. ‘ನಿನಗಿಂಥ ನಾನು ಶ್ರೇಷ್ಠ’ ಎಂಬ ಭಾವನೆ ಪ್ರತಿ ಹಿಂದೂವಿನಲ್ಲೂ ಇರುತ್ತದೆ. ತಾನು ಈ ಜಗತ್ತಿಗೆ ಬೋಧಿಸುವುದಕ್ಕಾಗಿ, ಬ್ರಹ್ಮ ಜ್ಞಾನವನ್ನು ತಿಳಿಸುವುದಕ್ಕಾಗಿ ಹಿಂದುವಾಗಿ ಹುಟ್ಟಿದ್ದೇನೆ ಎಂದು ಆತ ನಂಬುತ್ತಾನೆ. ತನ್ನದು ಅತಿ ಪುರಾತನವಾದ, ಪವಿತ್ರವಾದ ಸನಾತನ ಧರ್ಮ. ತಾನು ಧರ್ಮಾಂಧನಲ್ಲ, ಸಹಿಷ್ಣು, ತಾನು ಯಾರ ಬದುಕಿನಲ್ಲೂ ಮಧ್ಯ ಪ್ರವೇಶಿಸುವುದಿಲ್ಲ, ಯಾರ ಮೇಲೂ ಆಕ್ರಮಣ ಮಾಡಿದವನಲ್ಲ ಎಂದು ಆತ ನಂಬುತ್ತಾನೆ. ಆದರೆ ಆತ ತನಗರಿವಿಲ್ಲದೆ ಇವೆಲ್ಲವನ್ನೂ ಮಾಡುತ್ತಿರುತ್ತಾನೆ.

ಹಿಂದೂಗಳು ಹೆಚ್ಚು ಅಸಹಿಷ್ಣುಗಳು. ತಾವು ಸಹಿಷ್ಣುಗಳು ಎಂದುಕೊಳ್ಳುವಲ್ಲೇ ಅವರ ಅಸಹಿಷ್ಣುತೆ ಇಣುಕುತ್ತದೆ. ಒಳಗೆ ಅಸಹಿಷ್ಣುತೆ ಇರದಿದ್ದರೆ ತಾನು ಸಹಿಷ್ಣು ಎಂದು ಭಾವಿಸುವ ಪ್ರಮೇಯವೇ ಉದ್ಭವಿಸದು.

ಇದು ಕೇವಲ ಹಿಂದೂ ಧರ್ಮದ ಗುಣವಲ್ಲ. ಎಲ್ಲಾ ಧರ್ಮಗಳಲ್ಲಿಯೂ ಇದು ನಾನಾ ರೂಪದಲ್ಲಿ ಆವರಿಸಿಕೊಂಡಿದೆ. ಯಹೂದಿಯರು ತಾವು ದೇವರಿಂದ ಆರಿಸಲ್ಪಟ್ಟ ಜನರು ಎಂದು ನಂಬುತ್ತಾರೆ. ಕ್ರೈಸ್ತರು ಕ್ರಿಸ್ತನೊಬ್ಬನೇ ದೇವರ ಮಗ, ಅಂತಿಮ ತೀರ್ಪಿನ ದಿನದಂದು ಆತ ತನ್ನ ಕುರಿಗಳನ್ನು ಉಳಿದ ಮಂದೆಯಿಂದ ಬೇರ್ಪಡಿಸುತ್ತಾನೆ. ಆತನನ್ನು ನಂಬದವರನ್ನು ನರಕದ ಬೆಂಕಿಗೆ ನೂಕುತ್ತಾನೆ ಎಂದು ನಂಬುತ್ತಾರೆ. ತಾವು ಉಳಿದವರಿಗಿಂತ ಶ್ರೇಷ್ಠ ಎಂಬ ಈ ಅಹಂಕಾರ ಎಲ್ಲಾ ಧರ್ಮದವರಲ್ಲಿಯೂ ಇದೆ. ಮುಸಲ್ಲಾನ, ಕ್ರೈಸ್ತ, ಜೈನ, ಬೌದ್ಧ, ಸಿಖ್, ಕನ್‌ಫ್ಯೂಶಿಯನ್, ತಾವೊ – ಎಲ್ಲರಲ್ಲೂ ಇದೆ. ಆದರೆ ಈ ಅಂಶವನ್ನು ಅಭಿವೃದ್ಧಿ ಪಡಿಸಿ, ಶುದ್ಧೀಕರಿಸಿ, ಸುಂದರಗಾಣುವಂತೆ ಮಾಡಿದ ಶ್ರೇಯ ಹಿಂದುಗಳದು.

ಮುಸಲ್ಮಾನನು ಮೂಲತಃ ಧರ್ಮಾಂಧ. ಅಚಲವಾದ ಕುರುಡು ವಿಶ್ವಾಸ ಮನಸ್ಸಿನ ಹಲವು ಮುಖಗಳಲ್ಲಿ ಒಂದು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಈ ಅಂಶವು ಸುಪ್ತವಾಗಿರುತ್ತದೆ. ಆದರೆ ಮುಸಲ್ಮಾನನು ಮನಸ್ಸಿನ ಈ ಅಂಶವನ್ನು ಬೃಹತ್ತಾಗಿ ಬೆಳೆಸಿದ್ದಾನೆ.  ತನ್ನ ಧರ್ಮ ಭೂಮಿಗೆ ಬಂದ ಕಡೆಯ ಧರ್ಮ. ಮೊಹಮದ್ ಕಟ್ಟಕಡೆಯ ಪ್ರವಾದಿ. ಮುಂದೆ ಬೇರಾವ ಪ್ರವಾದಿಯೂ ಬರುವುದಿಲ್ಲ; ದೇವರು ತನ್ನ ಸಂದೇಶದ ಕಡೆಯ ಆವೃತ್ತಿಯನ್ನು ಕಳಿಸಿಯಾಗಿದೆ.  ಈ ಮುಂಚೆಯೂ ಸಂದೇಶಗಳು ಕಳಿಸಲ್ಪಟ್ಟಿದ್ದವು, ಆದರೆ ಈಗ ಅವೆಲ್ಲವೂ ರದ್ದಾದಂತೆ. ಕಡೆಯ ಸಂದೇಶ ತಲುಪಿಯಾಗಿದೆ ಹಾಗೂ ಅದು ಸತ್ಯವೂ,ಪರಿಪೂರ್ಣವೂ ಆಗಿರುವುದರಿಂದ ಮತ್ತ್ಯಾವ ಪ್ರವಾದಿ ಹುಟ್ಟಿಬರುವ ಆವಶ್ಯಕತೆಯಿಲ್ಲ – ಇದು ಆತನ ನಂಬಿಕೆ. ಇದು ಶುದ್ಧ ಧರ್ಮಾಂಧತೆ. ಇದು ಎಲ್ಲಾ ಧರ್ಮಗಳಲ್ಲೂ ಇದೆ.

ಕಾಲಿಫ್ ಉಮರ್ ಕೈಲಿ ಉರಿಯುವ ಬೆಂಕಿಯನ್ನು ಹಿಡಿದು ಅಲೆಕ್ಸಾಂಡ್ರಿಯಾದ ಬೃಹತ್ ಗ್ರಂಥಾಲಯವನ್ನು ತಲುಪುತ್ತಾನೆ. ”ಖುರಾನ್‌ನಲ್ಲಿ ಇಲ್ಲದ ವಿಷಯವೇನಿದೆ ಈ ಗ್ರಂಥಾಲಯದ ಪುಸ್ತಕಗಳಲ್ಲಿ?” ಎಂದು ಗ್ರಂಥಪಾಲಕನನ್ನು ಪ್ರಶ್ನಿಸುತ್ತಾನೆ. ಉತ್ತರಕ್ಕೂ ಕಾಯದೆ ತಾನೇ ಹೇಳುತ್ತಾನೆ, “ಖುರಾನಿನಲ್ಲಿರುವುದಕ್ಕಿಂತ ಹೆಚ್ಚಿನದು ಅವುಗಳಲ್ಲಿದ್ದರೆ ನಾನವನ್ನು ಸುಟ್ಟು ಹಾಕುತ್ತೇನೆ. ಏಕೆಂದರೆ ಖುರಾನ್ ಪರಿಪೂರ್ಣವಾದದ್ದು. ಇದರಲ್ಲಿ ಇಲ್ಲದ ವಿಷಯಗಳ ಆವಶ್ಯಕತೆ ಇಲ್ಲ. ಖುರಾನ್ ಒಂದೇ ಸಾಕು. ಇನ್ನು ಖುರಾನ್ ಹೇಳಿರುವುದನ್ನೇ ಆ ಪುಸ್ತಕಗಳು ಬೇರೆ ರೀತಿಯಲ್ಲಿ ಹೇಳಿರುವುದಾದರೆ ಅವುಗಳನ್ನು ಸುಟ್ಟು ಹಾಕುವೆ. ಏಕೆಂದರೆ ಖುರಾನ್ ಸತ್ಯವೂ, ಪರಿಪೂರ್ಣವೂ ಆಗಿರುವಾಗ ಬೇರೆ ಪುಸ್ತಕಗಳು ಯಾಕೆ ಬೇಕು?” ಇದು ಧರ್ಮಾಂಧನ ಮನಸ್ಸು ವರ್ತಿಸುವ ರೀತಿ. ತಾನು ಸರಿ ಉಳಿದವರೆಲ್ಲ ತಪ್ಪು ಎನ್ನುವುದೇ ಕುರುಡು ವಿಶ್ವಾಸದ ತಳಹದಿ. ಯಾವ ವಿಷಯದಲ್ಲಿ ತಾನು ಸರಿ, ಯಾವುದರಲ್ಲಿ ಇತರರು ತಪ್ಪು ಎನ್ನುವ ಪ್ರಶ್ನೆ ಧರ್ಮಾಂಧನಿಗೆ ಉದ್ಭವಿಸದು. ತಾನು ನಂಬಿರುವುದೆಲ್ಲವೂ ಸರಿ, ಉಳಿದದ್ದೆಲ್ಲಾ ತಪ್ಪು. ಆತ ತಾರ್ಕಿಕವಾಗಿ ಯೋಚಿಸಲಾರ, ಏನನ್ನೂ ಅರ್ಥ ಮಾಡಿಕೊಳ್ಳಲಾರ. ಆತ ವಿಶ್ವಾಸಿ, ಅಂಧವಿಶ್ವಾಸಿ.   ಈ ಅಂಶವು ಎಲ್ಲಾ ಧರ್ಮಗಳಲ್ಲಿಯೂ ಇದ್ದರೂ ಇಸ್ಲಾಂ ಇದನ್ನು ಅದೆಷ್ಟರ ಮಟ್ಟಿಗೆ ಬೆಳೆಸಿದೆಯೆಂದರೆ, ಇದು ಅದರ ಮುಖವೇ ಆಗಿಹೋಗಿದೆ.

ಜೈನನು ಹಿಂಸಾ ವಿನೋದಿ. ಪ್ರತಿ ಮನಸ್ಸೂ ಹಿಂಸಾ ವಿನೋದಿಯೇ. ದೇಹವನ್ನು ದಂಡಿಸಿದಷ್ಟೂ ಮನಸ್ಸು ಉಬ್ಬುತ್ತದೆ. ದೇಹದಂಡನೆಯನ್ನು ನೀವು ಇಷ್ಟಪಡಲು ಶುರು ಮಾಡುತ್ತೀರಿ ಏಕೆಂದರೆ ಮನಸ್ಸು ಹೇಳುತ್ತೆ, “ಈಗ ನಾನು ಈ ದೇಹದ ಒಡೆಯ, ದೇಹ ನನಗೆ ಗುಲಾಮ.” ಇದನ್ನೇ ಜೈನ ಧರ್ಮ ಬೋಧಿಸುವುದು. ದೇಹವನ್ನು ಗೆಲ್ಲು. ದೇಹ ಆಹಾರವನ್ನು ಬೇಡಿದರೆ ನೀಡಬೇಡ. ನಿನ್ನ ದೇಹದ ಒಡೆಯ ನೀನು, ನಿನ್ನ ಯಜಮಾನಿಕೆಯನ್ನು ದೇಹದ ಮೇಲೆ ಸ್ಥಾಪಿಸು. ಹೀಗಾಗಿ ಉಪವಾಸವೆಂಬುದು ಜೈನ ಧರ್ಮದ ಅವಿಭಾಜ್ಯ ಅಂಗವಾಯಿತು. ಹೆಚ್ಚೆಚ್ಚು ದಿನಗಳ ಕಾಲ  ಉಪವಾಸವಿರಬಲ್ಲವನು ದೊಡ್ಡ ಸಂತನಾಗುತ್ತಾನೆ. ನಿಜಕ್ಕೂ ಅವರು ದೇಹವನ್ನು ಹಿಂಸಿಸುವ ಮಾನಸಿಕ ಅಸ್ವಸ್ಥರು. ದೇಹ ದೇವಾಲಯ- ಅದನ್ನು ಪ್ರೀತಿಸಬೇಕು, ಗೌರವಿಸಬೇಕು.

ಈ ಹಿಂಸಾವಿನೋದಿ ಗುಣ ಜೈನರ ಸ್ವತ್ತೇನಲ್ಲ. ನಿಮ್ಮ ದೇಹವನ್ನು ದಂಡನೆಗೊಳಪಡಿಸುವುದನ್ನು ನೀವು ಸುಖಿಸುತ್ತೀರಿ. ದೇಹವನ್ನು ಹಿಂಸಿಸಿ ಅದನ್ನೊಂದು ಯಂತ್ರದ ಹಾಗೆ, ಸೇವಕನ ಹಾಗೆ ನಡೆಸಿಕೊಂಡರೆ ನೀವು ಉಬ್ಬಿ ಹೋಗುತ್ತೀರಿ. ನೀವು ಶಕ್ತಿಶಾಲಿ ಎಂಬ  ಭಾವನೆ ನಿಮ್ಮನ್ನಾವರಿಸುತ್ತದೆ. ದೇಹವನ್ನು ದಂಡಿಸುವಲ್ಲಿ ವಿಫಲರಾದಿರೆಂದರೆ ನೀವು ಖಿನ್ನರಾಗುತ್ತೀರಿ. ಈ ಅಂಶವೂ ಸಹ ಎಲ್ಲಾ ಧರ್ಮಗಳಲ್ಲಿ ಅಡಕವಾಗಿದೆ. ಆದರೆ ಅದನ್ನು ಸಿಂಗರಿಸಿ, ಹೊಳೆಯುವಂತೆ ತಿಕ್ಕಿ ತೀಡಿ ಬೆಳೆಸಿದ್ದು ಜೈನ ಧರ್ಮ.

ಇನ್ನು ಬೌದ್ಧ ಧರ್ಮ ಮನಸ್ಸಿನ ಮತ್ತೊಂದು ಮುಖವಾದ ಪಲಾಯನವಾದವನ್ನು ಬೆಳೆಸಿತು. ಪ್ರಪಂಚವನ್ನು ಎದುರಿಸಬೇಡ, ಓಡಿ ಹೋಗು, ಬೆಟ್ಟಕ್ಕೆ ಹೋಗು, ಕಾಡನ್ನು ಸೇರಿಕೋ, ಸರ್ವ ಸಂಗ ಪರಿತ್ಯಾಗಿಯಾಗಿ ನಿಲ್ಲು. ಇದು ಶುದ್ಧ ಪಲಾಯನವಾದ. ಎಲ್ಲರಲ್ಲೂ ಇರುವ ಈ ಅಂಶವನ್ನು ಬೆಳೆಸಿ, ಅದಕ್ಕೊಂದು ರೂಪ ಕೊಟ್ಟು, ಅದನ್ನೊಂದು ತತ್ವಜ್ಞಾನವಾಗಿ ರೂಪಿಸಿ, ಅದರ ಮೇಲೆ ವಾದ ಮಾಡಿ, ಅದನ್ನು ಗಟ್ಟಿಗೊಳಿಸಿದ್ದು ಬೌದ್ಧರು.

ಹೀಗೆ ಎಲ್ಲಾ ಧರ್ಮಗಳು ಮನಸ್ಸಿನ ಒಂದೊಂದು ಮುಖವನ್ನು ಅಪ್ಪಿಕೊಂಡು ಅದನ್ನೇ ತಮ್ಮ ಬಂಡವಾಳವಾಗಿಸಿಕೊಂಡವು. ಎಲ್ಲವೂ ಮನಸ್ಸನ್ನೇ ಅವಲಂಬಿಸಿರುವುದರಿಂದ ಇವ್ಯಾವೂ ನಿಜದ ಅಧ್ಯಾತ್ಮವನ್ನು ನೀಡಲಾರವು.

Comments»

No comments yet — be the first.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: