jump to navigation

ಮದರ್ ತೆರೇಸಾ ಸೋಗುಗಾತಿ, ಕಪಟಿ, ಹಿಪೋಕ್ರಿಟ್ ಎಂದವನು ಓಶೋ!!! November 7, 2009

Posted by uniquesupri in ಓಶೋ ಹೇಳಿದ್ದು.
Tags: , , , , ,
add a comment

- ಹೇಮಾ ಪವಾರ್, ಬೆಂಗಳೂರು

ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮದರ್ ತೆರೆಸಾ ಎಂದು ಪರಿಚಿತಳಾದಳು. ಭಾರತದ ಕೊಳಚೆ ಪ್ರದೇಶಗಳ ವಾಸಿಗಳ ಏಳ್ಗೆಗಾಗಿ ಶ್ರಮಿಸಿದ್ದಕ್ಕಾಗಿ ನೊಬೆಲ್ ಬಹುಮಾನವನ್ನೂ ಪಡೆದಳು – ಇದಿಷ್ಟು ನಾವು ಆಕೆಯ ಬಗ್ಗೆ ತಿಳಿದ ವಿಚಾರಗಳು.ಆದರೆ ಗಾಂಧಿ ಇಂದ ಬುದ್ದನವರೆಗೂ, ಆಧ್ಯಾತ್ಮದಿಂದ ಲೈಂಗಿಕತೆಯವರೆವಿಗೂ ಎಲ್ಲವನ್ನೂ, ಎಲ್ಲವನ್ನೂ ತನ್ನ ಮಾತುಗಳಲ್ಲಿ ಹಿಡಿದು ಹೊಸ ಅರ್ಥ ಕೊಡುವ ಓಶೋ ರಜನೀಶ್ ಮದರ್ ತೆರೆಸಾ ಬಗ್ಗೆ ಬೇರೆಯದೇ ರೀತಿಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ನೊಬೆಲ್ ಪ್ರಶಸ್ತಿಯಿಂದ ಪ್ರಖ್ಯಾತಿಯನ್ನು ಪಡೆದ ತೆರೆಸಾರನ್ನು, ಸೋಗುಗಾರ್ತಿ, ಕಪಟಿ ಹಾಗೂ ಹಿಪೋಕ್ರಿಟ್ ಎಂದು ಕರೆಯುತ್ತಾನೆ. osho-rajneesh-gray

ತನ್ನ ಅಭಿಪ್ರಾಯಗಳು ವಿಪರೀತವಾಗಿರುವಂತೆ ನೋಡಿಕೊಳ್ಳುತ್ತಿದ್ದ ರಜನೀಶನ ಅಭಿಪ್ರಾಯವನ್ನು ಅಕ್ಷರಶಃ ಒಪ್ಪುವುದು ಯಾರಿಗೂ ಸಾಧ್ಯವಿಲ್ಲವಾದರೂ ಆತನ ದೃಷ್ಟಿಕೋನದ ಬೆಳಕಿನಲ್ಲಿ ನಮ್ಮ ತಿಳುವಳಿಕೆಯನ್ನು, ಅಭಿಪ್ರಾಯಗಳನ್ನು ಪುನರ್ವಿಮರ್ಶಿಸಿಕೊಳ್ಳುವುದು ನಮಗೆ ಉಪಯುಕ್ತವಾಗಬಹುದು. ತನ್ನ ಪ್ರವಚನವೊಂದರಲ್ಲಿ ರಜನೀಶ್ ತೆರೆಸಾರನ್ನು ಅವಲೋಕಿಸಿದ ಪರಿ ಇಂತಿದೆ:

ವಂಚಕಿ ಎಂದು ನಾನು ಆಕೆಯನ್ನು ಕರೆದದ್ದು ಕೇವಲ ಆಕೆ ಬೇರೆಯವರನ್ನು ವಂಚಿಸುತ್ತಾಳೆಂದಲ್ಲ. ವಂಚನೆಯು ಮೊದಲು ತನ್ನಿಂದಲೇ ಶುರುವಾಗುತ್ತದೆ. ನೀವು ಇತರರನ್ನು ವಂಚಿಸಬೇಕೆಂದುಕೊಂಡರೆ, ಮೊದಲು ನಿಮ್ಮನ್ನು ನೀವು ವಂಚಿಸಿಕೊಳ್ಳಬೇಕಾಗುತ್ತದೆ. ಇದು ಎರಡು ಕಡೆ ಹರಿತವಿರುವ ಖಡ್ಗದ ಹಾಗೆ.

ಮದರ್ ತೆರೆಸಾ ಬಡವರ, ಅನಾಥರ, ವಿಧವೆಯರ ಮತ್ತು ವೃದ್ದರ ಸೇವೆಯನ್ನು ಒಳ್ಳೆಯ ಉದ್ದೇಶವಿಟ್ಟುಕೊಂಡೇ ಮಾಡುತ್ತಿರಬಹುದು. ಆಕೆಯ ಪ್ರಾಮಾಣಿಕತೆಯ ಬಗ್ಗೆ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಆಕೆಯ ಉದ್ದೇಶಗಳು ತಪ್ಪೆಂದೂ ನಾನು ಹೇಳುತ್ತಿಲ್ಲ. ಆದರೆ ಒಳ್ಳೆಯ ಉದ್ದೇಶವಿದ್ದ ಮಾತ್ರಕ್ಕೆ ಫಲಿತಾಂಶವೂ ಒಳ್ಳೆಯದೇ ಆಗಿರಬೇಕೆಂಬ ನಿಯಮವಿಲ್ಲ. ನೀವು ಹೂಗಳೇ ಅರಳದ ಒಂದು ಮುಳ್ಳಿನ ಮರದ ಬೀಜವನ್ನು ಬಿತ್ತಿ ಅದರಿಂದ ಸುಂದರ ಹೂಗಳು ಬೆಳೆಯಬೇಕೆಂದು ನಿರೀಕ್ಷಿಸಿದರೆ  ನಿಮಗೆ ಮುಳ್ಳುಗಳಲ್ಲದೇ ಬೇರೇನು ಸಿಗುವುದಿಲ್ಲ. ಏಕೆಂದರೆ ನೀವು ನೆಟ್ಟಿದ್ದು ಹೂವಿನ ಗಿಡವಲ್ಲ. ಇಲ್ಲಿ ಹೂವನ್ನು ಬೆಳೆಯುವ ನಿಮ್ಮ ಉದ್ದೇಶ ಒಳ್ಳೆಯದೇ ಇರಬಹುದು ಆದರೆ ಫಲಿತಾಂಶವು ಯಾವಾಗಲೂ ನಿಮ್ಮ ಕ್ರಿಯೆಯನ್ನವಲಂಬಿಸಿರುತ್ತದೆ ಹೊರತು ನಿಮ್ಮ ಉದ್ದೇಶಗಳನ್ನಲ್ಲ.

ತೆರೆಸಾ ಬಡವರ ಸೇವೆ ಮಾಡುತ್ತಿರುವುದು ನಿಜ, ಆದರೆ ಬಡವರು ನೂರಾರು ವರ್ಷಗಳಿಂದ ಸೇವೆ ಪಡೆಯುತ್ತಿದ್ದಾರೆ. ಅದರಿಂದ ಬಡತನವನ್ನಂತೂ ನಾಶಮಾಡಲಾಗಿಲ್ಲ. ಬಡವರ ಸೇವೆ ಮಾಡುವುದರಿಂದ ಬಡತನ ನಾಶವಾಗುವುದಿಲ್ಲ. ತೆರೆಸಾರಂತವರು ಬಡವರ ಸೇವೆ ಮಾಡಿ, ಅವರನ್ನು ಸಮಾಜ ತಿರಸ್ಕರಿಸುತ್ತಿಲ್ಲ ಎಂಬ ಭಾವನೆ ಮೂಡಿಸುತ್ತಾರಷ್ಟೇ. ಇಲ್ಲವಾದಲ್ಲಿ ಬಡವರಿಗೆ ತಾವು ತಿರಸ್ಕೃತರು ಎನ್ನಿಸಿ, ಅವರ ಅಸಹಾಯಕತೆ ಕೋಪಕ್ಕೆ ತಿರುಗಿ ಅವರು ಕ್ರೂರಿಗಳಾಗುತ್ತಾರೆ. ಸಮಾಜದ ವಿರುದ್ದ ಬಂಡೇಳುತ್ತಾರೆ. ಬಡವರ, ಅನಾಥರ ಮತ್ತು ವಿಧವೆಯರ ಸೇವೆ ಮಾಡುವಂತೆ ಸೋಗು ಹಾಕುವ ಈ ಮಿಶನರಿಗಳು ನಿಜದಲ್ಲಿ ಅವರನ್ನು ಶೋಷಿಸುತ್ತಿರುತ್ತವೆ. ಮದರ್ ತೆರೆಸಾ ನಡೆಸುವ ಮಿಶನರಿ ಆಫ್ ಚಾರಿಟಿಯಲ್ಲಿ ೭೦೦೦ ಅನಾಥರು ಬಡವರಿಗೆ ನಿತ್ಯ ಊಟ ಹಾಕಲಾಗುತ್ತದೆ. ಅಷ್ಟು ದುಡ್ಡು ಈ ಮಿಶನರಿಗಳಿಗೆ ಎಲ್ಲಿಂದ ಬರುತ್ತದೆ?

೧೯೭೪ ರಲ್ಲಿ ಪೋಪ್ ಮದರ್ ತೆರೆಸಾಗೆ ಒಂದು ಕಾಡಿಲ್ಯಾಕ್ ಕಾರನ್ನು ಉಡುಗೊರೆಯಾಗಿ ಕೊಟ್ಟರು. ಆಕೆ ತಕ್ಷಣ ಅದನ್ನು ಮಾರಿ, ಅದರಿಂದ ಬಂದ ಹಣವನ್ನು ಬಡವರಿಗಾಗಿ ಖರ್ಚು ಮಾಡಿದರು. ಎಲ್ಲರೂ ಅದನ್ನು ಹೊಗಳಿದರು. ಆದರೆ ನನ್ನ ಪ್ರಶ್ನೆ ಆ ಕಾರು ಕೊಳ್ಳಲು ಹಣ ಬಂದಿದ್ದಾದರೂ ಎಲ್ಲಿಂದ? ಪೋಪ್ ಹಣವನ್ನು ಧಿಡೀರ್ ಎಂದು ಉತ್ಪತ್ತಿ ಮಾಡಿರಲಿಕ್ಕಿಲ್ಲ. ಆತನು ಅದನ್ನು ಶೇಖರಿಸಿಟ್ಟಿದ್ದ. ಒಂದು ಕಾರನ್ನು ಉಡುಗೊರೆಯಾಗಿ ನೀಡುವಷ್ಟು ದುಡ್ಡು
ಪೋಪನ ಬಳಿ ಇತ್ತು. ಮತ್ತು ಆತನ ಹತ್ತಿರ ಜಗತ್ತಿನ ಎಲ್ಲ ಶ್ರೀಮಂತರ ಬಳಿ ಇರುವಷ್ಟೇ ಹಣವಿದೆ. ಆ ದುಡ್ಡು ಎಲ್ಲಿಂದ ಬಂತು? ಆತ ಕೂಡಿಟ್ಟ ದುಡ್ಡಿನ ಶೇಕಡ ೧ ರಷ್ಟೂ ಅಲ್ಲದ ದುಡ್ಡು ಬಡವರ ಸೇವೆಗೆಂದು ಮೀಸಲು. ಈ ಮಿಶನರಿ ಆಫ್ ಚಾರಿಟಿಗಳು ನಿಜದಲ್ಲಿ ಬಂಡವಾಳಶಾಹಿಗಳ ಸೇವೆ ಮಾಡುತ್ತವೆ. ಆದರೆ ಬಡವರ ಸೇವೆ ಮಾಡುತ್ತಿರುವಂತೆ ಸೋಗುಹಾಕುತ್ತವೆ. ಇದರಿಂದ ಬಡವರ ಮನದಲ್ಲಿ ಇದೊಂದು ಉತ್ತಮ ಸಮಾಜ ಹಾಗೂ ಇದರ ವಿರುದ್ದ ನಾವು
ದನಿಯೆತ್ತಬಾರದೆಂಬ ಭಾವ ಗಾಢವಾಗುತ್ತದೆ. ಮಿಶನರಿಗಳು ರೈಲ್ವೆ ಬೋಗಿಗಳೆರಡಕ್ಕೂ ಘರ್ಷಣೆಯಾಗದಂತೆ ಇರಲು ಬಳಸುವ ಕೀಲೆಣ್ಣೆಗಳ ತರಹ ಕೆಲಸ ಮಾಡುತ್ತವೆ. ಬಡವರ ಮನದಲ್ಲಿ ಆಶೆ ಹುಟ್ಟಿಸಿ ಅವರು ಸಮಾಜದ ವಿರುದ್ದ ಹೋರಾಡದೆ ಅದರ mother_teresa ಗುಲಾಮನಾಗುವಂತೆ ಮಾಡುವುದೇ ಇವರ ಮೂಲ ಉದ್ದೇಶವಾಗಿರುತ್ತದೆ.

ಮದರ್ ತೆರೆಸಾಗೆ ನೊಬೆಲ್ ಪ್ರಶಸ್ತಿ ನೀಡಬಾರದಿತ್ತೆಂದು ನಾನು ಹೇಳಿದ್ದೇನೆ. ಇದರಿಂದ ಆಕೆ ಕೋಪಗೊಂಡಂತಿದೆ. ಆದರೆ ಈ ನೊಬೆಲ್ ಎನ್ನುವ ಮನುಷ್ಯ ಜಗತ್ತಿನ ಅತಿ ದೊಡ್ಡ ಪಾತಕಿಗಳಲ್ಲೊಬ್ಬ. ಮೊದಲನೇ ಮಹಾಯುದ್ದವು  ಈತನಿಂದ ಖರೀದಿಸಿದ ಶಸ್ತ್ರಾಸ್ತ್ರಗಳಿಂದಲೇ ನಡೆದದ್ದು. ಈತನು ಮೊದಲನೆ ಮಹಾಯುದ್ದದಿಂದ ಸಾಕಷ್ಟು ಹಣ ಸಂಗ್ರಹಿಸಿದ. ಅಮಾಯಕ ಜನರನ್ನು ಕೊಂದ. ಸಾವಿನ ಸರದಾರನಾಗಿದ್ದ. ಈತ ಸಂಗ್ರಹಿಸಿಟ್ಟಿದ್ದ ಹಣದ ಬಡ್ಡಿಯನ್ನೇ ಈಗ ಪ್ರತಿ ವರ್ಷವೂ ಡಜನುಗಟ್ಟಲೇ ನೊಬೆಲ್ ಬಹುಮಾನಗಳಾಗಿ, ಇಪ್ಪತ್ತು ಲಕ್ಷದವರೆಗಿನ ಪುರಸ್ಕಾರವಾಗಿ ಹಂಚಲಾಗುತ್ತಿದೆ. ಈ ಹಣ ಆತನಿಗೆ ಎಲ್ಲಿಂದ ಬಂತು? ಹೀಗೆ ಸಹಸ್ರಾರು ಜನರ ರಕ್ತದಿಂದ ಬಂದ ಹಣ ಮಿಶನರಿಯಾದ ಮದರ್ ತೆರೆಸಾಗೆ ಕೊಡಲಾಗುತ್ತದೆ ಮತ್ತು ಅದನ್ನು ಆಕೆ ೭೦೦೦ ಜನ ಬಡವರ ಶುಶ್ರೂಶೆಗೆ ಬಳಸುತ್ತಾರೆ. ಮೊದಲು ಸಹಸ್ರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಅನಾಥರಾಗಿಸಿ ಬಂದ ದುಡ್ಡಿನಿಂದ ೭೦೦೦ ಅನಾಥರ, ಬಡವರ ವೃದ್ಧರ ವಿಧವೆಯರ ಶುಶ್ರೂಷೆ ಮಾಡುವುದು ಯಾವ ನ್ಯಾಯ?

ಇಷ್ಟೆಲ್ಲಾ ಗೊತ್ತಿದ್ದು ಮದರ್ ತೆರೆಸಾ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಲಿಲ್ಲ. ಗೌರವ ಪ್ರತಿಷ್ಠೆ ಪಡೆಯುವ ಹಂಬಲ ಆಕೆಯಲ್ಲಿ ಯಾವತ್ತೂ ಇದೆ. ಹಾಗಾಗಿ ಆಕೆ ನೊಬೆಲ್ ಬಹುಮಾನವನ್ನು ಒಪ್ಪಿಕೊಂಡರು. ಒಬ್ಬ ಧರ್ಮನಿಷ್ಠ ವ್ಯಕ್ತಿಯು ಸಮಾಜದ ಕಟ್ಟುಪಾಡುಗಳನ್ನು ಉಲ್ಲಂಘಿಸಿಯಾದರೂ ಧರ್ಮದ ಪ್ರತಿಷ್ಠಾಪನೆ ಮಾಡುತ್ತಾನೆ. ಸಮಾಜವು ಆತನನ್ನು ತಿರಸ್ಕರಿಸುತ್ತದೆ,ಅಲ್ಲಗೆಳೆಯುತ್ತದೆ. ಆದರೆ ಮದರ್ ತೆರೆಸಾರನ್ನು ಸನ್ಯಾಸಿನಿ ಎಂದು ಉಪ್ಪರಿಗೆ ಮೇಲೆ ಕೂರಿಸಲಾಗುತ್ತಿದೆ. ಮದರ್ ತೆರೆಸಾ ಸರಿಯೆಂದಾದರೆ ಜೀಸಸ್‌ನನ್ನು ಅಲ್ಲಗೆಳೆಯಬೇಕಾಗುತ್ತದೆ. ಜೀಸಸ್ ಸರಿ ಎಂದಾದಲ್ಲಿ ಮದರ್ ತೆರೆಸಾ ಸೋಗುಗಾರ್ತಿ ಅಲ್ಲದೆ ಮತ್ತೇನು ಅಲ್ಲ. ಕಪಟಿಗಳು ಸೋಗು ಹಾಕುವವರು ಯಾವಾಗಲೂ ಜನರಿಂದ ಸಮಾಜದಿಂದ ಗೌರವ ಪಡೆಯುತ್ತಾರೆ. ಏಕೆಂದರೆ ಅವರು ಸಮಾಜಕ್ಕೆ ಜನರಿಗೆ ಬೇಕಾದ ರೀತಿಯಲ್ಲಿ ಬದಲಾಗಬಲ್ಲರು.

***

ಪ್ರೊಟೆಸ್ಟನ್ಟ್ ಕ್ರಿಶ್ಚಿಯನ್ ದಂಪತಿಗಳಿಗೆ ತನ್ನ ಅನಾಥಾಲಯದಿಂದ ಮಗುವನ್ನು ದತ್ತು ಕೊಡಲು ನಿರಾಕರಿಸಿದ ಮದರ್ ತೆರೆಸಾ ನೀಡಿದ ಕಾರಣ, ಆ ಸಮಯದಲ್ಲಿ ಆಕೆಯ ಆಶ್ರಮದಲ್ಲಿ ಅನಾಥ ಮಕ್ಕಳು ಇರಲಿಲ್ಲ ಎಂದು! ೭೦೦೦ ಜನರ ಅನಾಥಾಶ್ರಮ ನಡೆಸುತ್ತಿರುವ ಆಕೆ ಚಾರಿಟಿ ಮಿಶನರಿನಲ್ಲಿ ದತ್ತು ಕೊಡಲು ಒಂದೇ ಒಂದು ಅನಾಥ ಮಗುವಿಲ್ಲ! ಅದು ಭಾರತದಂತಹ ದೇಶದಲ್ಲಿ ಅನಾಥ ಮಗುವಿಗೆ ಕೊರತೆಯೇ? ಭಾರತೀಯರಂತು ಅಗತ್ಯಕ್ಕಿಂತ ಹೆಚ್ಚಾಗಿ ಅನಾಥರನ್ನು ಹುಟ್ಟುಹಾಕುವಲ್ಲಿ ನಿಷ್ಣಾತರು.

ಆದರೆ ನಿಜ ವಿಷಯ ಬೇರೆಯದೆ ಇತ್ತು. ಆ ಪ್ರೊಟೆಸ್ಟಂಟ್ ದಂಪತಿಗಳು ಅದಾಗಲೇ ಮಗುವನ್ನು ನೋಡಿ ದತ್ತಕಕ್ಕೆ ಒಪ್ಪಿಯಾಗಿತ್ತು. ಮದರ್ ತೆರೆಸಾಗೆ ಕುಟುಕಿದ್ದು ಅವರು ಆಕೆ ನೀಡಿದ ಫಾರಂನಲ್ಲಿ ತಾವು ಪ್ರೊಟೆಸ್ಟಂಟ್ ಚರ್ಚಿಗೆ ಸಂಬಂಧಿಸಿದವರೆಂದು ದಾಖಲು ಮಾಡಿದುದು. ಮಗುವನ್ನು ಕೊಡದೆ ಇರಲು ಆಕೆ ನೀಡಿದ ನೇರ ಕಾರಣ ’ಇಲ್ಲಿನ ಮಕ್ಕಳು ರೋಮನ್ ಕ್ಯಾಥೋಲಿಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ, ಅವರನ್ನು ಪ್ರೊಟೆಸ್ಟಂಟ್ ಗಳಾಗಿಸುವುದು ಅವರ ಮಾನಸಿಕ ವಿಕಾಸಕ್ಕೆ ಧಕ್ಕೆ ತರಬಹುದು. ಹಾಗಾಗಿ ನಿಮಗೆ ಮಗುವನ್ನು ಕೊಡಲು ಆಗುವುದಿಲ್ಲ’. ಇದರಿಂದ ದತ್ತು ತೆಗೆದುಕೊಳ್ಳಲು ಬಂದ ದಂಪತಿಗಳಿಗೆ ಆದ ಆಘಾತ ಅಷ್ಟಿಷ್ಟಲ್ಲ. ಅವರೇನು ಏನೂ ತಿಳಿಯದವರಲ್ಲ, ಅವರಲ್ಲಿ ಗಂಡನು ಯುರೋಪಿಯನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿದ್ದಾರೆ.

ನಿಮಗೆ ಒಂದು ವಿಷಯ ತಿಳಿದಿರಲಿ ಆ ಅನಾಥ ಮಕ್ಕಳೆಲ್ಲ ಮೂಲ ಹಿಂದುಗಳಾಗಿದ್ದವರು. ಮದರ್ ತೆರೆಸಾಗೆ ಆ ಮಕ್ಕಳ ಮಾನಸಿಕ ವಿಕಾಸದ ಬಗ್ಗೆ ಆಷ್ಟು ಕಾಳಜಿ ಇದ್ದಿದ್ದೇ ಆಗಿದ್ದರೆ ಆಕೆ ಹಿಂದುಗಳಾಗಿದ್ದ ಅವರನ್ನು ಹಿಂದುಗಳಾಗಿಯೇ ಬೆಳೆಸಬೇಕಿತ್ತು. ಅವರನ್ನು ರೋಮನ್ ಕ್ಯಾಥೋಲಿಕ್ ಗಳಾಗಿ ಮತಾಂತರಿಸಿದ್ದೇಕೆ? ಈಗ ಅವರನ್ನು ಪ್ರೊಟೆಸ್ಟೆಂಟ್ ಗಳಾಗಿ ಮಾಡಿದರೆ ಆಗುವ ಹಾನಿಯೇನು? ಪ್ರೊಟೆಸ್ಟೆಂಟ್ ಮತ್ತು ಕ್ಯಾಥೋಲಿಕ್ ಎರಡೂ ಒಂದೇ ಸಿಗರೇಟಿನ ಎರೆಡು ಬ್ರಾಂಡ್ ಗಳಿದ್ದಂತೆ. ಅದೇ ಪೇಪರ್, ಅದೇ ತಂಬಾಕು, ತಯಾರಕನೂ ಒಬ್ಬನೇ ಹೆಸರುಗಳು ಬೇರೆ ಅಷ್ಟೇ!

ಕೆಲವೇ ದಿನಗಳ ಹಿಂದೆ ಪಾರ್ಲಿಮೆಂಟಿನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆಯಾಯಿತು. ಅದರ ಉದ್ದೇಶ ಹೀಗಿತ್ತು: ಯಾರೊಬ್ಬರಿಗೂ ಒಬ್ಬ ವ್ಯಕ್ತಿಯನ್ನು ಒಂದು ಧರ್ಮ ಅಥವಾ ಮತಕ್ಕೆ ಮತಾಂತರವಾಗುವಂತೆ  ಬಲವಂತಪಡಿಸಕೂಡದು ಎಂದು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮದರ್ ತೆರೆಸಾ ಪ್ರೈಮ್ ಮಿನಿಸ್ಟರ್ ಗೆ ಪತ್ರ ಬರೆದು ವಿರೋಧಿಸಿದರು. ಕ್ರಿಶ್ಚಿಯನ್ ಓಟುಗಳ ಹಿಂದೆ ಬಿದ್ದಿದ್ದ ರಾಜಕಾರಣಿಗಳು ಆಕೆಯ ಪತ್ರವನ್ನು ಮನ್ನಿಸಿ
ಧಾರ್ಮಿಕ ಸ್ವಾತಂತ್ರ್ಯದ ವಿಷಯ ಕೈಬಿಟ್ಟರು.

ಮದರ್ ತೆರೆಸಾ ನಿಜವಾಗಿಯೂ ಮತಾಂತರ ಮಾನಸಿಕ ವಿಕಾಸವನ್ನು ತಡೆಯುತ್ತದೆ ಎಂದು ನಂಬಿದ್ದರೆ ಆಕೆ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿರಬೇಕಿತ್ತು. ಒಬ್ಬ ವ್ಯಕ್ತಿಯನ್ನು ಬಲವಂತದಿಂದ ಮತಾಂತರಿಸುವುದಕ್ಕೆ ವಿರೋಧಪಡಿಸಬೇಕಿತ್ತು. ಮದರ್ ತೆರೆಸಾ ಶುದ್ದ ಕಪಟಿ, ಆಕೆ ಹೇಳುವುದು ಒಂದು ಮಾಡುವುದು ಒಂದು ಎಂದು ಇದರಿಂದ ತಿಳಿಯುತ್ತದೆ.ನಾನು ಕಪಟಿ, ವಂಚಕಿ, ಸೋಗುಗಾರ್ತಿ ಎಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಮದರ್ ತೆರೆಸಾ,
ನಾನು ನಿಮ್ಮನ್ನು ಅಪಾರ ಪ್ರೀತಿಯಿಂದ ಕ್ಷಮಿಸಿದ್ದೇನೆ ಎಂದಿದ್ದಾರೆ. ಪ್ರೀತಿಯಿದ್ದಲ್ಲಿ ಕ್ಷಮಿಸಬೇಕಾಗಿ ಬರುವುದಿಲ್ಲ, ಕೋಪವಿದ್ದರಷ್ಟೇ ಕ್ಷಮೆಯಿರುವುದು. ಕೋಪವನ್ನು ಮೀರಲೆಂದೇ ನಾನು ಧ್ಯಾನ ಮಾಡಬೇಕೆನ್ನುವುದು. ನಾನು ಮದರ್ ತೆರೆಸಾಳನ್ನು ಕ್ಷಮಿಸುವುದಿಲ್ಲ ಏಕೆಂದರೆ ನಾನು ಆಕೆಯ ಬಗ್ಗೆ ಕೋಪಗೊಂಡಿಲ್ಲ.

ಇಷ್ಠಕ್ಕೂ ನಾನು ಯಾವ ಪಾಪ ಮಾಡಿದ್ದೇನೆಂದು ಆಕೆ ನನ್ನನ್ನು ಕ್ಷಮಿಸಬೇಕು? ಎಲ್ಲವೂ ಈ ಕ್ಯಾಥೋಲಿಕ್ಕರ ಮೂರ್ಖತನ. ಅವರು ಎಲ್ಲರನ್ನೂ ಎಲ್ಲವನ್ನು ಕ್ಷಮಿಸುತ್ತಾ ತಿರುಗುತ್ತಾರೆ.

ಮದರ್ ತೆರೆಸಾರನ್ನು ಕಪಟಿ ವಂಚಕಿ ಸೋಗುಗಾತಿ ಎಂದು ಕರೆದದ್ದಕ್ಕೆ ನನಗೆ ಚೂರೂ ಪಶ್ಚಾತ್ತಾಪವಿಲ್ಲ ಹಾಗೂ ಮುಂದುವರೆದು ನಾನು ಆಕೆಯನ್ನು  ಮೂರ್ಖಳು, ಮಧ್ಯವರ್ತಿ ಹಾಗೂ ತಿಳಿಗೇಡಿಯೆಂದೂ ಕರೆಯಲು ಇಚ್ಚಿಸುತ್ತೇನೆ. ಮತ್ತು ಅಪಾರ ಪ್ರೀತಿಯಿಂದ ನನ್ನನ್ನು ಕ್ಷಮಿಸಿದ ಆಕೆಗೆ ಸ್ಪಷ್ಠವಾಗಿ ತಿಳಿಯಪಡಿಸುವುದೇನೆಂದರೆ ಕ್ಷಮಿಸಬೇಕಾಗಿರುವುದು ಆಕೆಯನ್ನು ಮತ್ತು ಆಕೆಯಂತಹ ಮಿಶನರಿಗಳನ್ನಲ್ಲದೇ ನನ್ನನ್ನಲ್ಲ. ಏಕೆಂದರೆ ಆಕೆ ಮತ್ತು ಇತರ ಮಿಶನರಿಗಳು ಕ್ಷಮಿಸಲಾರದಂತಹ ಪಾಪವನ್ನು ಮಾಡುತ್ತಿರುವರು.

ಗರ್ಭಪಾತವೆಂಬ ಪಾಪದ ವಿರುದ್ದ ನಾನು ದತ್ತು ತೆಗೆದುಕೊಳ್ಳುವುದರ ಮೂಲಕ ಹೋರಾಡುತ್ತೇನೆ ಎಂದಿದ್ದಾರೆ.

ಗರ್ಭಪಾತವು ಪಾಪವಲ್ಲವೇ ಅಲ್ಲ. ಅದೂ ಭಾರತದಂತಹ ಅತಿ ಜನಸಂಖ್ಯೆಯ ರಾಷ್ಟ್ರದಲ್ಲಿ ಅದೊಂದು ಪವಿತ್ರ ಕೆಲಸ. ಒಂದು ವೇಳೆ ಗರ್ಭಪಾತವು ಪಾಪವೆಂದಾದರೆ ಅದಕ್ಕೆ ಕಾರಣ ಈ ಪೋಲಾಕ್ ಪೋಪ್, ಮದರ್ ತೆರೆಸಾ ಮತ್ತು ಸಂಗಡಿಗರು. ಏಕೆಂದರೆ ಇವರು ಮತ್ತು ಇವರ ಸಂಘವು ಗರ್ಭನಿರೋಧಕಗಳಿಗೆ ವಿರೋಧ ಒಡ್ಡುತ್ತದೆ. ಅತಿ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿರುವ ಪ್ರಪಂಚದಲ್ಲಿ ಗರ್ಭನಿರೋಧಕವು ಆಧುನಿಕ ವಿಜ್ಞಾನದ ವರವಾಗಿದೆ ಮತ್ತು ಇದನ್ನು ತಪ್ಪು ಎಂದು ಹೇಳುವವರು ಕ್ಷಮಿಸಲು ಅನರ್ಹವಾದ ಅಪರಾಧ ಮಾಡುತ್ತಿದ್ದಾರೆ. ಜನಸಂಖ್ಯೆ ಕಡಿಮೆಯಾಗಿ ಜನರೆಲ್ಲಾ ನೆಮ್ಮದಿಯಿಂದ ಬಾಳುವಂತಾದರೆ, ಭೂಮಿಯ ಮೇಲೆ ಸ್ವರ್ಗ ಉಂಟಾಗಲಿದೆ, ಹಾಗದಲ್ಲಿ ಮದರ್ ತೆರೆಸಾರ ಮತ್ತು ಮಿಶನರಿ ಆಫ್ ಚಾರಿಟಿಗಳಿಗೆ ಬಡವರು ಅನಾಥರು ಇಲ್ಲದಂತಾಗಿ ಅವರು ಸ್ವರ್ಗದ ದಾರಿಯನ್ನು ತೋರುವುದಾದರು ಯಾರಿಗೆ? ನಿಜ ಹೇಳಬೇಕೆಂದರೆ ಗರ್ಭಪಾತಗ ಮತ್ತು ಗರ್ಭ ನಿರೋಧಕಗಳನ್ನು ವಿರೋಧಿಸುವ ಈ ಜನರೇ ಅನಾಥರ ಸೃಷ್ಠಿಗೆ ಕಾರಣ. ಇವರೇ  ಅನಾಥರನ್ನು ಸೃಷ್ಟಿಸುತ್ತಾರೆ ನಂತರ ಅವರ ಸೇವೆ ಮಾಡುತ್ತಾರೆ. ಆಹಾ! ಎಂಥ ಸುಂದರ ಕೆಲಸ ಇವರದು.

ನಾನು ಇಬ್ಬರು ಸಹೋದರರ ಬಗ್ಗೆ ಕೇಳಿದ್ದೆ. ಇಬ್ಬರಲ್ಲಿ ಒಬ್ಬ ದಿನವೂ ರಾತ್ರಿ ಹಳ್ಳಿಯ ಮನೆಗಳ ಮುಂದೆಲ್ಲಾ ಸಾಕಷ್ಟು ಕಸ ಹರಡಿ ಬರುತ್ತಿದ್ದ. ಮಾರನೆಯ ಬೆಳಿಗ್ಗೆ ಇನ್ನೊಬ್ಬ ಸಹೋದರನು ತಾನು ಕಸ ತೆಗೆದು ಶುಚಿ ಮಾಡಿಕೊಡುವುದಾಗಿ ಹಳ್ಳಿಯ ಬೀದಿಗಳಲ್ಲಿ ಕೂಗುತ್ತಾ ಸಾಗುತ್ತಿದ್ದ. ಮನೆಯ ಮುಂದೆ ಆಗಲೇ ಸಾಕಷ್ಟು ಕಸ ಇರುತ್ತದಾದ್ದರಿಂದ ಜನ ಶುಚಿ ಮಾಡಿಸಲು ಮುಗಿಬೀಳುತ್ತಿದ್ದರು. ಒಬ್ಬನು ಇಲ್ಲಿ ಕೆಲಸ ಮುಗಿಸುವಷ್ಟರಲ್ಲೇ ಇನ್ನೊಬ್ಬ
ಸಹೋದರ ಮತ್ತೊಂದು ಹಳ್ಳಿಯಲ್ಲಿ ಕಸ ಚೆಲ್ಲಿರುತ್ತಿದ್ದ ಹೀಗೆ ಅವರಿಬ್ಬರೂ ಸಾಕಷ್ಟು ಹಣ ಮಾಡುತ್ತಿದ್ದರು.

ಮದರ್ ತೆರೆಸಾ ಮತ್ತು ಆಕೆಯ ಸಂಗಡಿಗರು ಮಾಡುತ್ತಿರುವುದೂ ಇದನ್ನೇ! ಗರ್ಭನಿರೋಧಕವನ್ನು ವಿರೋಧಿಸುವುದು, ಗರ್ಭಪಾತವನ್ನು ವಿರೋಧಿಸುವುದು, ಜನಸಂಖ್ಯೆ ನಿಯಂತ್ರಣದ ಎಲ್ಲ ಸೂತ್ರಗಳನ್ನೂ ವಿರೋಧಿಸುವುದು ಆಗ ಬಡವರ ದೀನರ ಅನಾಥರ ಸಂಖ್ಯೆ ತಂತಾನೆ ಹೆಚ್ಚುತ್ತದೆ. ಇವರು ಅವರಿಗೆ ಸೇವೆ ಮಾಡುತ್ತಾರೆ! ಸೇವೆಯಿಂದ ಸ್ವರ್ಗ ಸಿಗುತ್ತದೆ! ಬಡವರು ಅನಾಧರು ಸ್ವರ್ಗದ ದಾರಿಗೆ ಮೆಟ್ಟಿಲುಗಳು!

ನಾನು ಬಡತನವನ್ನು ನಾಶ ಮಾಡಲು ಬಯಸುತ್ತೇನೆಯೆ ವಿನಹ ಬಡವರ ಸೇವೆ ಮಾಡಲು ತಯಾರಿಲ್ಲ. ಎಲ್ಲರೂ ಸಾಕಷ್ಟು ಮಾಡಿಯಾಯಿತು. ೧೦೦೦೦ ವರ್ಷದಿಂದ ಬಡವರ ಸೇವೆ ನಡೆಯುತ್ತಲೇ ಇದೆ. ಆದರೆ ಬಡತನ ಇನ್ನೂ ಹೋಗಿಲ್ಲ. ನಮ್ಮಲ್ಲೀಗ ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನದಿಂದ ಬಡತನವನ್ನು ನಾಶ ಮಾಡಲು ಸಾಧ್ಯ.

ಮದರ್ ತೆರೆಸಾ ಒಬ್ಬ ಮೂರ್ಖ ಸಂಪ್ರಯದಾಯವಾದಿಯಲ್ಲದೇ ಮತ್ತೇನು ಅಲ್ಲ. ನಾನಿಷ್ಟು ಹೊತ್ತು ಆಕೆಯನ್ನು ಮದರ್ ಎಂದು ಕರೆದೆ. ಇನ್ನು ಮುಂದೆ ಹಾಗೆ ಕರೆಯುವುದನ್ನು ನಿಲ್ಲಿಸಬೇಕೆಂದಿದ್ದೇನೆ. ಆಕೆ ನನ್ನನ್ನು ಡಿಯರ್ ಮಿಸ್ಟರ್ ರಜನೀಶ್ ಎಂದಿದ್ದಾಳೆ ನಾನು ಆಕೆಯನ್ನು ಗೌರವಯುತವಾಗಿ ಡಿಯರ್ ಮಿಸ್ ತೆರೆಸಾ ಎನ್ನಬೇಕೆಂದಿದ್ದೇನೆ!

ಏನನ್ನೂ ಕೈಬಿಡದೆ ಎಲ್ಲವನ್ನೂ ಪಡೆಯುವುದು ತ್ಯಾಗ ಅನ್ನಿಸಿಕೊಳ್ಳಲಾರದು October 23, 2009

Posted by uniquesupri in ಓಶೋ ಹೇಳಿದ್ದು.
Tags: , , , ,
add a comment

ನಾನೊಂದು ಹಳ್ಳಿಗೆ ಹೋಗಿದ್ದೆ. ಅಲ್ಲಿ ಒಬ್ಬಾತ ಹೇಳುವುದನ್ನು ಕೇಳಿದೆ, “ವೈರಾಗ್ಯವೇ ನಿಜವಾದ ಧರ್ಮ. ತ್ಯಾಗದಿಂದ ವೈರಾಗ್ಯ ಸಾಧ್ಯ. ಕಷ್ಟಕರವಾದ ಸಾಧನೆ ಹಾಗೂ ಶಿಸ್ತಿನಿಂದ ವೈರಾಗ್ಯವನ್ನು ಸಾಧಿಸಬಹುದು.”

ಇದನ್ನು ಕೇಳುತ್ತಿದ್ದ ಹಾಗೆ ನನಗೆ ನನ್ನ ಬಾಲ್ಯದಲ್ಲಿ ನಡೆದ ಘಟನೆಯೊಂದು ನೆನಪಾಯ್ತು. ನದೀ ತೀರಕ್ಕೆ ನಾವು ಪಿಕ್‌ನಿಕ್‌ಗೆಂದು ತೆರಳಿದ್ದೆವು. ನದಿ ಚಿಕ್ಕದಿದ್ದರೂ ಅದರ ಮರಳ ದಂಡೆ ವಿಶಾಲವಾಗಿ ಹರಡಿಕೊಂಡಿತ್ತು. ಆ ದಂಡೆಯ ಮೇಲೆ ಬಣ್ಣ ಬಣ್ಣದ ಹೊಳೆಯುವ ಕಲ್ಲುಗಳ ರಾಶಿಯೇ ಇತ್ತು. ಅದ್ಭುತವಾದ ಸಂಪತ್ತನ್ನು ಎಡವಿ ನಿಂತ ಅನುಭವ ನನಗಾಯ್ತು. ಸಂಜೆಯಾಗುವಷ್ಟರಲ್ಲಿ ನಾನು ಅದೆಷ್ಟು ಕಲ್ಲುಗಳನ್ನು ಒಟ್ಟುಗೂಡಿಸಿದ್ದೆನೆಂದರೆ, ಅವನ್ನು ಹೊತ್ತೊಯ್ಯುವುದೇ ಅಸಾಧ್ಯವಾಗಿತ್ತು. ಅವನ್ನು ಅಲ್ಲಿಯೇ ಬಿಟ್ಟು ಹೊರಡುವಾಗ ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ನನ್ನ ಸಂಗಡಿಗರಿಗೆ ಆ ಕಲ್ಲುಗಳ ಬಗೆಗಿದ್ದ ನಿರಾಸಕ್ತಿಯನ್ನು ಕಂಡು ನನಗೆ ವಿಪರೀತ ಆಶ್ಚರ್ಯವಾಗಿತ್ತು,

ಆ ದಿನ ಅವರು ನನಗೆ ಅತಿ ದೊಡ್ಡ ವಿರಾಗಿಗಳಾಗಿ ಕಂಡಿದ್ದರು. ಇವತ್ತು ನನಗೆ ಅನ್ನಿಸುವುದೆಂದರೆ, ಒಮ್ಮೆ ಕಲ್ಲುಗಳನ್ನು ಅವು ಕಲ್ಲುಗಳು ಎಂದು ತಿಳಿದ ಮೇಲೆ ತ್ಯಾಗದ, ವೈರಾಗ್ಯದ ಪ್ರಶ್ನೆಯೇ ಹುಟ್ಟದು.

ಅಜ್ಞಾನವೇ ಲೋಲುಪತೆ.

ತಿಳುವಳಿಕೆಯೇ ವೈರಾಗ್ಯ.

ವೈರಾಗ್ಯ ಎಂಬುದು ಸಾಧಿಸಬೇಕಾದ ಸಂಗತಿಯಲ್ಲ. ಅದು ನೀವು ಮಾಡಬೇಕಾದ ಕೆಲಸವಲ್ಲ. ಅದು ತಾನಾಗಿ ಸಂಭವಿಸುವಂಥದ್ದು. ತಿಳುವಳಿಕೆಯಿಂದ ಹುಟ್ಟುವ ಸಹಜವಾದ ಮನಸ್ಥಿತಿಯದು. ಲೋಲುಪತೆ ಯಾಂತ್ರಿಕವಾದದ್ದು. ಅದೂ ಸಹ ನೀವು ಮಾಡಿದ ಕೆಲಸವಲ್ಲ. ನಿಮ್ಮ ಅಜ್ಞಾನದಿಂದ ಸಹಜವಾಗಿ ಹುಟ್ಟುವಂಥದ್ದು.

ಹೀಗಾಗಿ ವೈರಾಗ್ಯವೆಂಬುದು ಅತಿ ಪ್ರಯಾಸಕರವಾದ ಕೆಲಸ ಎಂಬ ಕಲ್ಪನೆ ಅರ್ಥಹೀನವಾದದ್ದು. ಮೊದಲಿಗೆ, ಅದು ನೀವು ಮಾಡಬಹುದಾದಂತಹ ಕೆಲಸವಲ್ಲ- ಕೆಲಸಗಳು ಮಾತ್ರ ಪ್ರಯಾಸಕರವಾಗಿರಬಲ್ಲವು- ಅದೊಂದು ಪರಿಣಾಮ. ಎರಡನೆಯದಾಗಿ, ವೈರಾಗ್ಯದಲ್ಲಿ ಬಿಟ್ಟು ಹೋಗುವಂತೆ ಕಾಣುವ ಸಂಗತಿಯು ಕ್ಷುಲ್ಲಕವಾದದ್ದು. ಪಡೆಯುವಂಥದ್ದು ಅಮೂಲ್ಯವಾದದ್ದು.

ನಿಜಕ್ಕೂ, ತ್ಯಾಗವೆಂಬ ಸಂಗತಿ ಇಲ್ಲವೇ ಇಲ್ಲ. ಏಕೆಂದರೆ ನಾವು ಬಿಟ್ಟುದಕ್ಕಿಂತ ಎಷ್ಟೋ ಪಾಲು ಹೆಚ್ಚಿನದನ್ನು ಪಡೆಯುತ್ತೇವೆ. ನಿಜ ಸಂಗತಿಯೆಂದರೆ, ನಾವು ಬಿಡುವುದು ಕೇವಲ ಸಂಕೋಲೆಯನ್ನು, ಗಳಿಸುವುದು ಬಿಡುಗಡೆಯನ್ನು; ನಾವು ಬಿಡುವುದು ಕೇವಲ ಚಿಪ್ಪುಗಳನ್ನು, ಆದರೆ ಪಡೆಯುವುದು ವಜ್ರಗಳನ್ನು; ನಾವು ಕೈ ಬಿಡುವುದು ಕೇವಲ ಸಾವನ್ನು, ಗಳಿಸುವುದು ಚಿರಂಜೀವಿತ್ವವನ್ನು; ನಾವು ಬಿಡುವುದು ಕತ್ತಲೆಯನ್ನು ಪಡೆಯುವುದು ಅನಂತವಾದ, ಶಾಶ್ವತವಾದ ಬೆಳಕನ್ನು.

ಎಲ್ಲಿದೆ ಇದರಲ್ಲಿ ತ್ಯಾಗ? ಏನನ್ನೂ ಕೈಬಿಡದೆ ಎಲ್ಲವನ್ನೂ ಪಡೆಯುವುದು ತ್ಯಾಗ ಅನ್ನಿಸಿಕೊಳ್ಳಲಾರದು.

ಸಂಶಯವಾದಿಯ ನಂಬಿಕೆಗಳು (ಭಾಗ4) January 15, 2009

Posted by uniquesupri in ಓಶೋ ಹೇಳಿದ್ದು.
1 comment so far

(ಭಾಗ )

ಒಮ್ಮೆ ಹೀಗಾಯಿತು… ಒಬ್ಬ ಖ್ಯಾತ ಸೋಫಿಸ್ಟ್ ಗುರುವಿನ ಬಳಿ ಯುವಕನೊಬ್ಬ ಬಂದ. ಯುವಕ ಆಗರ್ಭ ಶ್ರೀಮಂತನಾಗಿದ್ದ. ಗುರುವು ಬಹುದೊಡ್ಡ ಸಂಭಾವನೆಯನ್ನು ಕೇಳಿದ. ಯುವಕ ಹೇಳಿದ, “ಯೋಚಿಸಬೇಡಿ, ನೀವು ಕೇಳಿದಷ್ಟು ಹಣ ಕೊಡುತ್ತೇನೆ, ಆದರೆ ನನ್ನದೊಂದು ನಿಬಂಧನೆಯಿದೆ. ಸಂಭಾವನೆಯ ಅರ್ಧ ಭಾಗದ ಹಣವನ್ನು ನಾನೀಗ ಕೊಡುತ್ತೇನೆ, ಇನ್ನರ್ಧ ಭಾಗವನ್ನು ನಾನು ನನ್ನ ಮೊದಲ ವಾದವನ್ನು ಗೆದ್ದಾಗ ನೀಡುತ್ತೇನೆ. ಅದು ನೀವು ನನಗೆ ನಿಜವಾಗಿಯೂ ವಾದಕಲೆಯನ್ನು ಕಲಿಸಿರುವಿರೋ ಇಲ್ಲವೇ ಸುಮ್ಮನೆ ಮೋಸ ಮಾಡಿರುವಿರೋ ಎಂಬುದಕ್ಕೆ ಪರೀಕ್ಷೆ.”

ಅವನ ಮಾತು ಸಮಂಜಸವಾಗಿತ್ತು, ಗುರುವಿಗೆ ಅದರಲ್ಲಿ ಯಾವ ಹುಳುಕೂ ಕಾಣಲಿಲ್ಲ, “ನೀನು ಯೋಚಿಸಬೇಡ. ನಾನು ಇಡೀ ಗ್ರೀಸಿನಲ್ಲೇ ಶ್ರೇಷ್ಠನಾದ ಗುರು, ನೀನು ವಾದದಲ್ಲಿ ಗೆದ್ದೇ ಗೆಲ್ಲುವೆ.” osho03

ಅರ್ಧ ಮೊತ್ತವನ್ನು ಯುವಕ ತೆತ್ತ. ಎರಡು ವರ್ಷಗಳಲ್ಲಿ ಯುವಕನನ್ನು ವಾದಕಲೆಯಲ್ಲಿ ಪಾರಂಗತನನ್ನಾಗಿಸಲಾಯಿತು, ಯಾರ ಪರವಾಗಿ ವಾದಿಸಿದರೂ ಗೆಲ್ಲಬಲ್ಲನವನಾಗಿದ್ದ. ಆಸ್ತಿಕವಾದದ ಪರವಾಗಿ ವಾದಿಸಿದರೆ ಅದನ್ನು ಗೆಲ್ಲಬಲ್ಲವನಾಗಿದ್ದ, ಹಾಗೆಯೇ ನಾಸ್ತಿಕವಾದದ ಪರ ನಿಂತು ವಾದಿಸಿದರೆ ಅದನ್ನು ಗೆಲ್ಲಬಲ್ಲವನಾಗಿದ್ದ. ಈಗವನಿಗೆ ವಾದವನ್ನು ಹೇಗೆ ಮಂಡಿಸಬೇಕು, ಹೇಗೆ ಮನವೊಲಿಸಬೇಕು ಎಂಬ ಕಲೆ ಕರಗತವಾಗಿತ್ತು.

ಗುರು ಹೇಳಿದ, “ಇಲ್ಲಿಗೆ ನಿನ್ನ ಶಿಕ್ಷಣ ಮುಗಿಯಿತು. ಇನ್ನರ್ಧ ಹಣವನ್ನು ಪಾವತಿ ಮಾಡು.”

ಆತ ಹೇಳಿದ, “ಆದರೆ ನಾನಿನ್ನೂ ವಿಜಯಿಯಾಗಿಲ್ಲ. ನಮ್ಮ ಒಪ್ಪಂದದ ಪ್ರಕಾರ ನೀವು ಕಾಯಬೇಕು.” ಆ ಯುವಕ ಗುರುವಿಗಿಂತ ಹೆಚ್ಚು ಚಾಣಾಕ್ಷ. ಆತ ಯಾರೊಂದಿಗೂ ವಾದವನ್ನೇ ಮಾಡಲಿಲ್ಲ. ನೀವೇನೇ ಹೆಳಿದರು ಆತ ಹೌದು ಎನ್ನುತ್ತಿದ್ದ. ಯಾವ ವಾದಕ್ಕೂ ಆತ ಇಳಿಯುತ್ತಿರಲಿಲ್ಲವಾದ್ದರಿಂದ ಗೆಲ್ಲುವ ಪ್ರಶ್ನೆಯೇ ಇರಲಿಲ್ಲ. ಹೀಗೆ ಒಂದು ವರ್ಷ ಕಳೆಯಿತು. ಆದರೆ ವೃದ್ಧ ಗುರುವನ್ನು ಹೀಗೆ ಮೋಸ ಮಾಡಲಾಗದು, ಈ ಯುವಕನಸ್ಸು ಅತಿಯಾಯಿತು.

ವೃದ್ಧ ನ್ಯಾಯಾಲಯದಲ್ಲಿ ಯುವಕನ ಮೇಲೆ ಮೊಕದ್ದಮೆ ಹೂಡಿದ. ತನ್ನ ಶಿಕ್ಷಣ ಮುಗಿದ ಮೇಲೆ ಕೊಡುತ್ತೇನೆ ಎಂದಿದ್ದ ಅರ್ಧ ಮೊತ್ತವನ್ನು ಆತ ಪಾವತಿಸಿಲ್ಲ ಎಂದು ಆರೋಪಿಸಿದ. ಗುರುವಿನ ಉಪಾಯ ನಾಜೂಕಿನದಾಗಿತ್ತು. “ಒಂದು ವೇಳೆ ಕೋರ್ಟು ‘ನಿನ್ನ ಹಣವನ್ನು ನೀನು ಪಡೆಯಬೇಕು ಎಂದರೆ ಈ ಯುವಕ ವಾದವನ್ನು ಗೆಲ್ಲಬೇಕು’ ಎಂದರೆ ನಾನು ಸೋತಂತೆ. ಅಂದರೆ ಯುವಕ ವಾದದಲ್ಲಿ ಗೆದ್ದಂತಾಗುತ್ತದೆ. ಆತ ನನ್ನ ಹಣವನ್ನು ಕೊಡಬೇಕಾಗುತ್ತದೆ.” ಹೀಗೆ ಆಲೋಚಿಸಿದ ಆತ ಕೋರ್ಟಿನ ಹೊರಗೆ ಯುವಕನಿಗೆ, “ಈಗ ನೀನು ನಿನ್ನ ಮೊದಲ ಕೇಸು ಗೆದ್ದಿರುವೆ. ನನ್ನ ಹಣವನ್ನು ಕೊಡು” ಎಂದು ಕೇಳಿ ಹಣವನ್ನು ಪಡೆಯಬಹುದು ಎಂದುಕೊಂಡ.

ಆತ ಇನ್ನೊಂದು ಸಾಧ್ಯತೆಯ ಬಗೆಗೂ ಆಲೋಚಿಸಿದ: ತಾನೇನಾದರೂ ಮೊಕದ್ದಮೆ ಗೆದ್ದರೆ – ಅದು ಸಾಧ್ಯವಾಗದು, ಆದರೂ ಆತ ಬಹು ಶ್ರೇಷ್ಠ ವಾದಿಯಾಗಿದ್ದ – ಆಗಲೂ ಸಹ ತಾನು ಯುವಕನಿಗೆ, “ನೀನು ನ್ಯಾಯಾಲಯದ ಅಪ್ಪಣೆಯಂತೆ ನಡೆಯಬೇಕು, ನನಗೆ ಹಣವನ್ನು ಕೊಡಬೇಕು.” ಎನ್ನಬಹುದು. ಆದರೆ ಯುವಕ ತನ್ನ ಶಿಷ್ಯ, ಆತ ತನ್ನೆಲ್ಲಾ ಪಟ್ಟುಗಳನ್ನು ಅರಿತವನಾಗಿದ್ದ ಎಂಬುದು ಗುರುವಿಗೆ ತಿಳಿದಿರಲಿಲ್ಲ.

ಯುವಕ ನ್ಯಾಯಾಲಯದಲ್ಲಿ ತರ್ಕಬದ್ಧವಾಗಿ ವಾದಿಸಿದ. ಅಸಲಿಗೆ ಮೊಕದ್ದಮೆ ಆತನ ಪರವಾಗಿಯೇ ಇತ್ತು. “ನಾನು ನನ್ನ ಮೊದಲ ವಾದವನ್ನು ಗೆಲ್ಲುವವರೆಗೆ ಇನ್ನರ್ಧ ಹಣವನ್ನು ಕೊಡುವುದಿಲ್ಲ.” ಗುರುವಿಗೆ ವಾದದಲ್ಲಿ ಗೆಲ್ಲುವ ಆಸಕ್ರಿಯಿರಲಿಲ್ಲ. ಆತ ಹೇಳಿದ, “ಹೌದು, ಈ ಒಪ್ಪಂದವನ್ನು ನಾವು ಮಾಡಿಕೊಂಡದ್ದು ನಿಜ.” ಕೋರ್ಟಿನಲ್ಲಿ ಆತ ತನ್ನ ಸೋಲು ಒಪ್ಪಿಕೊಂಡ, ಹೊರಗೆ ಯುವಕನನ್ನು “ಈಗ…?” ಎಂದು ಕೇಳಬಹುದು ಎಂದು ಭಾವಿಸುತ್ತಾ.

ಗುರು ಮೊಕದ್ದಮೆ ಸೋತ. ಕೋರ್ಟಿನ ಹೊರಗೆ ಮೆಟ್ಟಿಲುಗಳನ್ನು ಇಳಿಯುವಾಗ ಯುವಕನನ್ನು ಹಿಡಿದು ಪಕ್ಕಕ್ಕೆ ಕರೆದು, “ಹುಡುಗಾ, ಈಗ ನೀನು ನಿನ್ನ ಮೊದಲ ವಾದವನ್ನು ಗೆದ್ದಿರುವೆ. ನನ್ನ ಹಣವನ್ನು ಕೊಟ್ಟು ಬಿಡು.” ಎಂದ.

ಯುವಕ ಹೇಳಿದ, “ನಾನು ನಿಮ್ಮ ಶಿಷ್ಯ, ನನ್ನ ನೀವು ಮೋಸ ಮಾಡಲು ಆಗುವುದಿಲ್ಲ. ನಾನು ನ್ಯಾಯಾಲಯದ ಅಪ್ಪಣೆಯ ವಿರುದ್ಧ ವರ್ತಿಸಲಾರೆ. ಅದು ನ್ಯಾಯಾಲಯದ ನಿಂದನೆಯಾಗುತ್ತದೆ. ಅಷ್ಟಕ್ಕೂ ನೀವು ಒತ್ತಾಯ ಮಾಡುವುದಿದ್ದರೆ, ನ್ಯಾಯಾಲಯದೊಳಕ್ಕೆ ಬಂದು ಮ್ಯಾಜಿಸ್ಟ್ರೇಟ್ ಎದುರು ಕೇಳಿ.”

ಈ ಸೊಫಿಸ್ಟ್ ಪದ್ಧತಿ ಕಾಲಾಂತರಗಳಿಂದ ನಾನಾ ಹೆಸರುಗಳನ್ನು ಪಡೆದುಕೊಂಡು ಮುಂದುವರಿದುಕೊಂಡು ಬಂದಿದೆ- ಈಗ ಇದನ್ನು ಸಂಶಯವಾದ ಎನ್ನುತ್ತಾರೆ. ಸಂಶಯವಾದಿಗೆ ಯಾವ ಸಿದ್ಧಾಂತವೂ ಇರುವುದಿಲ್ಲ, ಹಾಗಾಗಿ ಆತನನ್ನು ನೀವು ಸೋಲಿಸಲು ಸಾಧ್ಯವಾಗುವುದಿಲ್ಲ. ಆತ ಏನನ್ನೂ ಪ್ರತಿಪಾದಿಸುವುದಿಲ್ಲ. ಆತ ಏನನ್ನೂ ಪ್ರತಿಪಾದಿಸದಿದ್ದರೆ ನೀವು ಆತನನ್ನು ಸೋಲಿಸು ಹೇಗೆ ಸಾಧ್ಯ? ಆತನಿಗೆ ಯಾವುದರಲ್ಲೂ ಶ್ರದ್ಧೆ ಇಲ್ಲ. ಹೀಗಾಗಿ ಆತ ಹೆಚ್ಚು ಬಲಿಷ್ಠನಾಗಿರುತ್ತಾನೆ. ನಿಮಗೆ ಶ್ರದ್ಧೆಯಿದೆ, ನಿಮ್ಮ ಶ್ರದ್ಧೆಯಲ್ಲಿ ಆತ ಹುಳುಕುಗಳನ್ನು ಪತ್ತೆ ಹಚ್ಚಬಲ್ಲ, ನಿಮ್ಮನ್ನು ಸೋಲಿಸಬಲ್ಲ.

ಸಂಶಯವಾದಿ ನಂಬಿಕೆಗಳು, ಶ್ರದ್ಧೆಗಳು ಇರುವ ಯಾರ ವಿರುದ್ಧವಾದರೂ ಗೆಲ್ಲಬಲ್ಲ. ಹುರುಳಿಲ್ಲದ ವಾದ ಹಾಗೂ ವಿಜಯಗಳಲ್ಲದೆ ಸಂಶಯವಾಗಿ ಏನನ್ನೂ ಪಡೆದುಕೊಳ್ಳುವುದಿಲ್ಲ. ಮತ್ತು ಆತ ತನ್ನ ವಾದದಲ್ಲಿ ಹೆಚ್ಚು ನಿಷ್ಣಾತನಾಗುತ್ತ ಹೋದಷ್ಟೂ, ಜೀವನ ಇರುವುದು ವಾದಕ್ಕಲ್ಲ, ಜೀವನ ಎಂದರೆ ‘ಇಲ್ಲ’ ಎನ್ನುವುದಲ್ಲ, ‘ಇಲ್ಲ’ ಎನ್ನುವುದು ಸಾವು ಎಂಬುದನ್ನು ಮರೆಯುತ್ತಾ ಹೋಗುತ್ತಾನೆ. ಇಡೀ ಜೀವನ ಇತರರ ವಾದವನ್ನು ಸೋಲಿಸುತ್ತಾ ಹೋಗುವುದರಿಂದ ನಿಮಗೇನು ಸಿಕ್ಕುತ್ತದೆ, ನಿಮ್ಮ ಜೀವನವನ್ನು ನೀವು ಹಾಳು ಮಾಡಿಕೊಳ್ಳುವಿರಿ  ಅಷ್ಟೇ.

ನಾನು ನಿಮಗೆ ಸಂಶಯವಾದವನ್ನು ಕಲಿಸುತ್ತಿಲ್ಲ, ನಾನು ನಿಮಗೆ ಪ್ರಶ್ನಿಸುವ ಕಲೆಯನ್ನು ಕಲಿಸುತ್ತಿರುವೆ. ಪ್ರಶ್ನೆ ನಿಮಗೆ ಇದು ತಪ್ಪು, ಇದು ಇಲ್ಲ ಎಂದು ಹೇಳುವುದಿಲ್ಲ. ಅದು ಹೆಳುವುದಿಷ್ಟೇ, “ನನಗೆ ತಿಳಿದಿಲ್ಲ. ನಾನಿನ್ನೂ ಅದನ್ನು ಅನುಭವಿಸಿಲ್ಲ; ಹೀಗಾಗಿ, ನಾನು ಸತ್ಯವನ್ನು, ನೈಜವಾದದ್ದನ್ನು ಪಡೆಯುವವರೆಗೆ ಪ್ರಶ್ನಿಸುವುದನ್ನು ಬಿಡುವುದಿಲ್ಲ. ಅನಂತರ ನಾನು ಬರೀ ‘ಹೌದು’ ಆಗಿರುತ್ತೇನೆ- ಆದರೆ ಅದಕ್ಕೆ ಮುನ್ನ ಅಲ್ಲ.”

ಪ್ರಶ್ನೆಗಳಿರುವ ಮನುಷ್ಯ, ಹೌದು ಪ್ರಶ್ನೆಗಳಿರುವ ಮನುಷ್ಯ ಮಾತ್ರ ಒಂದು ದಿನ ಸತ್ಯ ಕಂಡುಕೊಳ್ಳುವ ಮನುಷ್ಯನಾಗುತ್ತಾನೆ.

(ಮುಗಿಯಿತು)

ಸಂಶಯವಾದಿಯ ನಂಬಿಕೆಗಳು (ಭಾಗ 3) January 14, 2009

Posted by uniquesupri in ಓಶೋ ಹೇಳಿದ್ದು.
add a comment

(ಮೊದಲ ಭಾಗ)  (ಎರಡನೆಯ ಭಾಗ)

ಸಾಕ್ರೆಟಿಸನಿಗೂ ಮುನ್ನ ಇದ್ದ ಈ ಸಂಶಯವಾದಿಗಳ ಶಾಲೆಯನ್ನು ಸೊಫಿಸಂ ಎನ್ನಲಾಗುತ್ತಿತ್ತು. ಅವರು ಸಂಚರಿಸುತ್ತಾ ಬೋಧನೆ ನಡೆಸುತ್ತಿದ್ದ ಶಿಕ್ಷಕರು. ನಿಮ್ಮನ್ನು ಸೊಫಿಸ್ಟ್ ಆಗಿಸಲು ಅವರು ಬಹುದೊಡ್ಡ ಪ್ರಮಾಣದ ಫೀ ಅಪೇಕ್ಷಿಸುತ್ತಿದ್ದರು. ಸೋಫಿಸ್ಟ್ ವಾದದಲ್ಲಿ ಯಾರ ಪರವಾದರೂ ಇಲ್ಲಬಲ್ಲವನಾಗಿರುತ್ತಿದ್ದ ಆತನಿಗೆ ಸತ್ಯದ ಬಗ್ಗೆ ಕಾಳಜಿಯಿರುತ್ತಿರಲಿಲ್ಲ. ನೀವು ಹೆಚ್ಚು ಹಣ ಕೊಟ್ಟರೆ ಆತ ನಿಮ್ಮ ಪರವಾಗಿ ವಾದ ಮಾಡುವನು. ಒಂದು ವೇಳೆ ನಿಮ್ಮ ವಿರೋಧಿ ಪಕ್ಷದವರು ಹೆಚ್ಚು ಹಣ ಕೊಟ್ಟರೆ ಆತ ಅವರ ಪರವಾಗಿ ವಾದ ಮಾಡುವನು. ಆತನಿಗೆ ಸ್ವತಃ osho ಏನೊಂದೂ ತಿಳಿದಿರುವುದಿಲ್ಲ, ಆದರೆ ಆತನಿಗೆ ವಾದದ, ತರ್ಕದ ಕಲೆ ತಿಳಿದಿರುತ್ತದೆ.

ಒಂದು ಕಥೆಯಿದೆ… ಸಣ್ಣ ಊರೊಂದರಲ್ಲಿ ಪುಟ್ಟದೊಂದು ಚರ್ಚ್ ಇತ್ತು. ಅಲ್ಲಿನ ಪಾದ್ರಿಗೆ ಒಬ್ಬ ಮುದುಕನಿಂದ ಬಹಳವೇ ಕಿರಿಕಿರಿ ಅನುಭವಿಸುತ್ತಿದ್ದ. ಆದರೆ ಚರ್ಚಿನ ಸಮೂಹದಲ್ಲೇ ಆತ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ. ಆತ ಚರ್ಚಿಗೆ ಅತಿ ಹೆಚ್ಚಿನ ದೇಣಿಗೆಯನ್ನು ನೀಡಿದ- ಹಾಗೆ ನೋಡಿದರೆ ಆ ಚರ್ಚನ್ನು ಕಟ್ಟಿಸಿದ್ದೇ ಆತ. ಪಾದ್ರಿಗೂ ಸಂಬಳವನ್ನು ನೀಡುತ್ತಿದ್ದವನು ಆತನೇ. ಪ್ರತಿ ಪ್ರವಚನದಲ್ಲೂ ಆತ ಚರ್ಚಿನ ಮೊದಲ ಸಾಲಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ, ಮುದುಕ ಪ್ರವಚನದ ಮಧ್ಯದಲ್ಲೇ ನಿದ್ದೆಗೆ ಜಾರಿ ಬಿಡುತ್ತಿದ್ದ. ಆತನ ನಿದ್ರೆಯಿಂದ ಪಾದ್ರಿಗೆ ಕಿರಿಕಿರಿಯಾಗುತ್ತಿರಲಿಲ್ಲ – ಆತ ನಿಜಕ್ಕೂ ಗಟ್ಟಿಯಾಗಿ ಗೊರಕೆ ಹೊಡೆಯುತ್ತಿದ್ದ. ಇದರಿಂದ ಪಾದ್ರಿಗಷ್ಟೇ ಅಲ್ಲ, ಚರ್ಚಿನಲ್ಲಿದ್ದ ಇತರರಿಗೂ ಕಿರಿಕಿರಿ ಉಂಟು ಮಾಡುತ್ತಿತ್ತು. ಆತನ ಗೊರಕೆಯಿಂದ ಚರ್ಚಿನ ಇತರರ ನಿದ್ರೆಗೆ ಭಂಗವಾಗುತ್ತಿತ್ತು!

ಕಡೆಗೆ ಚರ್ಚಿನ ಇತರೆ ಭಕ್ತರು ಪಾದ್ರಿಗೆ ಹೇಳಿದರು, “ಈಗ ಏನಾದರೂ ಮಾಡಲೇಬೇಕು. ಈ ಮುದುಕ ಮೊದಲ ಸಾಲಲ್ಲೇ ಕುಳಿತು ಗೊರಕೆ ಹೊಡೆಯುತ್ತಾನೆ ಇದರಿಂದ ನಿಮಗೂ ತೊಂದರೆ, ನಮ್ಮೆಲ್ಲರ ನಿದ್ರೆಗೂ ತೊಂದರೆ.”

ಕ್ರೈಸ್ತ ದೇಶಗಳಲ್ಲಿನ ಜನರು ಶನಿವಾರ ತಡ ರಾತ್ರಿಯವರೆಗೂ ಎಚ್ಚರವಾಗಿರುತ್ತಾರೆ. ಏಕೆಂದರೆ ನಾಳೆ ಭಾನುವಾರ, ಅವರು ವಿಶ್ರಮಿಸಿಕೊಳ್ಳಬಹುದು. ಮುಂಜಾನೆಯೇ ಚರ್ಚಿಗೆ ಹೋಗಬೇಕು. ಬಹುಶಃ ಅವರು ಹಿಂದಿನ ರಾತ್ರಿಯಿಡೀ ನಿದ್ರೆಯನ್ನೇ ಮಾಡಿರುವುದಿಲ್ಲ– ಹಾಗೂ ಚರ್ಚು ನಿದ್ರೆಗೆ ಅತ್ಯಂತ ಪ್ರಸಕ್ರವಾದ ಜಾಗ.

ಹಾಗಾಗಿ ಅವರು ಹೇಳಿದರು, “ನಾವು ಇಷ್ಟು ಮುಂಚಿತವಾಗಿ ಮುಂಜಾನೆಯಲ್ಲಿಯೇ ಚರ್ಚಿಗೆ ಬರುವುದು ತಣ್ಣಗೆ ಒಂದು ಸಣ್ಣ ನಿದ್ದೆ ತೆಗೆಯಲು. ಆದರೆ ಈ ಮೂರ್ಖ ಎಲ್ಲರನ್ನೂ ಎಬ್ಬಿಸಿಬಿಡುತ್ತಾನೆ. ನಿಮ್ಮ ಪ್ರವಚನವನ್ನು ಕೇಳುವುದಕ್ಕೆ ಬದಲಾಗಿ ನಾವು ಆತನ ಗೊರಕೆಯನ್ನು ಕೇಳಬೇಕು. ದಯವಿಟ್ಟು ಇದರ ಬಗ್ಗೆ ಏನಾದರೂ ಮಾಡಿ.”

ಪಾದ್ರಿ ಆಲೋಚಿಸಿದ. ಮುದುಕ ಪ್ರತಿ ಸಲ ಚರ್ಚಿಗೆ ಬರುವಾಗ ತನ್ನ ಮೊಮ್ಮಗನನ್ನು ಕರೆದುಕೊಂಡು ಬರುತ್ತಿದ್ದ, ಆ ಹುಡುಗ ಸಾಮಾನ್ಯವಾಗಿ ಮುದುಕನ ಪಕ್ಕದಲ್ಲೇ ಇರುತ್ತಿದ್ದ, ಪಾದ್ರಿ ಅಂದುಕೊಂಡ, “ಬಹುಶಃ ಆ ಹುಡುಗನಿಗೆ ಆಮಿಷ ಒಡ್ಡಬಹುದು.”

ಆ ಹುಡುಗನನ್ನು ಕರೆದು ಪಾದ್ರಿ ಹೇಳಿದ, “ನೀನು ನಿನ್ನ ತಾತನನ್ನು ನಿದ್ದೆ ಮಾಡುವಾಗಲೆಲ್ಲಾ ಎಬ್ಬಿಸಿದರೆ ನಿನಗೆ ಪ್ರತಿ ಭಾನುವಾರ ಒಂದು ಡಾಲರ್ ಕೊಡುವೆ. ನೀನು ಮಾಡಬೇಕಾದ್ದು ಇಷ್ಟೇ, ಆತ ಗೊರಕೆ ಹೊಡೆಯಲು ಶುರುಮಾಡಿದಾಗಲೆಲ್ಲಾ ನೀನು ಆತನಿಗೆ ಹೊಡೆದು ಎಚ್ಚರಿಸುತ್ತಿರಬೇಕು.”

ಹುಡುಗ ಹೇಳಿದ, “ಒಳ್ಳೆಯದು. ಅವನಿಗೆ ನಾನು ಮಲಗುವುದಕ್ಕೆ ಬಿಡುವುದಿಲ್ಲ.”.

ಮುಂದಿನ ಭಾನುವಾರ ಆಹ್ಲಾದಕರವಾಗಿತ್ತು. ಎಲ್ಲರೂ ಹಾಯಾಗಿ ಮಲಗಿದರು. ಪಾದ್ರಿ ಪ್ರತಿ ಬಾರಿ ಹೇಳುತ್ತಿದ್ದ ಪ್ರವಚನವನ್ನೇ ಪುನರುಚ್ಚರಿಸಿದ… ಆತನ ಬಳಿ ಮೂರ್ನಾಲ್ಕು ಪ್ರವಚನಗಳು ಸಿದ್ಧವಾಗಿರುತ್ತಿದ್ದವು. ಹುಡುಗ ಮುದಕನಿಗೆ ಬಡಿದು ಬಡಿದು ಎಚ್ಚರವಾಗಿಸುತ್ತಿದ್ದ.

ಮುದುಕ ಕೇಳಿದ, “ಏನಿದು ತಲೆ ಹರಟೆ, ಪದೇ ಪದೇ ಏನು ಮಾಡುತ್ತಿದ್ದೀಯ?”

ಹುಡುಗ ನಕ್ಕ, ಆದರೆ ಮುದುಕನಿಗೆ ಗೊರಕೆ ಹೊಡೆಯಲು ಬಿಡಲಿಲ್ಲ.

ಪ್ರವಚನ ಮುಗಿದ ನಂತರ ಮುದುಕ ತನ್ನ ಮೊಮ್ಮಗನಿಗೆ ಕೇಳಿದ, “ಏನು ವಿಷಯ? ನನ್ನ ಬೆಳಗನ್ನೆಲ್ಲಾ ಹಾಳು ಮಾಡಿದೆಯಲ್ಲ? ಯಾಕೆ ಹೇಳು..”

ಹುಡುಗ ಹೇಳಿದ, “ಇದು ವ್ಯಾಪಾರದ ವಿಷಯ. ನಿನ್ನನ್ನು ಗೊರಕೆ ಹೊಡೆಯದಂತೆ ತಡೆದರೆ ಆತ ನನಗೆ ಒಂದು ಡಾಲರ್ ಕೊಡುತ್ತಾನೆ.”

ಮುದುಕ ಹೇಳಿದ, “ಯೋಚನೆ ಮಾಡಬೇಡ, ಇದು ವ್ಯಾಪಾರ ಅನ್ನುವುದಾದರೆ ನಾನು ನಿನಗೆ ಪ್ರತಿವಾರ ಎರಡು ಡಾಲರ್ ಕೊಡುತ್ತೇನೆ. ಮುಂದಿನ ವಾರದಿಂದ ನನ್ನ ನಿದ್ದೆ ಹಾಳು ಮಾಡಬೇಡ.”

ಮುಂದಿನ ಭಾನುವಾರ ಬಂದಿತು. ಪಾದ್ರಿಗೆ ಆಶ್ಚರ್ಯವಾಯಿತು. ಮುದುಕ ಗೊರಕೆ ಹೊಡೆಯುತ್ತಿರುವುದನ್ನು ಕಂಡು ಪಾದ್ರಿ ಹುಡುಗನತ್ತ ತಿರುಗಿ ಕಣ್ಣು ಮಿಟುಕಿಸಿ ಮುದಕನನ್ನು ಎಚ್ಚರವಾಗಿಸುವಂತೆ ಸೂಚಿಸುತ್ತಾನೆ. ಆದರೆ ಹುಡುಗ ಸುಮ್ಮನೆ ನಗುತ್ತಾ ಕುಳಿತಿದ್ದ. ಮುದುಕ ನಿರಾಯಾಸವಾಗಿ ಗೊರಕೆ ಹೊಡೆಯುತ್ತಿದ್ದ. ಉಳಿದ ಯಾರಿಗೂ ನಿದ್ದೆ ಬರಲಿಲ್ಲ. ಪ್ರವಚನ ಮುಗಿಸಿದ ನಂತರ ಪಾದ್ರಿ ಹುಡುಗನನ್ನು ಪಕ್ಕಕ್ಕೆ ಕರೆದು ಕೇಳಿದ, “ಏನಾಯ್ತು, ನಿನಗೆ ಡಾಲರ್ ಬೇಡವೇ?”

ಆತ ಹೇಳಿದ, “ನಾನೇನ್ ಮಾಡ್ಲಿ? ಇದು ವ್ಯಾಪಾರದ ವಿಷಯ.”

ಪಾದ್ರಿ ಕೇಳಿದ, “ಏನು ವ್ಯಾಪಾರ?”

ಆತ ಹೇಳಿದ, “ತಾತ ನನಗೆ ಎರಡು ಡಾಲರ್ ಕೊಡುತ್ತೀನಿ ಅಂದಿದ್ದಾನೆ. ಈಗ ಏನು ಮಾಡ್ತೀರಿ ನೋಡಿ.”

ಪಾಪದ ಪಾದ್ರಿಗೆ ತಾನು ಮುದುಕನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ತಿಳಿಯಿತು. ಈತ ಮೂರು ಡಾಲರ್ ಕೊಟ್ಟರೆ – ಇದು ಬಡವ ಪಾದ್ರಿಗೆ ದೊಡ್ಡ ಮೊತ್ತವಾಗುತ್ತದೆ – ಮುದುಕ ನಾಲ್ಕು ಡಾಲರ್ ಕೊಡುತ್ತಾನೆ. ಈ ತಂತ್ರ ಉಪಯೋಗಿಸಿದರೆ ತಾನು ಸಂಪೂರ್ಣವಾಗಿ ಸೋಲಪ್ಪಬೇಕಾಗುತ್ತದೆ ಎಂಬುದು ಅರಿವಾಗುತ್ತದೆ. ಹುಡುಗನಿಗೆ ಪಾದ್ರಿಯ ಪ್ರವಚನದಲ್ಲೂ ಆಸಕ್ತಿಯಿಲ್ಲ, ಚರ್ಚಿನ ಕಲಾಪದಲ್ಲೂ ಆಸಕ್ತಿಯಿಲ್ಲ, ಮುದುಕನ ಬಗ್ಗೆಯೂ ಆಸಕ್ತಿಯಿಲ್ಲ. ಇದು ಆತನಿಗೆ ಕೇವಲ ವ್ಯಾಪಾರದ ಪ್ರಶ್ನೆಯಷ್ಟೇ.

ಇದು ಸೊಫಿಸ್ಟರ ಧೋರಣೆಯಾಗಿತ್ತು. ದೊಡ್ಡ ರಾಜರು ತಮ್ಮ ಮಕ್ಕಳನ್ನು ಸೋಫಿಸ್ಟ್‌ಗಳ ಬಳಿ ಶಿಕ್ಷಣಕ್ಕೆ ಕಳುಹಿಸುತ್ತಿದ್ದರು. ಮುಂದೆ ಅವರು ರಾಜರಾದಾಗ ಯಾವ ವಾದವನ್ನಾದರೂ ಗೆಲ್ಲಬೇಕು ಎಂಬುದು ಆ ಶಿಕ್ಷಣದ ಉದ್ದೇಶವಾಗಿತ್ತು. ಸೋಫಿಸ್ಟನಿಗೆ ಸರಿ ತಪ್ಪು ಎಂಬುದರ ಪ್ರಶ್ನೆಯೇ ಏಳುವುದಿಲ್ಲ, ಆತನಿಗೆ ಯಾರ ವಾದ ಬಲವಾದದ್ದು ಎಂಬುದಷ್ಟೇ ಪ್ರಶ್ನೆ.

(ಮುಂದುವರೆಯುವುದು…)

ಸಂಶಯವಾದಿಯ ನಂಬಿಕೆಗಳು (ಭಾಗ 2) January 13, 2009

Posted by uniquesupri in Uncategorized.
add a comment

ಮೊದಲ ಭಾಗ

ಅನ್ವೇಷಕನಿಗೆ ಪ್ರಶ್ನೆ ಎನ್ನುವುದು ಒಂದು ಸಾಧನವಷ್ಟೇ. ಪ್ರಶ್ನೆ ನಿಮ್ಮ ಬುದ್ಧಿವಂತಿಕೆಯನ್ನು ಚುರುಕುಗೊಳಿಸುತ್ತದೆ. ಅದೊಂದು ಸವಾಲು. ನೀವು ಹೌದು ಎಂದೂ ಹೇಳುತ್ತಿಲ್ಲ, ಇಲ್ಲ ಎಂದೂ ಹೇಳುತ್ತಿಲ್ಲ. ನೀವು ಹೇಳುವುದಿಷ್ಟೇ, “ ನಾನು  ತಿಳಿದಿಲ್ಲ. ಸ್ವತಃ ಅನುಭವಿಸುವವರೆಗೆ ನಾನು ಯಾವುದನ್ನೂ ನಂಬುವುದಿಲ್ಲ. ಒಂದು ಸಲಕ್ಕೆ ನಾನು  ನಿಸ್ಸಂದೇಹವಾದಂಥ ಉತ್ತರ ಕಂಡುಕೊಂಡ ಮೇಲೆ ಎಷ್ಟೇ ಪ್ರಯತ್ನ ಪಟ್ಟರೂ ನನ್ನ ಪ್ರಶ್ನೆ ನಿಲ್ಲುವುದಿಲ್ಲ, ಅದು ತಾನಾಗಿ ಬಿದ್ದು ಹೋಗುತ್ತದೆ.”

ಸತ್ಯ ಎನ್ನುವುದು ಅದೆಷ್ಟು ವಿಸ್ತಾರವಾದದ್ದು, ವಾಸ್ತವವಾದದ್ದು, ಸ್ಪಷ್ಟವಾದದ್ದು, ಮೂಕವಿಸ್ಮಿತಗೊಳಿಸುವಂಥದ್ದು ಎಂದರೆ ಅದರೆದುರು ನಮ್ಮ ನಿಜ ಪ್ರಪಂಚವೇ ಕನಸಾಗಿ ಕಾಣುವುದು.

ಪ್ರಶ್ನೆ ಎನ್ನುವುದು ಅತ್ಯಂತ ಮಹತ್ವವಾದ ಸಂಗತಿ. ಕಟ್ಟ ಕಡೆಯವರೆಗೆ ಪ್ರಶ್ನಿಸಿತ್ತಾ ಹೋದವರಿಗೆ ಮಾತ್ರ ಸತ್ಯವೇನೆಂದು ಕಂಡಿತು, ಪ್ರೀತಿ ಎಂದರೇನು, ಮೌನ ಎಂದರೇನು, ಸೌಂದರ್ಯ ಎಂದರೇನು ಎಂಬುದು ಅರಿವಾಯಿತು. ಸಂಶಯವಾದಿಗೆ ಏನೂ ಕಾಣುವುದಿಲ್ಲ. ಆತ ಸಂಪೂರ್ಣ ಖಾಲಿಯಾಗಿರುತ್ತಾನೆ, ಆದರೆ ಹೆಚ್ಚು ಸದ್ದು ಮಾಡುತ್ತಾನೆ. ಖಾಲಿ ಪಾತ್ರೆಗಳು ಹೆಚ್ಚು ಸದ್ದು ಮಾಡುವಂತೆ. ನೀವು ಸಂಶಯವಾದಿಯೊಂದಿಗೆ ವಾದಕ್ಕೆ ನಿಲ್ಲಲಾಗದು, ಆತ ನೀವು ಹೇಳಿದಕ್ಕೆಲ್ಲಾ ಇಲ್ಲ ಎಂದು ಹೇಳುತ್ತಾನೆ, ಅವನೆದುರು ವಸ್ತುವಿನಂತೆ ತಂದಿಡಲಾಗದ ಮೌಲ್ಯಗಳನ್ನೆಲ್ಲಾ ಆತ ಇಲ್ಲ ಎಂದು ವಾದಿಸುತ್ತಾನೆ. osho5155

ಆದರೆ ಪ್ರಶ್ನೆಯ ಹಾದಿ ತುಂಬಾ ದೀರ್ಘವಾದದ್ದು ಹಾಗೂ ಕಠಿಣವಾದದ್ದು. ಅದು ಸತ್ಯವಲ್ಲದ್ದನ್ನೆಲ್ಲಾ ಅಳಿಸಿಹಾಕುತ್ತಾ ಹೋಗುತ್ತದೆ, ಕಡೆಗೆ ಸತ್ಯವಾದದ್ದು ಮಾತ್ರ ಉಳಿಯುತ್ತದೆ. ಒಮ್ಮೆ ಸತ್ಯ ಎದುರು ಮುಖಾ ಮುಖಿಯಾಗಿ ನಿಂತ ಮೇಲೆ, ಅದನ್ನು ಅನುಭವಿಸಿದ ಮೇಲೆ ಯಾರೂ ಸಹ ಅದನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಅನುಭವದ ಮುಖಾಂತರ ‘ಹೌದು’ ಹುಟ್ಟುತ್ತದೆ: “ಹೌದು, ಭಗವಾನ್, ಹೌದು”.

ಇದು ನಂಬಿಕೆಯಲ್ಲ. ಇದನ್ನು ನೀವು ಆತಂಕವನ್ನು, ಯಾತನೆಯನ್ನು, ದುಗುಡವನ್ನು ಅನುಭವಿಸಿ ಅನ್ವೇಷಿಸಿದ್ದೀರಿ. ಹಲವು ಸಂದರ್ಭಗಳಲ್ಲಿ ನಿಮಗೆ ಪಯಣ ಅಂತ್ಯವಿಲ್ಲದ್ದು, ನಿರರ್ಥಕವಾದದ್ದು ಎನ್ನಿಸಿ ನಿಂತು ಬಿಡಬೇಕು ಅನ್ನಿಸಿದ್ದಿದೆ.  ಅದು ಹಾಗಿಲ್ಲ. ಅಂತ್ಯವೆಂಬುದೊಂದಿದೆ, ನೀವು ನಡೆಯುತ್ತಿರಬೇಕಷ್ಟೇ.

ಪ್ರಶ್ನೆ ಶಸ್ತ್ರಚಿಕಿತ್ಸೆಯಂಥದ್ದು – ಅದು ಅಸಂಗತವಾದದ್ದನ್ನೆಲ್ಲಾ ಕತ್ತರಿಸುತ್ತಾ ಹೋಗುತ್ತದೆ. ಕಡೆಗೆ ಸಂಗತವಾದದ್ದು, ಸತ್ಯವಾದದ್ದು ಮಾತ್ರ ಉಳಿಯುತ್ತದೆ. ಪ್ರಶ್ನೆ ಮೋಡಗಳನ್ನು ತೆಗೆಯುತ್ತದೆ.

ಸಂಶಯವಾದಿ ಮೋಡ ಕವಿದ ಆಗಸವನ್ನು ನೋಡಿ ಸೂರ್ಯನೇ ಇಲ್ಲ ಅನ್ನುತ್ತಾನೆ, ಆತನಿಗೆ ಸೂರ್ಯ ಕಾಣುತ್ತಿರುವುದಿಲ್ಲ. ಆತ ಸೂರ್ಯ ಇಲ್ಲವೇ ಇಲ್ಲ, ಬೆಳಕೇ ಇಲ್ಲ ಎಂಬ ತೀರ್ಮಾನಕ್ಕೆ ಬಂದು ನಿಲ್ಲುತ್ತಾನೆ. ಪ್ರಶ್ನಿಸುವವ ಮೋಡಗಳನ್ನೆಲ್ಲಾ ಬೇಧಿಸಿ ದಾರಿ ಮಾಡಿಕೊಂಡು ಹೋಗುತ್ತಾನೆ. ಮೋಡದ ಹಿಂದೆ ಏನೋ ಇದೆ ಎಂದು ಆತ ನಂಬುತ್ತಾನೆ ಎಂದಲ್ಲ, ಅಲ್ಲಿ ಏನೂ ಇಲ್ಲದಿರಬಹುದು, ಆದರೆ ಆತನಿಗೆ ಮೋಡದ ಹಿಂದೇನಿದೆ ಎಂಬುದು ತಿಳಿಯಬೇಕಿರುತ್ತದೆ. ಹಾಗೆ ಮುಂದುವರೆದು ಹೋದವರೆಲ್ಲಾ ಸತ್ಯವನ್ನು ಕಂಡಿದ್ದಾರೆ, ಅದಕ್ಕೆ ಧೈರ್ಯ ಬೇಕು.

ಸಂಶಯವಾದಿ ಜಗತ್ತಿನ ಇತರ ಧಾರ್ಮಿಕ ಶ್ರದ್ಧೆಯ ಜನರ, ಆಸ್ತಿಕರ ಹಾಗೆಯೇ ಇರುತ್ತಾನೆ. ಸಂಶಯವಾದ ಎಂಬುದು ನಕರಾತ್ಮಕವಾದ ಮುಖ, ಅದು ನಕರಾತ್ಮಕವಾದ ಧರ್ಮ. ಸಂಶಯವಾದಿಗೂ, ಆಸ್ತಿಕನಿಗೂ ಯಾವುದೇ ವ್ಯತ್ಯಾಸವಿಲ್ಲ, ಇಬ್ಬರಿಗೂ ಹುಡುಕಬೇಕು ಎನ್ನುವ ಹಂಬಲವಿರುವುದಿಲ್ಲ. ಒಬ್ಬ ಮೋಡದ ಹಿಂದೆ ಸೂರ್ಯನಿದ್ದಾನೆ ಎಂದು ನಂಬುತ್ತಾನೆ, ಮತ್ತೊಬ್ಬ ಸೂರ್ಯ ಇಲ್ಲ ಎಂದು. ಇಬ್ಬರಿಗೂ ಅನ್ವೇಷಣೆಯ ದೀರ್ಘವಾದ ಹಾದಿಯನ್ನು ತುಳಿಯುವ ಆಸಕ್ತಿಯಿಲ್ಲ. ಆ ಹಾದಿಯಲ್ಲಿರುವ ದುಸ್ವಪ್ನಗಳನ್ನು ಎದುರಿಸುವ ಛಾತಿಯಿಲ್ಲ. ಮೋಡದ ಆಚೆಗೆ ನಡೆಯುವ ಧೈರ್ಯವಿಲ್ಲ. ಕೆಲವೇ ಕೆಲವರು ಹಾಗೆ ನಡೆದಿದ್ದಾರೆ.

ನಾನು ನಿಮಗೆ ಪ್ರಶ್ನಿಸುವುದನ್ನು ಕಲಿಸುತ್ತೇನೆ, ಸಂಶಯವಾದವನ್ನು ಅಲ್ಲ. ನೆನಪಿಡಿ, ಪ್ರಶ್ನೆ ಸಂಶಯವಾದವಲ್ಲ; ಅದು ಹುಡುಕಾಟ, ಅನ್ವೇಷಣೆ.

(ಮುಂದುವರೆಯಲಿದೆ…)

ಸಂಶಯವಾದಿಯ ನಂಬಿಕೆಗಳು (ಭಾಗ ೧) January 12, 2009

Posted by uniquesupri in ಓಶೋ ಹೇಳಿದ್ದು.
3 comments

[ ಸಂಪದದ ಬಹುತೇಕ ಚರ್ಚೆಗಳಲ್ಲಿ ಭಾಗವಹಿಸುವಾಗ ನಾನು ಒಂದಂಶವನ್ನು ಗಮನಿಸಿದ್ದಿದೆ. ಕೆಲವು ಲೇಖನಗಳು ಕೆಲವರ ಭಾವನೆಗಳ ಅಭಿವ್ಯಕ್ತಿಯಾಗಿರುತ್ತವೆ. ಉದಾಹರಣೆಗೆ, ನಾನು ಹೆಮ್ಮೆಯ ಹಿಂದೂ ಎಂದು ಯಾರೊ ಬರೆದಿರುತ್ತಾರೆ. ತಮ್ಮ ನಂಬಿಕೆಯ ಬಗ್ಗೆ ಅಭಿಮಾನದಿಂದ ಏನನ್ನೋ ಹೇಳಿಕೊಂಡಿರುತ್ತಾರೆ. ಆಗ ಹಲವು ಸಲ ನನ್ನನ್ನೂ ಸೇರಿದಂತೆ ಅನೇಕರು, ಹಿಂದೂ ಎಂದರೆ ಯಾರು, ಹಿಂದೂ ಎನ್ನುವುದು ಏನು ಎಂದು ಪ್ರಶ್ನಿಸಿದ್ದೇವೆ. ಚರ್ಚೆಯ ವಿಷಯವಾಗಿ ಆ ಪ್ರಶ್ನೆಯನ್ನು ಎತ್ತಿಕೊಂಡರೆ ಸಮಂಜಸ, ಆದರೆ ನಂಬಿಕೆಗಳು, ಭಾವನೆಗಳನ್ನು ಎದುರಿಸಲು ಆ ಪ್ರಶ್ನೆಯನ್ನು ಬಳಸಿಕೊಳ್ಳುವುದು ಸೂಕ್ತವಲ್ಲ ಎಂದು ಬಹಳ ಹಿಂದೆಯೇ ಮನವರಿಕೆಯಾಗಿದೆ. ಆದರೂ ಕೆಲವೊಮ್ಮೆ ವಾದದ ಮದದಲ್ಲಿ ಪ್ರಶ್ನಿಸುವಿಕೆಯನ್ನು ಸಂಯಮದ ಗಡಿ ದಾಟಿ ತೆಗೆದುಕೊಂಡು ಹೋದದ್ದಿದೆ. ಅದರ ಬಗ್ಗೆ ನನಗೆ ಪಶ್ಚಾತಾಪವಿದೆ.

ಹಿಂದೂ ಎಂದರೆ ಯಾರು ಎಂದು ಹಲವರು ಸಂಪದದಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಅವರ ವಿವರಣೆಗಳನ್ನು ಖಂಡ ತುಂಡವಾಗಿ ಕತ್ತರಿಸುವ ಪ್ರಶ್ನೆಗಳನ್ನು ಹಲವರು ಎಸೆದಿದ್ದೇವೆ. ನಾನಂತೂ ನನಗೆ ಸಮಂಜಸವಾದ ವಿವರಣೆ ಸಿಕ್ಕುವವರೆಗೆ ಪ್ರಶ್ನೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಒಂದು ಹಂತದಲ್ಲಿ ನನಗೆ ಒಂದು ಯೋಚನೆ ಶುರುವಾಗುತ್ತದೆ. ಇಷ್ಟೆಲ್ಲಾ ಇತರರ ನಂಬಿಕೆಯನ್ನು, ಸಿದ್ಧಾಂತಗಳನ್ನು, ಧರ್ಮ ಭಾವನೆಯನ್ನು ಪ್ರಶ್ನಿಸುವ ನನ್ನ ನಂಬಿಕೆ ಯಾವುದು? ನನ್ನ ಧರ್ಮ ಯಾವುದು? ನನ್ನ ಜೀವನ ಧೋರಣೆ ಎಂಥದ್ದು? ಬಹುಶಃ ನಾನು ಇದರ ಬಗ್ಗೆ ಗಮನ ಹರಿಸದೆ ಇತರರ ಭಾವನೆ, ನಂಬಿಕೆ, ಧರ್ಮ, ಜೀವನ ದೃಷ್ಟಿಯ ಸಾಚಾತನದ ಬಗ್ಗೆ ಹೆಚ್ಚು ಕಾಳಜಿ ಮಾಡಿದೆನೆನೋ ಎಂದು ಆತಂಕವಾಗುತ್ತದೆ.

ಪ್ರಶ್ನಿಸುವುದು ಎಲ್ಲಾ ಸಂದರ್ಭಗಳಲ್ಲೂ ಒಳ್ಳೆಯದಾ? ನಂಬಿಕೆ ಎಂಬುದೊಂದು ಇಲ್ಲವಾ? ಶ್ರದ್ಧೆ ಮೂಡಬೇಕಾದ ಜಾಗದಲ್ಲಿ ಪ್ರಶ್ನೆ ಇಟ್ಟುಕೊಂಡರೆ ಆಗುವ ಅಪಾಯವೇನು ಎಂದು ನನ್ನ ನಾನು ಅಸ್ಪಷ್ಟವಾಗಿ ಕೇಳಿಕೊಂಡದ್ದಿದೆ. ನನ್ನ ಹಾಗೂ ನನ್ನಂತೆ ಪ್ರಶ್ನಿಸುವ ಅನೇಕರ ಪ್ರಶ್ನೆಗಳು ನಿಜವಾಗಿಯೂ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವ ಹಂಬಲವನ್ನು ಹೊತ್ತಿರುತ್ತವೆಯಾ ಇಲ್ಲವೇ ಇತರರ ವಾದವನ್ನು ಕತ್ತರಿಸಿ ಹಾಕುವ ಆಯುಧವಾಗಿ ಮೆರೆಯುತ್ತಿವೆಯಾ ಎಂದು ಆಲೋಚಿಸಿದ್ದಿದೆ. ಆದರೆ ಅವೆಲ್ಲಾ ಅಸ್ಪಷ್ಟವಾಗಿ ಪ್ರಜ್ಞೆಯನ್ನು ಚುಚ್ಚುವ ಸೂಜಿಗಳಾಗಿ ಮನದ ಮೂಲೆಯಲ್ಲೆಲ್ಲೋ ಹರಿದಾಡುತ್ತಿದ್ದವು. ನಿನ್ನೆ ಓಶೋನ ಒಂದು ಪ್ರವಚನವನ್ನು ಓದುವಾಗ ಆ ಸೂಜಿಗಳು ಸ್ಪಷ್ಟವಾಗಿ ಕಣ್ಣ ಮುಂದೆ ಬಂದವು.

ಆ ಪ್ರವಚನ ಇಲ್ಲಿ ಕೊಟ್ಟರೆ ಉಪಯುಕ್ತವಾಗಬಹುದು ಎನ್ನಿಸಿ ಅದನ್ನು ಕೊಟ್ಟಿರುವೆ.]
………………………………………..

ಪ್ರಶ್ನೆ:
ಪ್ರೀತಿಯ ಓಶೋ,
ಸಂಶಯವಾದಿ ಅನುಯಾಯಿಯಾಗಲಾರ ಎಂದು ಹೇಳಿರುವೆ. ಜೊತೆಗೇ ಎಂದಿಗೂ ಪ್ರಶ್ನಿಸುವುದನ್ನು ನಿಲ್ಲಿಸಬೇಡಿ ಎಂದಿರುವೆ. ದಯವಿಟ್ಟು ಸಂಶಯವಾದ(skepticism)  ಹಾಗೂ ಪ್ರಶ್ನಿಸುವಿಕೆ(doubt)ಯ ನಡುವಿನೆ ವ್ಯತ್ಯಾಸವನ್ನು ವಿವರಿಸು.

ಸಂಶಯವಾದ ಹಾಗೂ ಪ್ರಶ್ನಿಸುವಿಕೆಯ ನಡುವೆ ಬಹುದೊಡ್ಡ ವ್ಯತ್ಯಾಸವಿದೆ. ಬರೀ ವ್ಯತ್ಯಾಸವಿರುವುದಲ್ಲ, ಅವೆರಡೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಮುಖಮಾಡಿರುವಂಥವು.

ಸಂಶಯವಾದ ಎಂಬುದು ಈಗಾಗಲೇ ಒಂದು ಧರ್ಮ-ಶ್ರದ್ಧೆಯಾಗಿದೆ, ಒಂದು ನಂಬಿಕೆಯಾಗಿದೆ, ಒಂದು osho07 ತೀರ್ಮಾನವಾಗಿದೆ. ಇದು ನಕರಾತ್ಮಕವಾದ ತೀರ್ಮಾನ. ಸಂಶಯವಾಗಿದೆ ತನ್ನದೆಂಬ ಸಿದ್ಧಾಂತ ಯಾವುದೂ ಇರುವುದಿಲ್ಲ; ಆತ ಕೇವಲ ಇತರರ ಸಿದ್ಧಾಂತದ ವಿರುದ್ಧವಾಗಿ ವಾದ ಮಾಡುತ್ತಾನೆ. ಆತನ ಸಿದ್ಧಾಂತದ ಬಗ್ಗೆ ನೀವು ಪ್ರಶ್ನಿಸಬಾರದು. ಆತನಲ್ಲಿ ಯಾವ ಸಿದ್ಧಾಂತವೂ ಇರುವುದಿಲ್ಲ. ಆತ ಒಂದು ದೊಡ್ಡ ಸೊನ್ನೆ. ಆತ ನಕರಾತ್ಮಕ ವ್ಯಕ್ತಿ. ಆತ ಯಾವುದನ್ನೂ ನಂಬುವುದಿಲ್ಲ – ಆದರೆ ಇದೂ ಸಹ ಒಂದು ನಂಬಿಕೆಯಾಗಿರುತ್ತದೆ.

ಉದಾಹರಣೆಗೆ, ಆತ ದೇವರನ್ನು ನಂಬುವುದಿಲ್ಲ. ಆತನನ್ನು ನಾವು ನಂಬಿಕೆಯಿಲ್ಲದವ ಎಂದು ಕರೆಯುತ್ತೇವೆ, ಆದರೆ ಆತ ದೇವರಲ್ಲಿ ನಂಬಿಕೆಯಿಲ್ಲದವ ಎಂದು ಕರೆಯುವುದು ಸರಿಯಲ್ಲ; ಆತ ದೇವರು ಇಲ್ಲ ಎಂದು ನಂಬಿರುತ್ತಾನೆ. ಇದು ನಕರಾತ್ಮಕವಾದ ನಂಬಿಕೆಯಾದ್ದರಿಂದ ನೀವು ಗೊಂದಲಕೊಳ್ಳಗಾಗುವಿರಿ. ಆಸ್ತಿಕ ದೇವರಲ್ಲಿ ನಂಬಿಕೆ ಹೊಂದಿರುತ್ತಾನೆ, ನಾಸ್ತಿಕ ದೇವರನ್ನು ನಂಬುವುದಿಲ್ಲ, ಆದರೆ ಆತ ಅನ್ವೇಷಕನಲ್ಲ, ಆತ ಸೃಜನಶೀಲನಲ್ಲ, ಆತ ಸಕಾರತ್ಮಕ ವ್ಯಕ್ತಿಯಲ್ಲ. ಆತ ಸತ್ಯಾನ್ವೇಷಣೆ ಮಾಡುತ್ತಿಲ್ಲ.

ಪುರಾತನ ಗ್ರೀಸಿನಲ್ಲಿ ಸಾಕ್ರೆಟಿಸ್‌ಗಿಂತ ಮುಂಚೆ ಒಂದು ವಿಚಾರ ಶಾಲೆಯಿತ್ತು, ಅವರನ್ನು ಸೋಫಿಸ್ಟ್ (sophist)ಗಳೆನ್ನುತ್ತಿದ್ದರು. ಅವರು ಸಂಶಯವಾದಿಗಳು. ಅವರಲ್ಲಿ ತಮ್ಮದೆನ್ನುವ ಯಾವ ಸಿದ್ಧಾಂತವೂ ಇರಲಿಲ್ಲ, ಆದರೆ ಇತರರ ಸಿದ್ಧಾಂತವನ್ನು ನಾಶ ಮಾಡಲು ಎಲ್ಲಾ ಆಯುಧಗಳೂ, ಎಲ್ಲಾ ಪ್ರತಿವಾದಗಳೂ ಇದ್ದವು.

ಇಲ್ಲ ಎಂದು ಹೇಳುವುದು ತುಂಬಾ ಸುಲಭ.

ಇದೆ ಎಂದು ಹೇಳುವುದು ಕಷ್ಟದ ಕೆಲಸ.

ನೀವು ಯಾವುದನ್ನು ಬೇಕಾದರೂ ಇಲ್ಲ ಎಂದು ಹೇಳಬಹುದು. ಯಾರಾದರೂ, ‘‘ ಸುಂದರವಾದ ಸೂರ್ಯಾಸ್ತವನ್ನು ನೋಡಲ್ಲಿ’’ ಎಂದು ಹೇಳಿದರೆ ನೀವು,“ನಾನು ಸೂರ್ಯ ಮುಳುಗುತ್ತಿರುವದನ್ನು ನೋಡುತ್ತಿರುವೆ. ಆದರೆ ಅದರಲ್ಲಿ ಸುಂದರವಾದದ್ದೇನೂ ನನಗೆ ಕಾಣುತ್ತಿಲ್ಲ. ಸೌಂದರ್ಯ ಎಂದರೇನು ಎಂದು ಮೊದಲು ನನಗೆ ವಿವರಿಸು. ಸೂರ್ಯಾಸ್ತವನ್ನು ಸುಂದರ ಎಂದು ಹೇಗೆ ಕರೆಯಬಲ್ಲೆ ನೀನು? ಸೌಂದರ್ಯ ಎಂಬುದನ್ನು ವ್ಯಾಖ್ಯಾನಿಸದೆ ನೀನು ಸೂರ್ಯಾಸ್ತವನ್ನು ಸುಂದರ ಎಂದು ಕರೆಯಲಾಗದು.” ಎನ್ನಬಹುದು.

ಸೌಂದರ್ಯ ವ್ಯಾಖ್ಯಾನವನ್ನು ಮೀರಿದ್ದು. ಸಾವಿರಾರು ವರ್ಷಗಳಿಂದ ಜನರು ಸೌಂದರ್ಯವನ್ನು, ಸತ್ಯವನ್ನು, ಪ್ರೀತಿಯನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವ ಪ್ರಯತ್ನವೂ ಫಲಕಾರಿಯಾಗಿಲ್ಲ. ಇದಕ್ಕೆ ಸರಳವಾದ ಕಾರಣವೆಂದರೆ ಇವೆಲ್ಲಾ ಅನುಭವಗಳು. ನೀವು ಅನುಭವಗಳನ್ನು, ಅನುಭವಿಸಬೇಕಾದವುಗಳನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಆದರೆ ಇವನ್ನೆಲ್ಲಾ ನಿರಾಕರಿಸುವುದು ಕಷ್ಟದ ಕೆಲಸವಲ್ಲ.

ಸಂಶಯವಾದಿ ಈಗಾಗಲೇ ಎಲ್ಲಾ ವಿಷಯಗಳ ಬಗೆಗೆ ತನ್ನ ‘ಇಲ್ಲ’ ಎಂಬ ಧೋರಣೆಯನ್ನು ಸ್ಥಾಪಿಸಿಕೊಂಡು ಬಿಟ್ಟಿರುತ್ತಾನೆ. ಈತ ಇತರ ಆಸ್ತಿಕರಿಗಿಂತ ಭಿನ್ನನಾದವನಲ್ಲ. ಅವರೂ ತಮ್ಮ ನಂಬಿಕೆಗಳಲ್ಲಿ ನೆಲೆನಿಂತಿದ್ದಾರೆ. ಇವರಿಬ್ಬರೂ ಅನ್ವೇಷಣೆಯ ಮಾರ್ಗದಲ್ಲಿರುವವರಲ್ಲ.

ಈಗ ನಿಮಗೆ ಸಂಶಯವಾದ ಹಾಗೂ ಪ್ರಶ್ನಿಸುವಿಕೆಯ ನಡುವಿನ ವೈರುಧ್ಯ ಅರ್ಥವಾಗಿರಬಹುದು. ಪ್ರಶ್ನಿಸುವಿಕೆ ಎಂಬುದು ತೀರ್ಮಾನವಲ್ಲ. ಪ್ರಶ್ನೆ ಪಯಣವೊಂದರ ಆರಂಭ. ಅದೊಂದು ತೀರ್ಥಯಾತ್ರೆ. ಸಂಶಯವಾದಿ ಆಗಲೇ ಎಲ್ಲವಕ್ಕೂ ‘ಇಲ್ಲ’ ಎಂಬ ಉತ್ತರವನ್ನು ಕಂಡುಕೊಂಡಿರುತ್ತಾನೆ. ತನ್ನೆದುರು ಇರಿಸಲಾಗದ ಎಲ್ಲ, ತಾನು ಮೇಜಿನ ಮೇಲಿಟ್ಟುಕೊಂಡು ವಿಭಜಿಸಲಾಗದ ಎಲ್ಲವನ್ನೂ ಆತ ‘ಇಲ್ಲ’ ಎಂದು ತೀರ್ಮಾನಿಸಿಬಿಟ್ಟಿರುತ್ತಾನೆ.

ಕಾರ್ಲ್ ಮಾರ್ಕ್ಸ್ ಹೀಗೆ ಹೇಳಿದ್ದ, “ದೇವರನ್ನು ವೈಜ್ಞಾನಿಕ ಪ್ರಯೋಗಾಲಯದಲ್ಲಿ, ಟೆಸ್ಟ್ ಟ್ಯೂಬಿನಲ್ಲಿ ನೋಡುವವರೆಗೆ ನಾನು ಆತನನ್ನು ನಂಬುವುದಿಲ್ಲ.”

ದೇವರು ಟೆಸ್ಟ್ ಟ್ಯೂಬಿನಲ್ಲಿ ಕಂಡುಕೊಳ್ಳಬೇಕಾದುದಲ್ಲ. ದೇವರನ್ನು ಅರಸಬೇಕು. ನೀವು ಅರಸುವಿಕೆಯ ಹಾದಿಯಲ್ಲಿರುವಾಗ ಸಾವಿರಾರು ಸಂಗತಿಗಳನ್ನು ಪ್ರಶ್ನಿಸಬೇಕಾಗುತ್ತದೆ, ಆದರೆ ಈ ಹುಡುಕುವಿಕೆಯಲ್ಲಿ ನೀವೊಂದು ನಿಲ್ದಾಣವನ್ನು ತಲುಪುತ್ತೀರಿ, ಅಲ್ಲಿ ನಿಮ್ಮೆಲ್ಲಾ ಪ್ರಶ್ನೆಗಳು ಮಾಯವಾಗಿಬಿಡುತ್ತವೆ. ಅಚಾನಕ್ಕಾಗಿ ನೀವು ಸತ್ಯದೆದುರು ಮುಖ ಮಾಡಿ ನಿಂತಿರುತ್ತೀರಿ. ನೀವು ಚಕಿತರಾಗಿರುತ್ತೀರಿ, ನಿಮಗೆ ದೇವರು ಸಿಕ್ಕಿರುವುದಿಲ್ಲ, ಆದರೆ ನೀವು ಏನನ್ನೋ ಕಂಡುಕೊಂಡಿರಿ ಎಂಬುದನ್ನು ನಿರಾಕರಿಸಲೂ ಸಾಧ್ಯವಾಗುವುದಿಲ್ಲ, ದೇವರಿಗಿಂತ ಉನ್ನತವಾದದ್ದೇನನ್ನೋ ನೀವು ಕಂಡುಕೊಂಡಿರುತ್ತೀರಿ. ಇದನ್ನು ನಾನು ದೈವತ್ವ ಎಂದು ಕರೆಯುತ್ತೇನೆ.

(ಮುಂದುವರೆಯಲಿದೆ…)

ಓಶೋ ವಿಚಾರಗಳು ಪ್ರಾಕ್ಟಿಕಲ್ಲಾಗಿವೆಯೇ? January 10, 2009

Posted by uniquesupri in ಚರ್ಚೆ.
add a comment

- ಸುಪ್ರೀತ್.ಕೆ.ಎಸ್

ಈ ಬ್ಲಾಗನ್ನು ತೆರೆಯುವುದರ ಉದ್ದೇಶ ಓಶೋ ಮೇಲಿನ ನನ್ನ ಪ್ರೀತಿ, ಮುನಿಸು, ಅಭಿಮಾನ, ಆತನ ಬಗೆಗಿರುವ ಬೆರಗು, ಕುತೂಹಲ, ಅನುಮಾನ, ಅಸಹ್ಯಗಳನ್ನು ಬರೆದಿರಿಸುವುದು, ಆ ಮೂಲಕ ನನ್ನೊಳಗೊಂದು ಸ್ಪಷ್ಟ ನಿಲುವನ್ನು ರೂಪಿಸಿಗೊಳ್ಳುತ್ತಾ ಹೋಗುವುದು ಎಂದಾಗಿತ್ತು. ಓಶೋನ ವಿಚಾರಗಳನ್ನು ನಾನೆಷ್ಟೇ ಮೆಚ್ಚಿದರೂ pg12_3 ಅವನ್ನು ಯಥಾವತ್ತಾಗಿ ಬ್ಲಾಗಿಗೆ ಹಾಕುವುದು ವ್ಯರ್ಥ ಶ್ರಮ ಎನ್ನಿಸಿ ಸುಮ್ಮನಾದೆ. ಹಾಗೆ ನೋಡಿದರೆ ಅಂತರ್ಜಾಲದಲ್ಲಿ ಓಶೋ ಸಾಹಿತ್ಯಕ್ಕೆ ಕೊರತೆಯೇನೂ ಇಲ್ಲ. ಆತನ ಪ್ರತಿಯೊಂದು ಭಾಷಣ, ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಕನ್ನಡದಲ್ಲಿಯೂ ಓಶೋ ವಿಚಾರಗಳಿಗಾಗಿಯೇ ಮೀಸಲಾದ ಪತ್ರಿಕೆಯಿದೆ. ಇಂಗ್ಲೀಷಿನಲ್ಲಿ ತುಂಬಾ ಸರಳವಾಗಿರುವ ಪ್ರವಚನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಹೊರಟರೆ ನಮ್ಮ ಶ್ರದ್ಧೆಯೆಂಬ ಕಲ್ಮಷವೇ ಸೇರಿಕೊಂಡು ಭಾಷಾಂತರ ಮೂಲಕ್ಕಿಂತ ಹೆಚ್ಚು ಕ್ಲಿಷ್ಟಕರವಾಗಿಬಿಡುತ್ತದೆ. ಮೇಲಾಗಿ ಓಶೋ ಇಂಥದ್ದೊಂದು ವಿಷಯದ ಬಗ್ಗೆ ಎಂದು ತಯಾರಾಗಿ ಮಾತಾಡಿದವನಲ್ಲ. ತನ್ನ ಸಂನ್ಯಾಸಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದ. ಒಂದೊಂದು ಪ್ರವಚನದಲ್ಲೂ ಬೇರೆ ಬೇರೆ ಆಯಾಮಗಳಲ್ಲಿ ವಿಷಯಗಳನ್ನು ವಿವರಿಸುತ್ತಾ ಹೋಗುವ ಆತನ ಶೈಲಿಯನ್ನು ಅನೇಕ ವೇಳೆ ನಾವು ವಿರೋಧಾಭಾಸ ಎಂದು ಭಾವಿಸುತ್ತೇವೆ.ಯೇಸುವಿನ ಬಗ್ಗೆ ಇದುವರೆಗೂ ನಾನು ಕೇಳಿರುವ ಪ್ರವಚನಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾದ, ಕೆಲವೊಂದು ವೇಳೆ ವೈರುಧ್ಯಗಳಂತೆ ಕಾಣುವ ಹಾಗೆ ಆತ ಮಾತನಾಡಿದ್ದಾನೆ. ಹೀಗಾಗಿ ಓಶೋ ಚಿಂತನೆ ಎಂಬುದು ನನ್ನೆದುರು ಸಮುದ್ರದ ಹಾಗೆ ನಿಂತಂತೆ ಭಾಸವಾಗುತ್ತದೆ. ಕಲ್ಲು ಸಕ್ಕರೆಯ ದೊಡ್ಡ ಬಂಡೆಯೆದುರು ನಿಂತಂತೆ ಅನ್ನಿಸುತ್ತದೆ. ಹೀಗಾಗಿ ಆತನ ಪ್ರವಚನಗಳನ್ನು ಯಥವಾತ್ತಾಗಿ ಭಾಷಾಂತರಿಸಿ ಬ್ಲಾಗಿಗೆ ಹಾಕುವುದಕ್ಕಿಂತ ಆತನ ಪ್ರೇರಣೆಯಿಂದ ನಾನು ಕಂಡುಕೊಂಡ ಸತ್ಯ ಯಾವುದು, ಆತ ನನ್ನಲ್ಲಿ ಹುಟ್ಟುಹಾಕಿದ ವಿಚಾರಗಳು ಯಾವುವು, ಅವು ನನ್ನೊಳಗೆ ಮಾಡಿದ ಪ್ರಭಾವಗಳೇನು ಎಂಬುದರ ಬಗ್ಗೆ ಬರೆಯುತ್ತೇನೆ.

ಓಶೋ ಬಗ್ಗೆ ಹಿಂದೆ ಬರೆದಿದ್ದ ಕೆಲವು ಬರಹಗಳಿಗೆ ಬಂದಿದ್ದ ಥರೇವಾರಿ ಪ್ರತಿಕ್ರಿಯೆಗಳಲ್ಲಿ ನನ್ನ ಗಮನ ಸೆಳೆದ ಪ್ರತಿಕ್ರಿಯೆ ಒಂದಿದೆ. ಓಶೋನ ಬಗ್ಗೆ ನನ್ನ ಹಾಗೆ ಕುತೂಹಲದಿಂದ ಓದಿಕೊಂಡಿರುವ ಬ್ಲಾಗಿಗರೊಬ್ಬರ ಪ್ರತಿಕ್ರಿಯೆ ಇದು: “ರಜನೀಶನ ವಿಚಾರಗಳು ಎಷ್ಟೇ ಕ್ರಾಂತಿಕಾರಿಯಾಗಿದ್ದರೂ, ಎಷ್ಟೇ ತಾರ್ಕಿಕ ಅನ್ನಿಸಿದರೂ ಅವು ಪ್ರಾಕ್ಟಿಕಲ್ ಅಲ್ಲ.”  

ಹಲವು ಬಾರಿ ನಾನೂ ವಿಚಾರಗಳ ಪ್ರಾಕ್ಟಿಕಲ್ ಮಹತ್ವದ ಬಗ್ಗೆ ಆಲೋಚಿಸಿದ್ದಿದೆ. ಇದು ಕೇವಲ ಓಶೋ ವಿಚಾರಗಳಲ್ಲ ಬಗೆಗಿನ ಮಾತಲ್ಲ. ಗಾಂಧೀಜಿಯ ವಿಚಾರಗಳನ್ನು ಓದುವಾಗ, ಅಹಿಂಸೆಯ ಬಗ್ಗೆ, ಅಸಹಕಾರದಿಂದ, ಪ್ರೇಮದಿಂದ ಶತ್ರುವಿನ ಮನಗೆಲ್ಲುವ ಬಗ್ಗೆ, ಪ್ರಾಣವನ್ನು ಕೊಡಲು ಬೇಕಾದರೂ ಸಿದ್ಧರಾಗಬೇಕು ಆದರೆ ಸತ್ಯವನ್ನು ಬಿಟ್ಟುಕೊಡಬಾರದು ಎಂಬ ಬಗ್ಗೆ ಅವರ ವಿಚಾರಗಳನ್ನು ಓದುವಾಗ ಇವೆಲ್ಲಾ ಕೇಳಲು ಚೆನ್ನಾಗಿವೆ, ಪ್ರಾಕ್ಟಿಕಲಿ ಸಾಧ್ಯವಾಗುವಂಥವಾ ಎಂದೆನಿಸಿದ್ದಿದೆ. ವಿವೇಕಾನಂದರಿಂದ ಹಿಡಿದು ವ್ಯಕ್ತಿತ್ವ ವಿಕಸನ ಪುಸ್ತಕ ಬರೆದ ಲೇಖಕನವರೆಗೆ ಎಲ್ಲರ ಚಿಂತನೆಗಳನ್ನು ಕೇಳಿದಾಗ ಇವನ್ನು ಪಾಲಿಸಲು ಸಾಧ್ಯವಾಗುತ್ತದಾ ಎಂಬ ಪ್ರಶ್ನೆ ಏಳುತ್ತದೆ.

ಓಶೋ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಕೇಳಿಕೊಂಡಾಗ ನನಗೆ ಈ ಪ್ರಶ್ನೆಯ ಹಾಗೂ ಅದರ ಹಿಂದಿನ ಉದ್ದೇಶದ ಬಗ್ಗೆಯೇ ನಗುಬರುತ್ತದೆ. ಓಶೋ ತನ್ನ ಜೀವಮಾನವಿಡೀ ಹೇಳಿದ್ದು, ರೆಡಿಮೇಡ್ ಉತ್ತರಗಳನ್ನು ನಂಬುತ್ತಾ, ನಿಮ್ಮ ಬುದ್ಧಿವಂತಿಕೆಯನ್ನು ಅವಮಾನಿಸಬೇಡಿ. ಶಾಸ್ತ್ರಗಳು, ಧಾರ್ಮಿಕ ಗ್ರಂಥಗಳು, ಧರ್ಮ ಗುರುಗಳು, ಢೋಂಗಿ ಬೋಧಕರು ನಿಮ್ಮ ಪ್ರಶ್ನೆಗಳಿಗೆಲ್ಲಾ ಒದಗಿಸುವ ಸಿದ್ಧ ಮಾದರಿಯ ಉತ್ತರಗಳಿಂದ ಸಂತೃಪ್ತರಾಗಿ ಪ್ರಶ್ನಿಸುವುದನ್ನೇ ಮರೆತುಬಿಡಬೇಡಿ. ನಿಮ್ಮ ಬುದ್ಧಿವಂತಿಕೆಯನ್ನು ಗೌರವಿಸಿ. ಪ್ರಶ್ನಿಸುವುದನ್ನು ನಿಲ್ಲಿಸಬೇಡಿ. ನೀವಾಗಿ ಉತ್ತರ ಕಂಡುಕೊಳ್ಳದ ಹೊರತು ಯಾವ ಉತ್ತರಗಳೂ ನಿಮ್ಮವಾಗುವುದಿಲ್ಲ. ಹೀಗೆ ಹೇಳುವುದೆಂದರೆ ಆಸರೆಗಾಗಿ ನಮ್ಮ ಕೈ, ಕಾಲು ತಡವುವ ಮಗುವನ್ನು ಬಿಡಿಸಿ ನೆಲದ ಮೇಲೆ ಬಿಟ್ಟು ಅದು ತಾನಾಗಿ ತನ್ನ ಕಾಲ ಮೇಲೆ ನಿಲ್ಲಲು ಬಿಡುವುದು. ಅವಲಂಬನೆಯಿಂದ ಮುಕ್ತವಾಗಿಸುವುದು. ಓಶೋನ ಈ ಮಾರ್ಗದಲ್ಲಿ ಯಾವುದೇ ಸಿದ್ಧಾಂತಗಳಿಲ್ಲ. ಇದು ಸತ್ಯ, ಇದನ್ನು ನೀನು ಒಪ್ಪಿಕೊಳ್ಳಬೇಕು. ನಾನು ಹೇಳಿದಂತೆ ನಡೆದರೆ ನಿನಗೆ ಸತ್ಯ ಸಿಕ್ಕುತ್ತದೆ ಎಂದು ಆತ ಹೇಳಲಿಲ್ಲ. ನಿನ್ನ ಸತ್ಯವನ್ನು ನೀನೇ ಕಂಡುಕೊಳ್ಳಬೇಕು, ಅವರಿವರು ಒದಗಿಸುವ ಸತ್ಯದಿಂದ ನೀನು ತೃಪ್ತನಾಗಿ, ಅವರ ಮೇಲೆ ಅವಲಂಬಿತನಾಗಬೇಡ ಎಂದ.

ಈಗ ಹೇಳಿ ಓಶೋನ ವಿಚಾರಗಳನ್ನು ಪಾಲಿಸುವುದು ಎಂಬ ಮಾತಿಗೆ ಅರ್ಥವಿದೆಯೇ? ನಿಮ್ಮ ಸ್ವಂತ ಅನುಭವದಲ್ಲಿ ಕಂಡುಕೊಳ್ಳದೆ ಏನನ್ನೂ ಒಪ್ಪಬೇಡಿ, ಯಾರನ್ನೂ ಅನುಸರಿಸಬೇಡಿ, ಯಾವುದನ್ನೂ ಪಾಲಿಸಬೇಡಿ ಎಂಬ ವಿಚಾರವನ್ನೇ ‘ಪಾಲಿಸುವುದು’ ಎನ್ನುವುದು ಹಾಸ್ಯಾಸ್ಪದ.

ಓಶೋ ಅಷ್ಟೇ ಅಲ್ಲ, ಸತ್ಯವನ್ನು ಕಂಡುಕೊಂಡ ಅನೇಕರು ಹೇಳಿದ್ದು ಅದನ್ನೇ. ನಿಮ್ಮ ಸತ್ಯವನ್ನು ನೀವೇ ಕಂಡುಕೊಳ್ಳಬೇಕು.  ಅವರಿವರ ಕಾಲು, ಕೈ ಹಿಡಿದು ನಡೆಯಬೇಡ ನಿನ್ನ ಕಾಲ ಮೇಲೆ ನೀನು ನಿಲ್ಲು ಎಂದು ಹೇಳಿದಂತೆ ಇದು.

ಓಶೋನ ವಿಚಾರವನ್ನು ‘ನಂಬುವುದು’ , ಆತ ಹೇಳಿದ್ದನ್ನೆಲ್ಲಾ ವಿಮರ್ಶಿಸದೆ ಒಪ್ಪಿಕೊಳ್ಳುವುದು, ನಮ್ಮ ಪ್ರಶ್ನೆಗಳಿಗೆಲ್ಲಾ ಆತ ಉತ್ತರ ಕೊಡುತ್ತಾನೆ ಎಂದು ಭಾವಿಸುವುದು ಇವೆಲ್ಲವೂ ನಮ್ಮನ್ನು ನಾವು ಅವಲಂಬಿತರನ್ನಾಗಿಸಿಕೊಂಡಂತೆಯೇ. ನಮ್ಮ ಬುದ್ಧಿವಂತಿಕೆಯನ್ನು , ಸಾಮರ್ಥ್ಯವನ್ನು ನಾವು ಕಡೆಗಣಿಸಿದಂತೆಯೇ. ಇದನ್ನೇ ಮಾಡಬೇಡಿ ಎಂದು ಎಚ್ಚರಿಸಿದವ ಓಶೋ.

ಅಲ್ಲ ಅಲ್ಲ ಎನ್ನು! ನೀನು ಗೆಲ್ಲುವೆ December 22, 2008

Posted by uniquesupri in ಓಶೋ ಹೇಳಿದ್ದು.
2 comments

- ಡಾ|| ಜ್ಞಾನದೇವ್

ಮನಸ್ಸು ಎ೦ದಿಗೂ ನಕಾರಾತ್ಮಕ, ಹೃದಯ ಸಕಾರಾತ್ಮಕ. ಮನಸ್ಸಿನ ಭಾಷೇ ‘ಇಲ್ಲ’ ಎ೦ಬುದರಲ್ಲೇ ಬೇರೂರಿದೆ. ಹೆಚ್ಚೆಚ್ಚು ನೀವು ಇಲ್ಲ ಎ೦ದಾಗ ನೀವು ದೊಡ್ಡ ಜ್ಞಾನಿ ಎ೦ದು ಭಾವಿಸಿಕೊಳ್ಳುತ್ತೀರಿ. ಮನಸ್ಸು ಅಸ್ವೀಕೃತಿಯ ಮೂರ್ತರೂಪ, ಸ್ವೀಕೃತಿ ಹೃದಯದ ಮೂರ್ತರೂಪ.

ನಾನು ನಿಮಗೊ೦ದು ಪುಟ್ಟ ಕಥೆಯನ್ನು ಹೇಳುತ್ತೇನೆ.osho36_2.preview3

ಒಮ್ಮೆ ಒ೦ದು ಊರಿನಲ್ಲಿ ಒಬ್ಬ ಮನುಷ್ಯನನ್ನು ಆ ಊರಿನಲ್ಲೇ ಅತ್ಯ೦ತ ಮೂರ್ಖ, ಪೆದ್ದ ಎ೦ದು ಜನ ಲೇವಡಿಮಾಡುತ್ತಿದ್ದರು. ಆತ ಏನೇ ಹೇಳಿದರೂ ಜನ ಹಾಸ್ಯಮಾಡುತ್ತಿದ್ದರು. ನೊ೦ದ ಆತ ಆ ಊರಿನ ಒಬ್ಬ ವೃದ್ಧ ವಿವೇಕಿಯ ಬಳಿ ಹೋದ. ತಾನು ಇನ್ನು ಬದುಕಿ ಏನು ಪ್ರಯೋಜನವಿಲ್ಲವೆ೦ದು ಅವನಲ್ಲಿ ಅತ್ತ. ಇನ್ನು ಅವಮಾನ, ಲೇವಡಿ ನಾನು ಸಹಿಸಲಾರೆ. ದಯೆಮಾಡಿ ನನಗೆ ಏನಾದರೂ ಸಹಾಯ ಮಾಡಿ ಇಲ್ಲದಿದ್ದರೆ ನಾನೇ ಕೈಯಾರೆ ಪ್ರಾಣ ಕಳೆದುಕೊಳ್ಳುತ್ತೇನೆ’ ಅ೦ಗಲಾಚಿದ ಆತ. ಆ ವೃದ್ಧ ಜ್ಞಾನಿ ನಕ್ಕು ನುಡಿದ, ‘ಚಿ೦ತಿಸಬೇಡ, ಒ೦ದು ಕೆಲಸ ಮಾಡು. ನೀನು ನಕಾರಾತ್ಮಕನಾಗಿರು, ಇಲ್ಲ ಅಥವಾ ಅಲ್ಲ ಎನ್ನು. ಉತ್ತರಿಸಲಾಗದ ಪ್ರಶ್ನೆಗಳನ್ನು ಹಾಕುತ್ತಾ ಹೋಗು. ಯಾರಾದರೂ ನಿನಗೆ ‘ನೋಡು ಆ ಸೂರ್ಯಾಸ್ತಮಾನ ಎಷ್ಟೊ೦ದು ಸು೦ದರ! ಎ೦ದು ಹೇಳಿದರೆ ನೀನು ತಕ್ಷಣ ‘ಅಲ್ಲಿ ಯಾವ ಸೌ೦ದರ್ಯವಿದೆ? ನನಗೆ ವಿವರಣೆ ಕೊಡು’ ಎ೦ದು ಹೇಳು. ಇದೇ ಕೆಲಸವನ್ನು ಎಲ್ಲದಕ್ಕೂ ಮಾಡುತ್ತಾ ಹೋಗು. ಒ೦ದು ವಾರದ ನ೦ತರ ಬ೦ದು ನನ್ನನ್ನು ಕಾಣು."

ಒ೦ದು ವಾರದ ನ೦ತರ ಆ ಮೂರ್ಖ ಆ ಜ್ಞಾನಿಯ ಬಳಿ ಬ೦ದ. ಅವನ ಹಿ೦ದೆ ಒ೦ದು ದೊಡ್ಡ ಗು೦ಪೇ ಇತ್ತು. ಅವನಿಗೆ ಹೂವಿನ ಹಾರ ಹಾಕಲಾಗಿತ್ತು. ಸಿ೦ಗಾರದ ಬಟ್ಟೆಗಳನ್ನು ಧರಿಸಿದ್ದ. ಆತ ಹೇಳಿದ, ‘ಇದೊ೦ದು ಜಾದೂ! ಈಗ ಇಡೀ ಪಟ್ಟಣವೇ ನಾನೊಬ್ಬ ಅತ್ಯ೦ತ ಬುದ್ಧಿವ೦ತ ಚಿ೦ತಕನೆ೦ದು ಕೊ೦ಡಾಡುತ್ತಿದೆ. ನನ್ನ ಸನ್ನಿಧಿಯಲ್ಲಿ ಅವರೆಲ್ಲರೂ ಮೌನಿಗಳಾಗುತ್ತಾರೆ. ಕಾರಣ, ಅವರೇನು ಹೇಳಿದರೂ ಅವನ್ನು ತಕ್ಷಣ ನಾನು ಪ್ರಶ್ನೆಗಳನ್ನಾಗಿಸುತ್ತೇನೆ. ಹಾಗೆಯೇ ನಾನು ನಕಾರಾತ್ಮಕನಾಗುತ್ತೇನೆ. ನಿಮ್ಮ ಉಪಾಯ ಫಲಿಸಿದೆ ಸ್ವಾಮಿ.!
ಅ ವೃದ್ಧ ವಿವೇಕಿ ಕೇಳಿದ, ‘ಸರಿ, ನಿನ್ನನ್ನು ಹಿ೦ಬಾಲಿಸುತ್ತಿರುವ ಈ ಜನ ಯಾರು?’

ಅದಕ್ಕೆ ಆತ ಹೇಳಿದ,
‘ಅವರೆಲ್ಲ ನನ್ನ ಶಿಷ್ಯರು. ಜ್ಞಾನ ಎ೦ದರೇನು ಎನ್ನುವುದನ್ನು ನನ್ನಿ೦ದ ಕಲಿಯಲು ಬಯಸುತ್ತಿದ್ದಾರೆ.!’

(ಅನುವಾದಿತ)
ಕೃಪೆ: osho Times

ರಾಮ ಮತ್ತು ರಾವಣ ಚೇತನ- ಓಶೋ ಕ೦ಡ೦ತೆ December 20, 2008

Posted by uniquesupri in Uncategorized.
add a comment

- ಡಾ|| ಜ್ಞಾನದೇವ್

ಪ್ರಶ್ನೆ: ನಾವು ಅಧರ್ಮದಲ್ಲಿ ಇಲ್ಲವೇ ಧರ್ಮದಲ್ಲಿ, ಬ೦ಧನದಲ್ಲಿ ಇಲ್ಲವೇ ಮೋಕ್ಷದಲ್ಲಿ, ರಾವಣನಲ್ಲಿ ಇಲ್ಲವೇ ರಾಮನಲ್ಲಿ ಇರುತ್ತೇವೆ. ಪ್ರಾಯಶಃ ಮಧ್ಯದ ಸ್ಥಿತಿ ಯಾವುದೂ ಇಲ್ಲವೇನೋ?

ಓಶೋ ಉತ್ತರಿಸಿದ್ದು: ನಿಶ್ಚಯವಾಗಿಯೂ ಮಧ್ಯದ ಸ್ಥಿತಿ ಇಲ್ಲ. ಇರುವುದು ಸಾಧ್ಯವೂ ಇಲ್ಲ. ಇದು ಸ್ವಲ್ಪ ಕಠಿಣವಾದದ್ದು. ಆದ್ದರಿ೦ದ ಗಮನವಿಟ್ಟು ತಿಳಿದುಕೊಳ್ಳಿ. ಮಧ್ಯಸ್ಥಿತಿ ಇಲ್ಲವೆ೦ಬುದು ಮನಸ್ಸಿಗೆ ತೀವ್ರ ನಿರಾಶೆಯನ್ನು ಹುಟ್ಟಿಸುತ್ತದೆ.

ಮನಸ್ಸು ಮಧ್ಯದ ಸ್ಥಿತಿಯನ್ನು ಹುಟ್ಟಿಸುತ್ತದೆ. ಇದರಿ೦ದ ನಮಗೆ , ನಾವು ರಾಮನಲ್ಲದಿದ್ದರೂ ರಾವಣನ೦ತೂ osho36_2.preview ಅಲ್ಲವೆ೦ಬ ಭರವಸೆ ಮೂಡುತ್ತದೆ. ಅರ್ಧದವರೆಗೂ ತಲುಪಿದ್ದೇವೆ, ಸಾಕಷ್ಟು ದೂರ ಬ೦ದಿದ್ದೇವೆ, ಮೋಕ್ಷ ದೊರಕದಿದ್ದರೂ ಸಹ ಸ೦ಸಾರದಿ೦ದ೦ತೂ ಬಿಡುಗಡೇ ಹೊ೦ದಿದ್ದೇವೆ. ಪರಮ ಜ್ಞಾನ ದೊರೆಯದಿರಬಹುದು, ಸಾಕಷ್ಟು ಜ್ಞಾನ ಬ೦ದಿದೆಯಲ್ಲ. ಇನ್ನು ಕೊ೦ಚ ದೂರವಷ್ಟೆ ಎ೦ಬ ಭರವಸೆ ಮೂಡುವುದು.

ಆದರೆ ಜ್ಞಾನವನ್ನು ಭಾಗಗಳಾಗಿಸಬಹುದೇನು? ನೀವು ಅರ್ಧ ಜ್ಞಾನಿಯಾಗಬಹುದೇನು? ಅರ್ಧ ಬುದ್ಧತ್ವ ಸಾಧ್ಯವೇ? ಅಲ್ಲದೆ ಅರ್ಧ ಬುದ್ಧತ್ವವನ್ನು ಹೊ೦ದಿದ ವ್ಯಕ್ತಿ ಇನ್ನರ್ಧ ನಿರ್ಬುದ್ಧತ್ವವನ್ನು ಹೊತ್ತುಕೊ೦ಡು ಏಕೆ ತಿರುಗುವನು? ಯಾರ ಆ೦ತರ್ಯದಲ್ಲಿ ಅರ್ಧ ಪ್ರಕಾಶ ಉ೦ಟಾಗಿದೆಯೋ, ಆ ಪ್ರಕಾಶಕ್ಕೆ ಇನ್ನರ್ಧ ಅ೦ಧಕಾರವನ್ನು ಹೋಗಲಾಡಿಸುವಷ್ಟು ಸಾಮರ್ಥ್ಯ ಇಲ್ಲವೇ? ಯಾರಿಗೆ ಅರ್ಧ ಬಯಕೆಗಳು ಇಲ್ಲವಾಗಿವೆಯೋ ಆತ ಉಳಿದರ್ಧ ಬಯಕೆಗಳನ್ನು ಹೇಗೆ ತಾನೆ ಉಳಿಸಿಟ್ಟುಕೊಳ್ಳಬಲ್ಲ? ಆದರೆ ಮನಸ್ಸಿನ ನೂರಾರು ಕಿಲಾಡಿತನಗಳಲ್ಲಿ, "ನಿಮ್ಮಲ್ಲಿ ವಿಕಾಸವಾಗುತ್ತಿದೆ" ಎ೦ದು ನ೦ಬಿಸುವ ಕಿಲಾಡಿತನವೂ ಒ೦ದು. ಇದರಿ೦ದಾಗಿ ನಿಮ್ಮಲ್ಲಿ ಆಸೆ ಮೂಡುತ್ತದೆ. ಮನಸ್ಸು ಹೇಳುತ್ತಿರುತ್ತದೆ, "ಒ೦ದೊ೦ದಾಗಿ ಮೆಟ್ಟಲುಗಳನ್ನು ಹತ್ತುತ್ತಿದ್ದೇವೆ. ಇನ್ನು ಉಳಿದಿರುವುದು ಕೆಲವೇ ಕೆಲವು ಮಾತ್ರ. ಏನೂ ಅವಸರವಿಲ್ಲ. ಹೆದರಲು ಕಾರಣವಿಲ್ಲ. ಚಿ೦ತಿತರಾಗುವುದು ಬೇಕಿಲ್ಲ. ಇಷ್ಟೆಲಾ ಮೆಟ್ಟಲುಗಳನ್ನು ಹತ್ತಿದ್ದಾಗಿದೆ. ಇನ್ನು ಕೆಲವು ಮಾತ್ರ. ಅವೂ ಮುಗಿದುಹೋಗುತ್ತವೆ. ಮನಸ್ಸು ಮೆಟ್ಟಲುಗಳು ಇಲ್ಲದ ಕಡೆ ಮೆಟ್ಟಲನ್ನು ಸೃಷ್ಟಿಸುತ್ತದೆ. ಎಲ್ಲಿ ‘ಡಿಗ್ರಿ’ ಗಳಿಲ್ಲವೋ, ಎಲ್ಲಿ ‘ಡಿಗ್ರಿಗಳಿರುವುದು ಸಾಧ್ಯವಿಲ್ಲವೋ ಅಲ್ಲಿ ಡಿಗ್ರಿಗಳನ್ನು ಸೃಷ್ಟಿಸುತ್ತದೆ.

 

ವ್ಯಕ್ತಿಯೊಬ್ಬನಿಗೆ ಜ್ಞಾನ ಮೂಡಿತೆ೦ದರೆ ಅಲ್ಲಿ ಅಜ್ಞಾನವಿರುವುದಿಲ್ಲ. ತೃಣ ಮಾತ್ರವೂ ಇರಲಾರದು. ಅರ್ಧದ ಮಾತು ಬಿಡಿ. ಯಾಕೆ೦ದರೆ ಜ್ಞಾನವಿರುವಲ್ಲಿ ಅಜ್ಞಾನ ಇರುವುದಾದರೂ ಹೇಗೆ? ವ್ಯಕ್ತಿ ಅಜ್ಞಾನದಲ್ಲಿರುತ್ತಾನೆ. ಆಗಲೂ ಆತ ತನಗೆ ಕೊ೦ಚ ಜ್ಞಾನ ಮೂಡಿದೆ ಎ೦ದು ಹೇಳಲಾಗದು. ಯಾಕೆ೦ದರೆ ತೃಣಮಾತ್ರದ ಜ್ಞಾನವೂ ಅಜ್ಞಾನವನ್ನು ನಾಶ ಮಾಡುತ್ತದೆ.ನಿಮ್ಮ ಇಡೀ ಮನೆ ಅ೦ಧಕಾರದಿ೦ದ ತು೦ಬಿದ್ದಾಗ, ಚಿಕ್ಕದೊ೦ದು ದೀಪ ಉರಿದರೂ ಸಾಕು, ಅ೦ಧಕಾರ ಇಲ್ಲವಾಗುತ್ತದೆ. ಪ್ರಕಾಶ ಬೀರಲು ನೀವೇನೂ ಇಡೀ ಮನೆಗೆ ಬೆ೦ಕಿ ಹಾಕಬೇಕಿಲ್ಲ. ಚಿಕ್ಕದೊ೦ದು ದೀಪ ಹೊತ್ತಿತೆ೦ದರೆ ಪ್ರಕಾಶ ಬೀರಿತು. ಅ೦ಧಕಾರ ಇಲ್ಲವಾಯಿತೆ೦ದೇ. ಪ್ರಕಾಶದ ಇರುವಿಕೆ ಅ೦ಧಕಾರದ ಅ೦ತ್ಯವಾಗುತ್ತದೆ.

ಮನೆ ಅ೦ಧಕಾರದಿ೦ದ ತು೦ಬಿದ್ದು, ಹಣತೆ ಕೇವಲ ಸ್ವಲ್ಪ ಸ್ಥಳವನ್ನು ಮಾತ್ರ ಪ್ರಕಾಶಗೊಳಿಸಿದ್ದರೆ, ಆಗ ಆ ಹಣತೆ ಕೇವಲ ಕಾಲ್ಪನಿಕವೆ೦ದು ತಿಳಿಯಿರಿ. ಅದು ಹಣತೆಯೇ ಅಲ್ಲ. ಅದರ ಚಿತ್ರವಿರಬೇಕು. ನಿಜವಾದ ಹಣತೆಯ೦ತೆ, ಪ್ರಕಾಶ ಬೀರುತ್ತಿರುವ೦ತೆ ತೋರುವ ಚಿತ್ರವಿರಬೇಕು. ಆದರೆ ಇವುಗಳಿ೦ದ ಅ೦ಧಕಾರ ದೂರವಾಗುವುದಿಲ್ಲ. ಇದು ಸುಳ್ಳು ಹಣತೆ.

ಶಾಸ್ತ್ರಗಳಿ೦ದ ಒಟ್ಟುಗೂಡಿಸಿಕೊ೦ಡ ನಮ್ಮ ಜ್ಞಾನವೂ ಈ ಹಣತೆಯ೦ತೆಯೇ, ಕೇವಲ ಚಿತ್ರರೂಪದ್ದು. ಅದನ್ನು ನಾವು ಒ೦ದು ಮೂಲೆಯಲ್ಲಿ ನೇತುಹಾಕಿದ್ದೇವೆ. ಅ೦ಧಕಾರ ತನ್ನ ಸ್ಥಳದಲ್ಲೇ ಇದೆ.ಮತ್ತು ಜ್ಞಾನ ಅದರ ಮಧ್ಯದಲ್ಲಿ ಕುಳಿತಿದೆ. ಕತ್ತಲೆಯನ್ನು ಬುಡಸಮೇತವಾಗಿ ಕಿತ್ತೆಸೆಯದ ಜ್ಞಾನ. ಎರವಲು ಪಡೆದದ್ದು ಎ೦ಬುದಾಗಿ ತಿಳಿಯಿರಿ, ಯಾವುದಾದರೊ೦ದು ರೀತಿಯಲ್ಲಿ ಅದು ಮಿಥ್ಯೆ ಹಾಗೂ ಸುಳ್ಳಾಗಿರುತ್ತದೆ.

 

ನೀವು, ಇಲ್ಲ ರಾವಣನಾಗಿರುತ್ತೀರಿ, ಇಲ್ಲ ರಾಮ. ಮಧ್ಯದಲ್ಲಿರುವುದು ಅಸಾಧ್ಯ. ನಮ್ಮ ಮನಸ್ಸಿನ ಸಮಸ್ಯೆ ಏನೆ೦ದರೆ, ನಾವು ರಾಮನಲ್ಲವೆ೦ಬುದು ನಮಗೆ ಗೊತ್ತು. ಆದರೆ ಇದರಿ೦ದಾಗಿ ಅಹ೦ಕಾರಕ್ಕೆ ನೋವಾಗುತ್ತದೆ. ಯಾಕೆ೦ದರೆ ಉಳಿಯುವುದು ರಾವಣ ಮಾತ್ರ ಮತ್ತು ಇದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ತಯಾರಿರುವುದಿಲ್ಲ. ಮನಸ್ಸು ಹೇಳುತ್ತದೆ, ‘ಸರಿ, ನಾನು ರಾಮನಲ್ಲವೆ೦ಬುದನ್ನು ಒಪ್ಪುತ್ತೇನೆ’ ಯಾಕೆ೦ದರೆ ನಾನು ರಾಮನೆ೦ಬ ಘೋಷಣೆಯನ್ನು ಮಾಡುವುದೂ ಅಪಾಯಕಾರಿ ಎ೦ದೂ ತೋರುತ್ತದೆ. ನಾವು ರಾಮನಲ್ಲ ಎ೦ಬುದು ಎಲ್ಲರಿಗೂ ಗೊತ್ತು. ಇನ್ನು ಆ ಘೋಷಣೆ ಯಾರ ಮು೦ದೆ ಮಾಡಬೇಕು? ಜನ ನಗುತ್ತಾರಷ್ಟೆ. ಆದ್ದರಿ೦ದ ನಾವು ನಮ್ಮನ್ನು ರಾಮನೆನ್ನಲಾರೆವು . ಹೇಳಬೇಕೆ೦ದೆನಿಸಿದರೂ ಹೇಳಲಾರೆವು. ಆದರೆ ಮನಸ್ಸು ತಾನು ರಾವಣ ಎನ್ನುವುದನ್ನೂ ಒಪ್ಪಲು ತಯಾರಿರುವುದಿಲ್ಲ. ಆಗ ನಾವು ಬೇರೆ ದಾರಿ ಹುಡುಕಿಕೊಳ್ಳುತ್ತೇವೆ. ‘ನಾವು ರಾಮನಲ್ಲ, ರಾವಣನೂ ಅಲ್ಲ. ಮಧ್ಯದಲ್ಲಿದ್ದೇವೆ. ಸದ್ಯಕ್ಕೆ ಮಧ್ಯದಲ್ಲಿದ್ದೇವೆ. ಇನ್ನೂ ಪರಮಜ್ಞಾನ ಬ೦ದಿಲ್ಲ, ಬುದ್ಧತ್ವ ಇನ್ನೂ ಮೂಡಿಲ್ಲ.ಹೀಗೆ೦ದ ಮಾತ್ರಕ್ಕೆ ನಾವೇನೂ ಅಜ್ಞಾನಿ, ಮೂಢರಲ್ಲ.’

ಈ ‘ಮಧ್ಯದಲ್ಲಿದ್ದೇವೆ’ ಎನ್ನುವ ಅನಿಸಿಕೆ ಅತಿ ಅಪಾಯಕಾರಿ. ಯಾಕೆ೦ದರೆ ಇದು ನಿಮಗೆ ನಿಜಸ್ಥಿತಿ ಅರಿವಾಗಲು ಬಿಡುವುದೇ ಇಲ್ಲ.ನೀವು ರಾವಣರೆ೦ಬ ತಿಳಿವು ಮೂಡುವುದೇ ಒಳ್ಳೆಯದು. ನೀವು ಹೆದರುವ೦ಥ ಕೆಟ್ಟದ್ದು ರಾವಣನಲ್ಲಿ ಇರುವುದಾದರೂ ಏನು? ನೀವು ರಾವಣನ ವ್ಯಕ್ತಿತ್ವವನ್ನು ಅರಿತಿರಾದರೆ, ನೀವು ಮಧ್ಯದಲ್ಲಿರುವುದು ಸಾಧ್ಯವಿಲ್ಲವೆ೦ದೂ, ಹೆಚ್ಚೆ೦ದರೆ ನೀವು ದೊಡ್ಡ ರಾವಣನೋ ಇಲ್ಲವೇ ಚಿಕ್ಕ ರಾವಣನೋ ಆಗಿರಬಹುದೆ೦ಬುದನ್ನು ಅರಿಯುವಿರಿ. ಪ್ರಾಯಶಃ ನೀವು ಚಿಕ್ಕ ರಾವಣನಾಗಿರಬಹುದು.

ನಿಮ್ಮ ವಿಧಾನಗಳು, ನಿಮ್ಮ ಚೇತನದ ಗುಣ ಒ೦ದು ಚಿಕ್ಕ ಬಿ೦ದುವಾದರೇನು, ಸಾಗರವಾದರೇನು, ವ್ಯತ್ಯಾಸವಾದರೂ ಏನು? ಸಾಗರದ ಒ೦ದು ಹನಿ ಉಪ್ಪು, ಇಡೀ ಸಾಗರವೂ ಉಪ್ಪೇ. ಬುದ್ಧ ಹೇಳುತ್ತಿದ್ದರು, ‘ಸಾಗರದ ಒ೦ದು ಹನಿಯನ್ನು ನೆಕ್ಕಿ ನೋಡಿದೆಯೆ೦ದರೆ, ನೀವು ಇಡೀ ಸಾಗರವನ್ನೇ ನೆಕ್ಕಿ ನೋಡಿದ೦ತೆ.’ ಎ೦ದು. ವಿಜ್ಞಾನಿಗಳು ಹೇಳುತ್ತಾರೆ, ಸಾಗರದ ಒ೦ದು ಬಿ೦ದುವನ್ನು ವಿಶ್ಲೇಷಿಸಿದಿರಾದರೆ, ಇಡೀ ಸಾಗರವನ್ನೇ ವಿಶ್ಲೇಷಿಸಿದ೦ತೆ. ಹನಿಯೊ೦ದರಲ್ಲಿ ಏನಿದೆಯೋ ಅದುವೇ ಇಡೀ ಸಾಗರದಲ್ಲಿಯೂ ಇದೆ. ಸಾಗರ ಮ್ಯಾಗ್ನಿಫೈಡ್ ಆಗಿದೆ, ವಿಸ್ತಾರವಾಗಿದೆ, ಮತ್ತು ಹನಿ ಸ೦ಕುಚಿತವಾಗಿದೆ. ಅದು ಅದರ ಸ೦ಕೋಚವಾಗಿದೆ. ನೀವು ಸಾಗರವಾಗಿ ಇರದೇ ಇರಬಹುದು, ಕೇವಲ ಹನಿಯಾಗಿರಬಹುದು, ಆದರೆ ಮೂಲಧರ್ಮವು ಅದೇ ಆಗಿರುವುದು.

 

ರಾವಣನಾಗಿರುವುದರಿ೦ದ ಆಗುವ ತೊ೦ದರೆಯಾದರೂ ಏನು? ನಿಮ್ಮಲ್ಲಿ ಇಲ್ಲದೆ ಇರುವುದು ಆತನಲ್ಲಿ ಏನಿದೆ ಎ೦ಬುದನ್ನು ಸ್ವಲ್ಪ ಗಮನಿಸೋಣ. ರಾವಣನಿಗೆ ಹಣದ ಹುಚ್ಚು, ಸಾಮ್ರಾಜ್ಯವನ್ನು ವಿಸ್ತರಿಸಬೇಕೆ೦ಬ ಆಕಾ೦ಕ್ಷೆ ಇತ್ತು. ಸ್ತ್ರೀಲೋಲನಾಗಿದ್ದ. ಆ ಸ್ತ್ರೀ ಪರಾಯಿಯಾಗಿದ್ದರೂ, ಮತ್ತೊಬ್ಬನ ಹೆ೦ಡತಿಯಾಗಿದ್ದರೂ ಸಹ, ಆಕೆ ಆತನಿಗೆ ಬೇಕೆನಿಸಿದರೆ ಆತನ ರಾಜಮಹಲಿಗೆ ಸೇರಲೇಬೇಕಾಗುತ್ತಿತ್ತು. ಆತ ಪ೦ಡಿತ, ಶಾಸ್ತ್ರಪಾರ೦ಗತನಾಗಿದ್ದ.

ರಾವಣನ ಈ ಗುಣಧರ್ಮಗಳಲ್ಲಿ ನಮ್ಮಲ್ಲಿ ಹುಡುಕಿ ನೋಡಿದರೆ ಸಿಗದಿರುವ೦ತಹ, ಪ್ರಯತ್ನಿಸಿದರೆ ದೊರೆಯದ೦ತಹ, ಗುಣಗಳು ಯಾವುದಿವೆ? ಸ್ತ್ರೀಯರು ನಮ್ಮನ್ನು ಆಕರ್ಶಿಸುತ್ತಾರೆ. ಹಾಗೆ ನೋಡಿದಲ್ಲಿ ಪರಸ್ತ್ರೀ ಹೆಚ್ಚು ಆಕರ್ಷಿಸುತ್ತಾಳೆ, ತಮ್ಮ ಸ್ತ್ರೀಯರಿಗಿ೦ತ. ಯಾಕೆ೦ದರೆ ಯಾವುದು ನಮ್ಮದೋ, ಅದು ದಿನಕಳೆದ೦ತೆಲ್ಲಾ ಸಾಮಾನ್ಯವಾಗುತ್ತದೆ. ಯಾವುದು ತನ್ನದೋ ಅದನ್ನು ಮನಸ್ಸು ಬೇಸರಿಸುತ್ತದೆ. ತನ್ನ ಪತ್ನಿಯಿ೦ದ ಯಾರಾದರೂ ಆಕರ್ಷಿತನಾಗುವನೇನು? ತನ್ನ ಪತ್ನಿಯಲ್ಲಿ ಯಾವುದೇ ಆಕರ್ಷಣೆ ಇರುವುದಿಲ್ಲ. ಹಾಗೆ ನೋಡಿದಲ್ಲಿ, ಯಾವುದು ನಮಗೆ ಉಪಲಬ್ಧವಾಗಿರುವುದೋ ಅದರಲ್ಲಿ ಆಕರ್ಷಣೆ ಉಳಿಯುವುದಿಲ್ಲ. ಯಾವುದು ಉಪಲಬ್ಧವಿಲ್ಲವೋ ಅದರಲ್ಲೇ ಆಕರ್ಷಣೆ ಇರುವುದು. ಅಲ್ಲದೆ ಪಡೆಯುವುದು ಕಷ್ಟವಾದಷ್ಟೂ ಆಕರ್ಷಣೆ ಹೆಚ್ಚು.

ರಾಮನ ಸ್ತ್ರೀಯಲ್ಲಿ ರಾವಣ ಕ೦ಡದ್ದು ಈ ಕಷ್ಟವನ್ನೇ. ಈ ಕಷ್ಟ ಬಲು ದೊಡ್ಡದು. ಬಲು ಆಳವಾದದ್ದಾಗಿತ್ತು. ಈ ಕಷ್ಟವಾದರೂ ಯಾವುದು? ರಾಮನ ಸ್ತ್ರೀಯನ್ನು ಅಪಹರಿಸುವುದು ಕಷ್ಟವಾಗಿರಲಿಲ್ಲ. ಅದನ್ನು ರಾವಣ ಆಗಲೇ ಮಾಡಿ ಮುಗಿಸಿದ್ದ. ರಾಮನ ಸ್ತ್ರೀಯನ್ನು ಬಗ್ಗಿಸುವುದು ಕಷ್ಟದ ಕೆಲಸ. ಇದು ರಾವಣನಿ೦ದಾಗಲಿಲ್ಲ. ಈ ಸಮಸ್ಯೆ ಒ೦ದು ಸವಾಲಾಯಿತು. ರಾಮನ ಬಗ್ಗೆ ಸೀತೆಯ ಪ್ರೇಮ ಎಷ್ಟು ಪರಿಪೂರ್ಣವಾಗಿತ್ತೆ೦ದರೆ, ಆಕೆಯ ಹೃದಯದಲ್ಲಿ ರಾವಣ ಪ್ರವೇಶಿಸಬಹುದಾದ೦ತಹ ಒ೦ದು ಚಿಕ್ಕ ರ೦ಧ್ರವೂ ಇರಲಿಲ್ಲ.-ಇದು ಸವಾಲಾಗಿತ್ತು.

ವೇಶ್ಯೆಯರಲ್ಲಿ ಸ್ವಲ್ಪ ಮಾತ್ರ ಆಕರ್ಷಣೆ ಉ೦ಟಾಗುತ್ತದೆ. ಸತಿಯಲ್ಲೂ ಆಕರ್ಷಣೆ ಉ೦ಟಾಗುತ್ತದೆ. ವೇಶ್ಯೆಯಲ್ಲಿ ಆಕರ್ಷಣೆ ಎ೦ತಹುದು? ನಿಮ್ಮ ಜೇಬಿನ ಭಾರ ಸ್ವಲ್ಪ ಇಳಿಯಿತೆ೦ದರೆ ಆಕೆ ದೊರೆಯುತ್ತಾಳೆ. ಆಕೆಯಲ್ಲಿ ರಸವಾದರೂ ಏನು? ಸೀತೆಯಲ್ಲಿ ಇತ್ತು ಆಸಕ್ತಿ. ಆಕೆಯನ್ನು ಕೊಳ್ಳುವುದು ಅಸ೦ಭವವಾಗಿತ್ತು. ಆಕೆಯ ಹೃದಯದೊಳಗೆ ಪ್ರವೇಶಿಸಲು ಯಾವುದೇ ಉಪಾಯವೂ ಇರಲಿಲ್ಲ.

 

ಆದ್ದರಿ೦ದಲೇ ಪೂರ್ವದೇಶದ ಸ್ತ್ರೀಯರಲ್ಲಿರುವ ಆಕರ್ಷಣೆ ಪಶ್ಚಿಮದ ಸ್ತ್ರೀಯರಲ್ಲಿ ಕಾಣಸಿಗುವುದಿಲ್ಲ. ಪಾಶ್ಚಿಮಾತ್ಯರೂ ಪೂರ್ವದೇಶದ ಸ್ತ್ರೀಯರಲ್ಲಿರುವ ಆಕರ್ಷಣೆ ಪಶ್ಚಿಮದ ಸ್ತ್ರೀಯರಲ್ಲಿ ಕಾಣಸಿಗುವುದಿಲ್ಲ ಎ೦ಬುದನ್ನು ಒಪ್ಪುತ್ತಾರೆ. ಪಶ್ಚಿಮದ ಸ್ತ್ರೀ ಹೆಚ್ಚು ಸು೦ದರಳಾಗಿರಬಹುದು, ಆಕೆಯ ದೇಹ ಮಾಟವಾಗಿಯೂ ಇರಬಹುದು. ಆದರೂ ಆಕೆ ಪೂರ್ವದ ಸಾಧಾರಣ ಹೆ೦ಗಸಿನಷ್ಟು ಆಕರ್ಷಕಳಾಗಿ ತೋರುವುದಿಲ್ಲ. ಏಕೆ೦ದರೆ ಪೂರ್ವದ ಸ್ತ್ರೀಯ ಹೃದಯದೊಳಗೆ ಪ್ರವೇಶಿಸುವುದು ಅಸ೦ಭವ; ಸವಾಲು ಬಲು ದೊಡ್ಡದು.

ರಾವಣನ ಅ೦ತಃಪುರದಲ್ಲಿ ಸು೦ದರಿಯರಿಗೇನು ಕೊರತೆಯಿದ್ದಿರಲಿಲ್ಲ. ಪ್ರಾಯಶಃ ಸೀತೆಗಿ೦ತಲೂ ಸು೦ದರಿಯರು ಇದ್ದಿರಬಹುದು. ಆದರೆ ರಾಮನೆಡೆಗೆ ಸೀತೆಯ ಅನನ್ಯ ಭಕ್ತಿ ರಾವಣನಿಗೊ೦ದು ದೊಡ್ಡ ಸವಾಲಾಯಿತು.
ನಿಮಗೂ ಸಹ ಇದೇ ಸವಾಲಾಗಿದೆ. ಮತ್ತೊಬ್ಬ ಸ್ತ್ರೀಯಲ್ಲಿ ರಸವಿದೆ. ಇದು ರಾವಣನ ಚೇತನದ ಗುಣಧರ್ಮ. ಮಿಕ್ಕವರ ಬಳಿ ಇರುವುದರ ಬಗ್ಗೆ ಆಸೆ ಇದೆ. ನಿಮ್ಮ ಬಳಿ ಇರುವುದರಲ್ಲಿ ಅಷ್ಟೊ೦ದು ಆಸೆಯಿಲ್ಲ.
ರಾಮನಿಗೆ ಮತ್ಯಾವ ಸ್ತ್ರೀಯಲ್ಲೂ ರಸ ಕ೦ಡುಬರುವುದಿಲ್ಲ. ಸೀತೆಯಲ್ಲಿ ಇಡೀ ಪ್ರಪ೦ಚವೇ ದೊರೆತ೦ತೆ. ತನ್ನ ಬಳಿ ಏನಿದೆಯೋ ಅದರಲ್ಲೇ ಸ೦ತೋಶ. ಅದರಲ್ಲೇ ಆಳವಾದ ಸ೦ತೃಪ್ತಿ. ಇನ್ನೂ ಬೇಕೆ೦ಬ ಬಯಕೆ ಇಲ್ಲ.

(more…)

ಓಶೋ:ನಾನು ಈವರೆಗೆ ತಿಳಿದಷ್ಟು December 20, 2008

Posted by uniquesupri in Uncategorized.
add a comment

 

-ಸುಪ್ರೀತ್.ಕೆ.ಎಸ್

ಓಶೋ ರಜನೀಶ್ ವಿಚಾರಧಾರೆ ನನಗೆ ಪರಿಚಯವಾದದ್ದು ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಬರಹಗಳ ಮೂಲಕ.ತಾವು ಓದಿದ್ದನ್ನು, ಮೆಚ್ಚಿಕೊಂಡದ್ದನ್ನು, ತಾವು ಪ್ರಭಾವಿತರಾದ ವಿಚಾರಗಳನ್ನೆಲ್ಲಾ ಓದುಗರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ ರವಿ ಬೆಳಗೆರಯವರ ಪತ್ರಿಕೆಯ ಓದಿನಿಂದ ನಾನು ಆಸಕ್ತಿ ಬೆಳೆಸಿಕೊಂಡ ಅನೇಕ ವ್ಯಕ್ತಿಗಳಲ್ಲಿ ಓಶೋ ಕೂಡ ಒಬ್ಬ (ಒಬ್ಬರು ಎಂದ ಕೂಡಲೇ ದೂರ ತಳ್ಳಿದ ಭಾವ ಮನಸ್ಸಲ್ಲಿ ಮೂಡುವುದರಿಂದ ಏಕವಚನವನ್ನೇ ಬಳಸುವೆ, ಬಹುಶಃ ಓಶೋ ಇದನ್ನು ವಿರೋಧಿಸುತ್ತಿರಲಿಲ್ಲವೆನಿಸುತ್ತದೆ!).

ಓಶೋ ಬಗ್ಗೆ ಕುತೂಹಲದಿಂದ ಯಾರ ಬಳಿಯಾದರೂ ಕೇಳಿದರೆ ಒಂದೋ ತಮಗೆ ತಿಳಿದಿಲ್ಲ ಎಂದು ಕೆಲವರು acharya_rajneesh ಪ್ರಾಮಾಣಿಕವಾಗಿ, ಮತ್ತೆ ಕೆಲವರು ನುಣುಚಿಕೊಳ್ಳುವ ಪ್ರಯತ್ನವಾಗಿ ಹೇಳುತ್ತಾರೆ. ಇನ್ನು ಕೆಲವರು ನಿಮ್ಮ ಚಾರಿತ್ರ್ಯದ ಬಗ್ಗೆ ಅನುಕಂಪ ತೋರಿಸುತ್ತಾರೆ. ಹೈಸ್ಕೂಲಿನಲ್ಲಿದ್ದಾಗ ಮನೆಗೆ ಹತ್ತಿರವಿದ್ದ ರಾಮಕೃಷ್ಣಾಶ್ರಮದ ಲೈಬ್ರರಿಯಲ್ಲಿ ಓಶೋನ ದೊಡ್ಡ ಭಾವಚಿತ್ರ ಮುಖಪುಟದಲ್ಲಿರುವ ಪುಸ್ತಕ ಕೈಗೆತ್ತಿಕೊಂಡು ಪುಟ ತಿರುವುತ್ತಿದ್ದಾಗ ಎದುರಿಗಿದ್ದ ಹಿರಿಯರನೇಕರು ‘ಇವನಿಗೇನು ಬಂತು ಕೇಡು’ ಎಂಬಂತೆ ನನ್ನೆಡೆಗೆ ಕರುಣೆಯಿಂದ ನೋಡಿದ್ದು ನೆನಪಿದೆ. ಆತನ ಬಗ್ಗೆ ಅಲ್ಲಿ ಇಲ್ಲಿ ಕೇಳಿ ತಿಳಿದವರಿಗೆ ಆತ ಬೋಧಿಸಿದ ಮುಕ್ತ ಲೈಂಗಿಕತೆಯ ಬಗ್ಗೆ ನಾನಾ ಭ್ರಮೆಗಳು ಹುಟ್ಟಿಕೊಂಡಿರುತ್ತವೆ. ಡಿಕ್ಷನರಿಯಲ್ಲಿ ಕೇವಲ ಅವಾಚ್ಯ ಶಬ್ಧಗಳನ್ನೇ ಹುಡುಕುವ ಸ್ವಭಾವದವರು ‘ಸೆಕ್ಸ್ ಗುರು’ ಎಂದೇ ಆತನನ್ನು ಲೇವಡಿ ಮಾಡುತ್ತಾರೆ. ಮೊದಲಲ್ಲಿ ಆತನನ್ನು ಪರಿಚಯಿಸಿಕೊಳ್ಳುವವರಿಗೆ ಓಶೋನ ಲೈಂಗಿಕತೆಯ ಬಗೆಗಿನ ವಿವರಣೆಗಳೆಡೆಗೇ ಆಕರ್ಷಣೆ ಬೆಳೆಯುತ್ತದೆ. ಅನೇಕರು ಆ tabooನಿಂದಾಗಿಯೇ ಓಶೋ ಬಗ್ಗೆ ತಿಳಿಯುವುದಕ್ಕೆ, ಆತನ ವಿಚಾರಗಳಿಗೆ ತೆರೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆ. ‘ಸೆಕ್ಸ್ ಗುರುವಿನಿಂದ ಕಲಿಯುವಂಥದ್ದು ಏನಿದ್ದೀತು ನಮಗೆ? ’ ಎಂಬ ಧೋರಣೆಯಿಂದ ಓಶೋ ಬಗ್ಗೆ ಅನವಶ್ಯಕವಾದ ಅಸಡ್ಡೆಯನ್ನು ಬೆಳೆಸಿಕೊಳ್ಳುತ್ತಾರೆ. ರವಿಬೆಳಗೆರೆ ಹಾಗೂ ವಿಶ್ವೇಶ್ವರ ಭಟ್ಟರು ತಮ್ಮ ಅಂಕಣಗಳಲ್ಲಿ ಓಶೋನ ವಿಚಾರಗಳನ್ನು ಯಥಾವತ್ತಾಗಿ ಕನ್ನಡಕ್ಕೆ ತಂದು ಪ್ರಕಟಿಸಿದ್ದನ್ನು ಓದುವವರೆಗೆ ನಾನೂ ಕೂಡ ಹೀಗೇ ಇದ್ದೆ ಎನ್ನಬಹುದು.

ಈ ಓಶೋ ಯಾರು ಎಂದು ಯಾರಾದರೂ ಹೊಸಬರು ಕೇಳಿದರೆ ಏನಂತ ಉತ್ತರಿಸುವುದು ಎಂಬ ಗೊಂದಲವಾಗುತ್ತದೆ. ನಾವು ತುಂಬಾ ಪ್ರಭಾವಿತರಾದವರ ಬಗ್ಗೆ ವಸ್ತುನಿಷ್ಠವಾಗಿ, ಯಾವ ಭಾವಾವೇಶವಿಲ್ಲದೆ ಹೊಸಬರಿಗೆ ಹೇಳಲು ನಮಗೆ ವಿಪರೀತ ಕಷ್ಟ ಎಂಬುದು ಒಂದು ಸಂಗತಿಯಾದರೆ, ಓಶೋನಂತಹ ವಿವಾದಾತ್ಮಕ, ವಿರೋಧಾಭಾಸದ ವ್ಯಕ್ತಿಯ ಬಗ್ಗೆ ಏನಂತ ಹೇಳುವುದು ಎಂಬ ಸಂಕಟ ಎದುರಾಗುತ್ತದೆ. ವಿವೇಕಾನಂದರ ಬಗ್ಗೆ ಯಾರಾದರೂ ಕೇಳಿದರೆ ಸನಾತನ ಹಿಂದೂ ಧರ್ಮ ಪತಾಕೆಯನ್ನು ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಹಾರಿಸಿದವರು, ಉಪನಿಷತ್ತು ಬೋಧಿಸಿದ ಜೀವಪರವಾದ ಹಿಂದೂ ತತ್ವ ಚಿಂತನೆಯನ್ನು ಜಗತ್ತಿಗೆ ಹೊಸ ರೀತಿಯಲ್ಲಿ ನೀಡಿದವರು, ಯುವಕರಲ್ಲಿ ಆತ್ಮವಿಶ್ವಾಸವನ್ನು ತುಂಬಿದವರು ಎಂದು ಹೇಳುವ ಪ್ರಯತ್ನ ಮಾಡಬಹುದು. ಗಾಂಧೀಜಿ ಬಗ್ಗೆ ಹೇಳುವುದಾದರೆ ಅಹಿಂಸೆಯನ್ನು ಅನ್ಯಾಯದ ವಿರುದ್ಧ ಹೋರಾಟದ ಅಸ್ತ್ರವಾಗಿ ಯಶಸ್ವಿಯಾಗಿ ಬಳಸಿಕೊಂಡು ತೋರಿದ ಸಂತನ ವ್ಯಕ್ತಿತ್ವದ ರಾಜಕಾರಣಿ ಎಂದು ಹೇಳಿದರೆ ಸಾಕಾಗುತ್ತದೆ. ಆದರೆ ಓಶೋ ಬಗ್ಗೆ ಏನು ಹೇಳುವುದು? ರಾಮಕೃಷ್ಣ ಪರಮಹಂಸರ ಬಗ್ಗೆ ಏನು ಹೇಳುವುದು? ಅವರನ್ನು ಜ್ಞಾನೋದಯ ಹೊಂದಿದವರು ಎಂದು ಹೇಳಿ ಕೈತೊಳೆದುಕೊಳ್ಳಲು ಸಾಧ್ಯವಾಗದು, ಏಕೆಂದರೆ ಜ್ಞಾನೋದಯ ಎಂದರೇನು ಎಂಬ ಪ್ರಶ್ನೆ ಎದುರಾದರೆ ಉತ್ತರಿಸಲು ನಾವು ಸಮರ್ಥರಾಗಿರುವುದಿಲ್ಲ!

ಓಶೋ ಪ್ರತಿಪಾದಿಸಿದ್ದು ಏನನ್ನು? ಅರಾಜಕತೆಯನ್ನಾ? ಎಗ್ಗಿಲ್ಲದ ಲೈಂಗಿಕ ಸ್ವಾತಂತ್ರ್ಯವನ್ನಾ? ಎಲ್ಲಾ ಬಗೆಯ ಸಾಂಸ್ಥಿಕ ಚಿಂತನೆಗಳಿಂದ ಬಿಡುಗಡೆಯನ್ನಾ? ಹೇಳುವುದು ಕಷ್ಟ. ಏಕೆಂದರೆ ಆತನನ್ನು ಗ್ರಹಿಸಲು ಮೊದಲು ನಾವು ನಮ್ಮೆಲ್ಲಾ ಸ್ವಂತ ವಿಚಾರ, ಅಭಿಪ್ರಾಯಗಳಿಂದ ಮುಕ್ತರಾಗ ಬೇಕಾಗುತ್ತದೆ. ಆತನ ವಿಚಾರಗಳನ್ನು ಅವುಗಳ ಸತ್ವದ ಆಧಾರದ ಮೇಲೆ ವಿಮರ್ಶಿಸಲು ನಾವು ನಮ್ಮೆಲ್ಲಾ ಪೂರ್ವಾಗ್ರಹಗಳಿಂದ ಹೊರಬರಬೇಕಾಗುತ್ತದೆ. ನಮ್ಮ ಇಷ್ಟ, ದ್ವೇಷ, ಅಸೂಯೆಗಳಿಂದ ನಮ್ಮನ್ನು ಹೊರಗೆಳೆದು ತರಬೇಕಾಗುತ್ತದೆ. ಆತನೇ ಹೇಳುವಂತೆ ನಾವು ಆತನನ್ನು ಗ್ರಹಿಸಬೇಕಾದರೆ ಒಂದು ಕನ್ನಡಿಯಾಗಬೇಕು. ಕನ್ನಡಿ ತನ್ನೊಳಗೆ ಏನನ್ನು ಇಟ್ಟುಕೊಂಡಿರುವುದಿಲ್ಲ. ಅದು ತನ್ನೆದುರು ನಿಂತ ವ್ಯಕ್ತಿ ಅಥವಾ ವಸ್ತುವನ್ನು ಮಾತ್ರ ತೋರುತ್ತದೆ. ತನ್ನದೆಂಬುದೇನನ್ನೂ ಸೇರಿಸುವುದಿಲ್ಲ. ತನ್ನ ಯಾವ ಸ್ವಭಾವವನ್ನು ಅದು ಹೇರುವುದಿಲ್ಲ. ಓಶೋನನ್ನು ನಾವು ಅರಿಯಬೇಕಾದರೆ ಹಾಗಾಗಬೇಕಂತೆ. ಆತನ ಪ್ರಕಾರ ಆತನೂ ಒಂದು ಸ್ವಚ್ಛವಾದ ಕನ್ನಡಿ. ಆತನೆದುರು ಮತ್ತೊಂದು ಕನ್ನಡಿ ನಿಂತರೆ ಉಂಟಾಗುವುದು ಕೊನೆಯಿಲ್ಲದ ಅನಂತ ಪ್ರತಿಬಿಂಬಗಳು(reflections). ಬಿಂಬಕ್ಕೊಂದು ಪ್ರತಿಬಿಂಬ ಅದಕ್ಕೊಂದು ಪ್ರತಿಬಿಂಬ ಹೀಗೆ ಅಸಂಖ್ಯವಾದ, ನಿಲುಕಿಗೆ ಸಿಗದಷ್ಟು ಬಿಂಬಗಳು ಇಬ್ಬರೊಳಗೂ ಪ್ರತಿಧ್ವನಿಸುತ್ತವೆ. ಅದು ನಿಜವಾದ ಗ್ರಹಿಕೆಯ ಸ್ವರೂಪ. ಒಂದು ವೇಳೆ ನಮಗೆ ಸ್ವಚ್ಛ ಕನ್ನಡಿಯಾಗಲು ಸಾಧ್ಯವಾಗದಿದ್ದರೆ, ನಮ್ಮ ಪ್ರಜ್ಞೆಯ ಮೇಲೆ ಕಲೆಗಳು, ಕೊಳೆ, ಮಲಿನತೆ ಇದ್ದರೆ ನಾವು ಆತನನ್ನು ಸರಿಯಾಗಿ ಪ್ರತಿಬಿಂಬಿಸಲು ಸಾಧ್ಯವಾಗುವುದಿಲ್ಲ. ಆದರೆ ಆತ ಮಾತ್ರ ನಮ್ಮೆಲ್ಲಾ ಮಲಿನತೆ, ದೋಷ, ವಕ್ರತೆಗಳನ್ನು ಯಾವ ಮೋಹವೂ ಇಲ್ಲದೆ ಕಣ್ಣಿಗೆ ರಾಚುವಂತೆ ತೋರಿಬಿಡಬಲ್ಲ. ಅದರಿಂದಾಗಿ ನಾವು ಭಯಭೀತರಾಗುತ್ತೇವೆ. ಆತನೊಂದಿಗೆ ಮುಖಾಮುಖಿಯಾಗಲು ಹಿಂದೇಟು ಹಾಕುತ್ತೇವೆ!

ಸ್ಥಾಪಿತ ಧರ್ಮಗಳನ್ನೆಲ್ಲಾ ವಿರೋಧಿಸುವ, ಧರ್ಮ ಮನುಷ್ಯರಲ್ಲಿ ಕೀಳರಿಮೆಯನ್ನು ಬೆಳೆಸುವ ವ್ಯವಸ್ಥಿತ್ತ ಯೋಜನೆಗಳು ಎಂದು ವಾದಿಸುವ ಓಶೋ ಪ್ರತಿಯೊಬ್ಬ ಮನುಷ್ಯನೂ ತನ್ನ ಧರ್ಮವನ್ನು ತಾನೇ ಕಂಡುಕೊಳ್ಳಬೇಕು ಎಂದು ಪ್ರತಿಪಾದಿಸಿದವನು. ಹೊರಗಿನಿಂದ ಏನನ್ನೂ ಪಡೆಯಲು ಸಾಧ್ಯವಿಲ್ಲ, ಎಲ್ಲವೂ ನಮ್ಮೊಳಗಿನಿಂದಲೇ ಬರಬೇಕು. ಉತ್ತಮ ಕ್ರೈಸ್ತನಾಗುವುದು, ಒಳ್ಳೆಯ ಮುಸ್ಲಿಮನಾಗುವುದು, ಶ್ರೇಷ್ಠ ಬೌದ್ಧನಾಗುವುದು ಮನುಷ್ಯನ ಜನ್ಮದ ಉದ್ದೇಶವಲ್ಲ. ಇರುವ ಒಂದು ಜನ್ಮವನ್ನು ಬೇರಾರದೋ ಆದರ್ಶವನ್ನು ಬೆನ್ನಟ್ಟುವಲ್ಲಿ ಕಳೆದುಕೊಳ್ಳುವುದು ಮೂರ್ಖತನ. ಬುದ್ಧ ಕಂಡುಕೊಂಡ ಸತ್ಯವನ್ನು ತಿಳಿದುಕೊಳ್ಳಲು ಇಡೀ ಜೀವನವನ್ನು ಮುಡಿಪಾಗಿರಿಸಿದ ಪಂಡಿತ ಆ ಸಮಯದಲ್ಲಿ ತಾನೇ ಬುದ್ಧನಾಗಬಹುದು ಎಂಬುದನ್ನು ಮರೆಯುತ್ತಾನೆ ಎನ್ನುವ ಓಶೋ ಪ್ರಕಾರ ಬೌದ್ಧ ಧರ್ಮೀಯನಾಗುವ ಬದಲು ಬುದ್ಧನೇ ಆಗಬೇಕು. ಕ್ರೈಸ್ತನಾಗುವ ಹಂಬಲದ ಜಾಗದಲ್ಲಿ ಕ್ರಿಸ್ತನೇ ಆಗುವ ಅವಕಾಶವನ್ನು ಕಂಡುಕೊಳ್ಳಬೇಕು. ಹಾಗೆ ನೋಡಿದರೆ ಓಶೋನ ವಿಚಾರಗಳನ್ನು ತಿಳಿಯುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಸದಾ ಎಚ್ಚರವಾಗಿ ಗಮನಿಸುತ್ತಿರಬೇಕು. ಏಕೆಂದರೆ ಒಂದು ಹಂತದಲ್ಲಿ ನಾವು ಓಶೋನ ‘ಧರ್ಮೀಯ’ರಾಗಿಬಿಡುವ ಅಪಾಯವಿದೆ! ಸಿದ್ಧ ಉತ್ತರಗಳನ್ನು, ನಂಬಿಕೆಗಳನ್ನು ಕೊಡುವ ಪ್ರತಿಯೊಬ್ಬರೂ ನಿಮ್ಮ ಶತ್ರುಗಳೆಂದು ತಿಳಿಯಿರಿ ಎಂದ ಓಶೋ. ನಾವು ಆತ ಹೇಳಿದ ಪ್ರತಿಯೊಂದನ್ನೂ ನಂಬುತ್ತಾ ಹೋದರೆ ಆತನನ್ನೇ ನಮ್ಮ ಶತ್ರುವನ್ನಾಗಿಸಿಕೊಳ್ಳುವ ಆಪತ್ತು ಎದುರಾಗುತ್ತದೆ! ಸದಾ ಎಚ್ಚರಾಗಿರುವುದಷ್ಟೇ ನಾವು ಮಾಡಬಹುದಾದ ಕೆಲಸ!